ಭಾರತ ಟಿ20 ವಿಶ್ವಕಪ್ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ. ಈಗ ಮುಂದಿನ ವರ್ಷ ನಡೆಯಲಿರುವ ಏಕದಿನ ವಿಶ್ವಕಪ್ ಮೇಲೆ ಭಾರತೀಯ ಕ್ರಿಕೆಟ್ ನಿಯಂತ್ರಣಾ ಮಂಡಳಿ (ಬಿಸಿಸಿಐ) ಚಿತ್ತ ನೆಟ್ಟಿದೆ. ಈ ವಿಶ್ವಕಪ್ಗಾಗಿ ಬಿಸಿಸಿಐ 20 ಆಟಗಾರರ ಸಂಭಾವ್ಯ ತಂಡವನ್ನು ಆಯ್ಕೆ ಮಾಡಿದೆ. ಮಾರ್ಚ್ 28 ರಂದು ಆರಂಭವಾಗಲಿರುವ 19ನೇ ಆವೃತ್ತಿಯ ಐಪಿಎಲ್ ವೇಳೆ ಆಯ್ಕೆದಾರರ ಈ ಆಟಗಾರರ ಮೇಲೆ ಒಂದು ಚಿತ್ತ ನೆಟ್ಟಿರಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಅಜಿತ್ ಅಗರ್ಕರ್ ನೇತೃತ್ವದ ಸಮಿತಿಯಲ್ಲಿ ಎಸ್.ಎಸ್. ದಾಸ್, ಆರ್.ಪಿ. ಸಿಂಗ್, ಅಜಯ್ ರಾತ್ರ ಮತ್ತು ಪ್ರಗ್ಯಾನ್ ಓಜಾ ಸೇರಿದ್ದು, ಈ ಸಮಿತಿ ಆಟಗಾರರ ಮೇಲೆ ನಿಗಾ ವಹಿಸಲಿದೆ. ಮುಂದಿನ ವರ್ಷದ ಅಕ್ಟೋಬರ್ನಲ್ಲಿ ಏಕದಿನ ವಿಶ್ವಕಪ್ನ್ನು ದಕ್ಷಿಣ ಆಫ್ರಿಕಾ ಆಯೋಜಿಸಲಿದೆ. ಆಯ್ಕೆ ಸಮಿತಿ ಆಟಗಾರರ ಆಟದ ಮೇಲೆ ಚಿತ್ತ ನೆಡಲಿದೆ. ಈ ವೇಳೆ ಪಂದ್ಯಗಳು ನಡೆಯಲಿರುವ ಮೈದಾನದಲ್ಲಿ ಆಯ್ಕೆದಾರರ ಹಾಜರಿರಬಹುದು. ಇಲ್ಲವೇ ಟಿವಿ ವೀಕ್ಷಿಸಲಿದ್ದಾರೆ.

ಅಗರ್ಕರ್ ಮುಂಬೈನಲ್ಲಿ, ದಾಸ್ ಕೋಲ್ಕತ್ತಾದಲ್ಲಿ, ಆರ್.ಪಿ. ಸಿಂಗ್ ದೆಹಲಿಯಲ್ಲಿ, ಓಜಾ ಬೆಂಗಳೂರು ಮತ್ತು ಹೈದರಾಬಾದ್ನಲ್ಲಿ ಪಂದ್ಯಗಳನ್ನು ವೀಕ್ಷಿಸುವ ನಿರೀಕ್ಷೆಯಿದೆ. ಇನ್ನು ಆಯ್ಕೆದಾರರು ವಾರಕ್ಕೆ ಕನಿಷ್ಠ ಒಂದು ಪಂದ್ಯವನ್ನಾದರೂ ನೋಡುವಂತೆ ಬಿಸಿಸಿಐ ಸೂಚಿಸಿದೆ. ಬಿಸಿಸಿಐ ಆಯ್ಕೆ ಸಮಿತಿ 2028ರಲ್ಲಿ ನಡೆಯಲಿರುವ ಒಲಿಂಪಿಕ್ಸ್ ಹಾಗೂ ಏಕದಿನ ವಿಶ್ವಕಪ್ ದೃಷ್ಟಿಯಿಂದ ಆಟಗಾರರ ಮೇಲೆ ನಿಗವಾಹಿಸಲಿದೆ.
ವೇಗದ ಬೌಲರ್ಗಳ ಮೇಲೆ ಆಯ್ಕೆದಾರರು ನಿಗಾವಹಿಸಲಿದ್ದಾರೆ. ಈ ವೇಳೆ ನಾಲ್ವರು ವೇಗದ ಬೌಲರ್ಗಳಾದ ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ ಮತ್ತು ಅರ್ಶ್ದೀಪ್ ಸಿಂಗ್ ಸಂಭಾವ್ಯ ತಂಡದಲ್ಲಿದ್ದಾರೆ ಎಂದು ತಿಳಿದು ಬಂದಿದೆ. ಇನ್ನು ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಸಹ ತಂಡದ ಭಾಗವಾಗಿದ್ದಾರೆ. ಹರ್ಷಿತ್ ರಾಣಾ ಅವರ ಫಿಟ್ನೆಸ್ ಮೇಲೆ ತಂಡ ಗಮನ ಹರಿಸಿದೆ.
ಈ ಬಾರಿಯ ಐಪಿಎಲ್ ಮಾರ್ಚ್ 28 ರಂದು ಬೆಂಗಳೂರಿನ ಐಕಾನಿಕ ಎಂ ಚಿನ್ನಸ್ವಾಮಿ ಮೈದಾನದಲ್ಲಿ ಆರಂಭವಾಗಲಿದೆ. ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಸನ್ರೈಸರ್ಸ್ ಹೈದರಾಬಾದ್ ತಂಡಗಳು ಕಾದಾಟ ನಡೆಸಲಿವೆ.