ಕೊರೊನಾ ವೈರಸ್ನ ಕಾರಣದಿಂದಾಗಿ ಕ್ರಿಕೆಟ್ ಸಂಪೂರ್ಣವಾಗಿ ಸ್ಥಬ್ಧವಾಗಿ ನಾಲ್ಕು ತಿಂಗಳೇ ಆಗಿದೆ. ಈ ಮಧ್ಯೆ ಕೆಲ ದೇಶಗಳು ತರಬೇತಿಯನ್ನು ಆರಂಭಿಸಿದರೆ ಕೆಲ ತಂಡಗಳು ಅಂತಾರಾಷ್ಟ್ರೀಯ ಕ್ರಿಕೆಟ್ ಸರಣಿಗೆ ಸಜ್ಜಾಗಿದೆ. ಆದರೆ ಭಾರತೀಯ ಕ್ರಿಕೆಟ್ಗೆ ಸದ್ಯಕ್ಕೆ ಪುನರಾರಂಭವಾಗುವ ಲಕ್ಷಣ ಗೋಚರಿಸುತ್ತಿಲ್ಲ. ಇದನ್ನು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಖಚಿತಪಡಿಸಿದ್ದಾರೆ.
ಈ ಮುನ್ನ ಬಂದ ವರದಿಯ ಪ್ರಕಾರ ಜುಲೈ ತಿಂಗಳಲ್ಲಿ ಟೀಮ್ ಇಂಡಿಯಾ ಆಟಗಾರರ ತರಬೇತಿ ಶಿಬಿರವನ್ನು ಹಮ್ಮಿಕೊಳ್ಳುವ ನಿರ್ಧಾರವನ್ನು ಮಾಡಲಾಗಿತ್ತು. ಅದಕ್ಕಾಗಿ ಟೀಮ್ ಇಂಡಿಯಾ ಕ್ರಿಕೆಟಿಗರು ಕೂಡ ಸಜ್ಜಾಗಿದ್ದರು. ವರ್ಷಾಂತ್ಯದಲ್ಲಿ ನಡೆಯಲಿರುವ ಆಸ್ಟ್ರೇಲಿಯಾ ಪ್ರವಾಸಕ್ಕೆ ಟೀಮ್ ಇಂಡಿಯಾ ಸಜ್ಜಾಗಲು ಸಿದ್ದವಾಗುತ್ತಿತ್ತು. ಆದರೆ ಎಬಿಪಿ ನ್ಯೂಸ್ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಆಗಸ್ಟ್ಗೆ ಮುನ್ನ ತರಬೇತಿ ಶಿಬಿರ ಅಸಾಧ್ಯ ಎಂದಿದ್ದಾರೆ ಎಂದು ವರದಿ ಮಾಡಿದೆ.
ತೆಂಡೂಲ್ಕರ್ ಪುತ್ರ ಅರ್ಜುನ್ ವಿರುದ್ಧ ನಂಜು ಕಾರಿದ್ದ ನೆಟ್ಟಿಗರ ಬಣ್ಣ ಬಯಲು!
ಇದಕ್ಕೂ ಮುನ್ನ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಕೂಡ ಇದೇ ದಾಟಿಯಲ್ಲಿ ಮಾತನಾಡಿದ್ದರು. ಯಾವಾಗ ಹೊರಾಂಗಣ ಕ್ರೀಡಾಂಗಣದಲ್ಲಿ ತರಬೇತಿಯನ್ನು ಆರಂಭಿಸುವುದು ಸಂಪೂರ್ಣ ಸುರಕ್ಷಿತ ಎಂಬುದು ಖಾತ್ರಿಯಾಗುತ್ತದೋ ಆ ನಂತರವೇ ತರಬೇತಿ ಆರಂಭವಾಗಲಿದೆ. ಸರ್ಕಾರ ತೆಗೆದುಕೊಳ್ಳುವ ನಿರ್ಧಾರಗಳಿಗೆ ಪೂರಕವಾಗಿಯೇ ಬಿಸಿಸಿಐ ತನ್ನ ನಿರ್ಧಾರಗಳನ್ನು ತೆಗೆದುಕೊಳ್ಳಲಿದೆ ಎಂದು ಶಾ ಹೇಳಿದ್ದರು.
ಸ್ಪೊರ್ಟ್ಸ್ಕೀಡಾ ವೆಬ್ಸೈಟ್ಗೆ ನೀಡಿದ್ದ ಸಂದರ್ಶನದಲ್ಲಿ ಈ ಹಿಂದೆ ಸೌರವ್ ಗಂಗೂಲಿ ಮಾತನಾಡಿದ್ದ ವೇಳೆ ಮಂಡಳಿ ಐಪಿಎಲ್ ನಡೆಸುವ ಕುರಿತಾಗಿ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವ ಸ್ಥಿತಿಯಲ್ಲಿ ಇಲ್ಲ ಎಂದಿದ್ದರು. ಜೊತೆಗೆ ಐಪಿಎಲ್ ಆರಂಭಿಸುವ ಬಗ್ಗೆ ಮಾತನಾಡುತ್ತಾ ಪ್ರೇಕ್ಷಕರಿಲ್ಲದೆ ನಡೆಸುವ ಸಾಧ್ಯತೆಯನ್ನು ವಿವರಿಸಿದ್ದರು.
ಧೋನಿ ಓರ್ವ ತ್ವರಿತ ಸಲಹೆಗಾರ, ಆದರೆ ವಿರಾಟ್ ಕೊಹ್ಲಿ..: ಕುಲ್ದೀಪ್ ಯಾದವ್
ಸದ್ಯ ಐಸಿಸಿ ಟಿ20 ವಿಶ್ವಕಪ್ ನಡೆಸುವ ಬಗ್ಗೆ ಇನ್ನೂ ತೀರ್ಮಾನವನ್ನು ತೆಗೆದುಕೊಂಡಿಲ್ಲ. ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ವಿಶ್ವಕಪ್ ಹಾಗೂ ಐಪಿಎಲ್ಗಾಗಿ ಮುಸುಕಿನ ಗುದ್ದಾಟ ನಡೆಯುತ್ತಿರುವುದು ಸುಳ್ಳಲ್ಲ. ಆದರೆ ಕೊರೊನಾ ವೈರಸ್ನ ಪರಿಣಾಮ ಭಾರತದಲ್ಲಿ ಹೆಚ್ಚಾಗುತ್ತಲೇ ಇರುವುದು ಎಲ್ಲದಕ್ಕೂ ಆತಂಕದ ಕಾರ್ಮೋಡ ಆವರಿಸಿಕೊಂಡಂತಾಗಿದೆ.