

ನವದೆಹಲಿ, ಫೆಬ್ರವರಿ 20: ಪುಲ್ವಾಮಾದಲ್ಲಿ ಆತ್ಮಹತ್ಯಾ ಬಾಂಬ್ ದಾಳಿಕೋರ 40ಕ್ಕೂ ಹೆಚ್ಚು ಭಾರತೀಯ ಯೋಧರನ್ನು ಬಲಿ ಪಡೆದ ಘಟನೆಗೆ ಸಂಬಂಧಿಸಿ ಬಿಸಿಸಿಐ ಮಹತ್ತರ ಹೆಜ್ಜೆಯಿಟ್ಟಿದೆ. 2019ರ ವಿಶ್ವಕಪ್ ಟೂರ್ನಿಯಲ್ಲಿ ತನ್ನ ಬದ್ಧ ಎದುರಾಳಿಯಾದ ಪಾಕಿಸ್ತಾನ ವಿರುದ್ಧ ಭಾರತ ಪಂದ್ಯ ಆಡಬೇಕೋ ಬೇಡವೋ ಎಂದು ನಿರ್ಧರಿಸುವ ಹಕ್ಕನ್ನು ಬಿಸಿಸಿಐ ಕಾದಿರಿಸಿಕೊಂಡಿದೆ.
ದಾಳಿಗೆ ಪ್ರತೀಕಾರ ತೀರಿಸುವುದಾಗಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಭರವಸೆ ನೀಡಿದ್ದಾರೆ. ಆದರೆ ಇಷ್ಟಕ್ಕೆ ಸಮಾಧಾನಗೊಳ್ಳದ ಕ್ರಿಕೆಟ್ ಅಭಿಮಾನಿಗಳು, ಜೂನ್ 16ರಂದು ನಡೆಯುವ 2019ರ ವಿಶ್ವಕಪ್ ಗ್ರೂಪ್ ಹಂತದ ಸ್ಪರ್ಧೆಯಲ್ಲಿ ವಿರಾಟ್ ಕೊಹ್ಲಿ ಬಳಗ ಪಾಕ್ ವಿರುದ್ಧ ಮೈದಾನಕ್ಕಿಳಿಯಬಾರದು ಎಂದು ಈಗಲೂ ಒತ್ತಾಯಿಸುತ್ತಿದ್ದಾರೆ.
ಇದೇ ಘಟನೆಗೆ ಸಂಬಂಧಿಸಿ ಪ್ರತಿಕ್ರಿಯಿಸಿರುವ ಐಸಿಸಿ ಇತ್ತಂಡಗಳ ನಡುವಿನ ಪಂದ್ಯವನ್ನು ರದ್ದುಗೊಳಿಸುವ ಸೂಚನೆಗಳಿಲ್ಲ ಎಂದಿದೆ. ಆದರೆ ಅಂತಿಮ ನಿರ್ಧಾರ ಐಸಿಸಿ ಕೈಯಲ್ಲಿಲ್ಲ. ಬದಲಿಗೆ, ತಂಡ ಭಾಗವಹಿಸಬೇಕೋ ಬೇಡವೋ ಎಂಬ ನಿರ್ಧಾರವನ್ನು ಬಿಸಿಸಿಐ ತಾನೇ ಹಿಡಿದಿಟ್ಟುಕೊಂಡಿದೆ.
'ಭಾಗವಹಿಸುವಿಕೆ ಒಪ್ಪಂದ'ಕ್ಕೆ ಸಂಬಂಧಿಸಿದ ಸದಸ್ಯರು ಸಹಿಯ ಮೂಲಕ ತಮ್ಮ ನಿರ್ಧಾರವನ್ನು ತಿಳಿಸಿದ ಬಳಿಕ, ವಿಶ್ವಕಪ್ನಲ್ಲಿ ಪಾಕ್ ವಿರುದ್ಧ ಭಾರತ ಭಾಗವಹಿಸಬೇಕೋ-ಬೇಡವೋ ಎಂಬ ಬಗ್ಗೆ ಬಿಸಿಸಿಐ ನಿರ್ಧರಿಸಲಿದೆ' ಎಂದು ಬಿಸಿಸಿಐ ಖಜಾಂಚಿ ಅನಿರುದ್ಧ್ ಚೌಧರಿ ತಿಳಿಸಿದ್ದಾರೆ.