ಭಾರತದಲ್ಲಿ ನ್ಯೂಜಿಲೆಂಡ್ ವಿರುದ್ಧ ಸರಣಿಯನ್ನು ಟೀಮ್ ಇಂಡಿಯಾ ಕೈ ಚೆಲ್ಲಿದ್ದಾಗಲೇ ಗೌತಮ್ ಗಂಭೀರ್ ಅವರ ತಂಡದ ಮೇಲೆ ಸಾಲು ಸಾಲು ಪ್ರಶ್ನೆಗಳು ಎದ್ದಿದ್ದವು. ಆಗ ಹೆಡ್ ಕೋಚ್ ಆಸ್ಟ್ರೇಲಿಯಾ ಪ್ರವಾಸದಲ್ಲಿ ಉತ್ತರ ನೀಡುವುದಾಗಿ ತಿಳಿಸಿದ್ದರು. ಆದರೆ ಆಸೀಸ್ ಪ್ರವಾಸವೂ ಮುಗಿದಿದೆ. ಈ ಪ್ರವಾಸದಲ್ಲೂ ಟೀಮ್ ಇಂಡಿಯಾ ಸೋಲಿನ ದಂಡ ಯಾತ್ರೆ ಮುಂದುವರೆಸಿದೆ. ಹೀಗಾಗಿ ಕೋಚಿಂಗ್ ಸ್ಟಾಫ್ ಕಾರ್ಯವೈಖರೀ ಬಗ್ಗೆ ಪ್ರಶ್ನೆಗಳು ಎದ್ದಿವೆ.
ಕೋಚಿಂಗ್ ಸ್ಟಾಫ್ ಕೆಲವನ್ನು ಟೀಮ್ ಇಂಡಿಯಾದ ಮಾಜಿ ಆಟಗಾರರು ಟೀಕಿಸಿದ್ದಾರೆ. ಬಿಸಿಸಿಐ ಕರೆದಿದ್ದ ರಿವ್ಯೂವ್ ಮಿಟಿಂಗ್ನಲ್ಲೂ ಈ ಬಗ್ಗೆ ಚರ್ಚೆಗಳು ನಡೆದಿದೆ. ರಯಾನ್ ಟೆನ್ ಡೋಸ್ಚೇಟ್ ಮತ್ತು ಅಭಿಷೇಕ್ ನಾಯರ್ ಅವರಿಗೆ ಟೆಸ್ಟ್ ಕ್ರಿಕೆಟ್ನಲ್ಲಿ ಹೆಚ್ಚು ಅನುಭವ ಇಲ್ಲದೆ ಇರುವು ಬಗ್ಗೆಯೂ ಪ್ರಶ್ನೆಗಳನ್ನು ಮಾಡಲಾಗಿದೆ. ಹೀಗಾಗಿ ಬಿಸಿಸಿಐ ಕೋಚಿಂಗ್ ಸಿಬ್ಬಂದಿಯನ್ನು ಬದಲಿಸುವ ಸೂಚನೆಯನ್ನು ನೀಡಿದೆ.

ತಂಡದ ಬೌಲಿಂಗ್ ಕೋಚ್ ಮಾರ್ನೆ ಮಾರ್ಕೆಲ್ ತಮ್ಮ ಕೆಲಸವನ್ನು ಚೆನ್ನಾಗಿ ನಿಭಾಯಿಸುತ್ತಿದ್ದಾರೆ ಎಂಬ ಭಾವ ಬಿಸಿಸಿಐನದ್ದಾಗಿದೆ. ಇವರ ಕೋಚಿಂಗ್ ಅಡಿಯಲ್ಲಿ ಟೀಮ್ ಇಂಡಿಯಾದ ಬೌಲಿಂಗ್ ಸುಧಾರಣೆ ಆಗಿದೆ ಎಂಬ ನಂಬಿಕೆ ಮಂಡಳಿಯದ್ದಾಗಿದೆ. ಉಳಿದಂತೆ ರಯಾನ್ ಟೆನ್ ಡೋಸ್ಚೇಟ್ ಮತ್ತು ಅಭಿಷೇಕ್ ನಾಯರ್ ಇವರಿಗೆ ಕೋಚಿಂಗ್ ಅನುಭವದ ಕೊರತೆ ಎದ್ದು ಕಾಣುತ್ತಿದೆ ಎಂದು ತಿಳಿಸಿದೆ.
ಆಸ್ಟ್ರೇಲಿಯಾ ಪ್ರವಾಸದಲ್ಲಿ ವಿರಾಟ್ ಕೊಹ್ಲಿ ರನ್ ಕಲೆ ಹಾಕುವಲ್ಲಿ ವಿಫಲರಾಗಿದ್ದರು. ಆಗ ತಂಡದ ಬ್ಯಾಟಿಂಗ್ ಕೋಚ್ ಅವರಿಗೆ ಸಲಹೆ ನಿಡಬೇಕಿತ್ತು. ಈ ಕಾರ್ಯವನ್ನು ಏಕೆ ಮಾಡಲಿಲ್ಲ ಎಂಬ ಪ್ರಶ್ನೆಯನ್ನು ದಿಗ್ಗಜ ಆಟಗಾರ ಸುನಿಲ್ ಗವಾಸ್ಕರ್ ಕೇಳಿದ್ದಾರೆ.

ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿ ಆರಂಭಕ್ಕೂ ಮುನ್ನವೇ ಭಾರತ ಕೋಚಿಂಗ್ ನಲ್ಲಿ ಬದಲಾವಣೆಯ ಗಾಳಿ ಬೀಸುವ ಸಾಧ್ಯತೆ ಹೆಚ್ಚಿದೆ ಎಂದು ನಂಬಲಾಗಿದೆ. ಕೋಚಿಂಗ್ ಸ್ಕಿಲ್ಗಳನ್ನು ಹೊಂದಿದವರಿಗೆ ಮಣೆ ಹಾಕಲು ರೂಪುರೇಷೆಗಳನ್ನು ಸಿದ್ಧ ಪಡಿಸಿಕೊಳ್ಳಲಾಗುತ್ತಿದೆ. ಚಾಂಪಿಯನ್ಸ್ ಟ್ರೋಫಿಯಲ್ಲಿ ಟೀಮ್ ಇಂಡಿಯಾ ನೀಡುವ ಪ್ರದರ್ಶನದ ಮೇಲೆ ಕೋಚಿಂಗ್ ಸಿಬ್ಬಂದಿಗಳ ಭವಿಷ್ಯ ನಿರ್ಧಾರವಾಗಲಿದೆ.
ಈ ಟೂರ್ನಿಯಲ್ಲಿ ಟೀಮ್ ಇಂಡಿಯಾ ತನ್ನ ನ್ಯೂನತೆಗಳನ್ನು ಮೆಟ್ಟಿನಿಂತು ಆಡಬೇಕಿದೆ. ಈ ಕಾರ್ಯವನ್ನು ಕೋಚಿಂಗ್ ಸಿಬ್ಬಂದಿಗಳು ಹಾಗೂ ಆಟಗಾರರು ಮಾಡಬೇಕು. ಅಂದಾಗ ಮಾತ್ರ ಟೀಮ್ ಇಂಡಿಯಾ ಕ್ಯಾಂಪ್ನಲ್ಲಿ ಮುಂದುವರೆಯುವ ಆಸೆ ಈಡೇರುತ್ತದೆ ಇಲ್ಲದಿದ್ದರೆ ಮನೆಯ ಹಾದಿಯನ್ನು ಹಿಡಯಬೇಕಾಗುತ್ತದೆ.