
ನವದೆಹಲಿ, ಸೆಪ್ಟೆಂಬರ್ 10: ಭಾರತೀಯ ಕ್ರಿಕೆಟನ್ನು ದೇಶದ ಮೂಲೆ ಮೂಲೆಗೆ ತಲುಪಿಸುವತ್ತ ಬಿಸಿಸಿಐ ಮುಂದಡಿಯಿಟ್ಟಿದೆ. ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ಮಂಗಳವಾರ (ಸೆಪ್ಟೆಂಬರ್ 10) ತಾನು ಆಲ್ ಇಂಡಿಯಾ ರೇಡಿಯೋ (ಎಐಆರ್) ಜೊತೆ 2 ವರ್ಷಗಳ ರೇಡಿಯೋ ಹಕ್ಕುಗಳ ಒಪ್ಪಂದ ಮಾಡಿಕೊಂಡಿರುದಾಗಿ ಘೋಷಿಸಿದೆ.
ಬಿಸಿಸಿಐಯ ಈ ಕ್ರಮ ಭಾರತದಾದ್ಯಂತ ಇರುವ ಲಕ್ಷಾಂತರ ಮಂದಿಗೆ ದೇಸಿ ತಂಡ ಆಡುವ ಹೆಚ್ಚಿನ ಕ್ರಿಕೆಟ್ ಪಂದ್ಯಗಳ ಕಾಮೆಂಟರಿ ಆಲಿಸುವ ಅವಕಾಶವನ್ನು ಒದಗಿಸಲಿದೆ. ಭಾರತಕ್ಕೆ ಪ್ರವಾಸ ಕೈಗೊಳ್ಳಲಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯ ಮೊದಲ ಪಂದ್ಯದಿಂದಲೇ ದೇಸಿಗರು ರೇಡಿಯೋ ಕಾಮೆಂಟರಿ ಆಲಿಸಬಹುದು. ಮೊದಲ ಟಿ20 ಹಿಮಾಚಲ್ ಪ್ರದೇಶದ ಧರ್ಮಶಾಲಾದಲ್ಲಿ ಸೆಪ್ಟೆಂಬರ್ 15ರಂದು ನಡೆಯಲಿದೆ.
ಅಂತಾರಾಷ್ಟ್ರೀಯ ಪಂದ್ಯಗಳ ಜೊತೆಗೆ ಎಐಆರ್, ಮಹಿಳಾ ಮತ್ತು ಪುರುಷರು ಪಾಲ್ಗೊಳ್ಳುವ ಕೆಳಕಂಡ ದೇಸಿ ಟೂರ್ನಿಗಳ ಪಂದ್ಯಗಳ ಕಾಮೆಂಟರಿ ಕೂಡ ಪ್ರಸಾರಿಸಲಿದೆ. ಎಐಆರ್ ಜೊತೆಗಿನ ಬಿಸಿಸಿಐ ಒಪ್ಪಂದ 10 ಸೆಪ್ಟೆಂಬರ್ 2019ರಿಂದ ಆರಂಭಗೊಂಡು 31 ಆಗಸ್ಟ್ 2021ರಂದು ಕೊನೆಗೊಳ್ಳಲಿದೆ.
ರಣಜಿ ಟ್ರೋಫಿ ಫೈನಲ್, ದುಲೀಪ್ ಟ್ರೋಫಿ ಫೈನಲ್, ದೇವಧರ್ ಟ್ರೋಫಿ ಫೈನಲ್, ವಿಮೆನ್ಸ್ ಚಾಲೆಂಜ್ ಸೀರೀಸ್ 4 ಪಂದ್ಯಗಳು, ಸೈಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಸೂಪರ್ ಲೀಗ್, ಸೈಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಲೀಗ್-ಫೈನಲ್, ಇರಾನಿ ಟ್ರೋಫಿ (ಪುರುಷರು) ಫೈನಲ್ ಪಂದ್ಯಗಳ ಕಾಮೆಂಟರಿ ಬಾನುಲಿ ಮೂಲಕ ಪ್ರಸಾರವಾಗಲಿದೆ.