ಶನಿವಾರ, ಡಿಸೆಂಬರ್ 10ರಂದು ನಡೆದ ಸಂವಾದದಲ್ಲಿ, ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರು ಭಾರತೀಯ ಕ್ರಿಕೆಟ್ನಲ್ಲಿ ಮುಂಬರುವ ಹಲವಾರು ಬೆಳವಣಿಗೆಗಳ ಮೇಲೆ ಪ್ರತಿಕ್ರಿಯಿಸಿದ್ದಾರೆ.
ಇದೇ ವೇಳೆ ಟೀಮ್ ಇಂಡಿಯಾ ಖಾಯಂ ನಾಯಕ ರೋಹಿತ್ ಶರ್ಮಾ ಅವರ ಟಿ20 ಸ್ವರೂಪದಲ್ಲಿನ ಭವಿಷ್ಯದ ಕುರಿತು ಉದ್ಭವಿಸಿರುವ ಪ್ರಶ್ನೆಗಳು ಮತ್ತು ಬೆಂಗಳೂರಿನಲ್ಲಿ ಹೊಸ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್ಸಿಎ), ಈಶಾನ್ಯ ಹಾಗೂ ಜಮ್ಮು ಮತ್ತು ಕಾಶ್ಮೀರದ ಅಕಾಡೆಮಿಗಳ ಬಗ್ಗೆ ಮಹತ್ವದ ಮಾಹಿತಿಯನ್ನು ಒದಗಿಸಿದರು.

ಟಿ20 ವಿಶ್ವಕಪ್ ವೇಳಗೆ ನಾಯಕರಾಗಿ ರೋಹಿತ್ ಶರ್ಮಾ ಮರಳುತ್ತಾರೆ ಎಂಬ ಊಹಾಪೋಹಗಳು ಸುತ್ತುವರೆದಿರುವಾಗ, ಬಿಸಿಸಿಐ ಕಾರ್ಯದರ್ಶಿ ಶಾ ಅವರು ರಾಜತಾಂತ್ರಿಕ ನಿಲುವನ್ನು ಉಳಿಸಿಕೊಂಡರು ಮತ್ತು ಈಗಲೇ ಅದರ ಬಗ್ಗೆ ಸ್ಪಷ್ಟತೆಯ ಅಗತ್ಯವಿಲ್ಲ ಎಂದು ಹೇಳಿದರು.
"ರೋಹಿತ್ ಶರ್ಮಾ ಬಗ್ಗೆ ಈಗಲೇ ಸ್ಪಷ್ಟತೆ ಬಯಸುವ ಅಗತ್ಯವೇನು? ಟಿ20 ವಿಶ್ವಕಪ್ ಇನ್ನೂ ಜೂನ್ನಲ್ಲಿ ಪ್ರಾರಂಭವಾಗುತ್ತದೆ. ಅದಕ್ಕೂ ಮೊದಲು ನಮ್ಮಲ್ಲಿ ಅಫ್ಘಾನಿಸ್ತಾನ ವಿರುದ್ಧದ ಸರಣಿ ಮತ್ತು ಐಪಿಎಲ್ ಪಂದ್ಯಾವಳಿ ಇದೆ," ಎಂದು ಎನ್ಡಿಟಿವಿ ಉಲ್ಲೇಖಿಸಿ ಜಯ್ ಶಾ ತಿಳಿಸಿದ್ದಾರೆ.
ದೇಶದಲ್ಲಿ ಕ್ರಿಕೆಟ್ ಮೂಲಸೌಕರ್ಯ ಸುಧಾರಣೆಗಳನ್ನು ಉದ್ದೇಶಿಸಿ ಮಾತನಾಡಿದ ಜಯ್ ಶಾ, ಈಶಾನ್ಯ ರಾಜ್ಯ ಹಾಗೂ ಜಮ್ಮು ಮತ್ತು ಕಾಶ್ಮೀರದ ಅಕಾಡೆಮಿಗಳೊಂದಿಗೆ ಬೆಂಗಳೂರಿನಲ್ಲಿ (ಸದ್ಯ ಎಂ ಚಿನ್ನಸ್ವಾಮಿಯಲ್ಲಿ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಕಾರ್ಯನಿರ್ವಹಿಸುತ್ತಿದೆ) ಹೊಸ ಎನ್ಸಿಎ 2024ರ ಮಧ್ಯಭಾಗದಲ್ಲಿ ಕಾರ್ಯನಿರ್ವಹಿಸಲಿದೆ ಎಂದು ಬಹಿರಂಗಪಡಿಸಿದರು.

"ನಾವು ಪಿಂಕ್ ಬಾಲ್ ಟೆಸ್ಟ್ ಪಂದ್ಯಗಳಿಗಾಗಿ ಸಾರ್ವಜನಿಕರಲ್ಲಿ ಆಸಕ್ತಿಯ ಪ್ರಮಾಣವನ್ನು ಹೆಚ್ಚಿಸಬೇಕಾಗಿದೆ. ನೀವು 2-3 ದಿನಗಳಲ್ಲಿ ಟೆಸ್ಟ್ ಮುಗಿದಿರುವುದನ್ನು ನೀವು ನೆನಪಿಸಿಕೊಂಡರೆ, ಪ್ರತಿಯೊಬ್ಬರೂ 4-5 ದಿನಗಳ ಟೆಸ್ಟ್ ಪಂದ್ಯವನ್ನು ವೀಕ್ಷಿಸಲು ಬಯಸುತ್ತಾರೆ," ಎಂದು ಜಯ್ ಶಾ ವಿವರಿಸಿದರು.
ಭಾರತ ತಂಡವು ಇಲ್ಲಿಯವರೆಗೆ ಎರಡು 'ಪಿಂಕ್ ಬಾಲ್' ಟೆಸ್ಟ್ ಪಂದ್ಯಗಳನ್ನು ಆಡಿದೆ, ಎರಡೂ ಪಂದ್ಯಗಳು ಮೂರು ದಿನಗಳಲ್ಲಿ ಗೆಲುವಿನೊಂದಿಗೆ ಮುಕ್ತಾಯಗೊಂಡವು.

"ಒಮ್ಮೆ ಜನರು ಹೆಚ್ಚು ಅಭ್ಯಾಸ ಮಾಡಿಕೊಂಡರೆ ನಾವು ಹೆಚ್ಚು ಪಿಂಕ್-ಬಾಲ್ ಟೆಸ್ಟ್ ಪಂದ್ಯಗಳನ್ನು ಮಾಡುತ್ತೇವೆ. ಕಳೆದ ಬಾರಿ ಆಸ್ಟ್ರೇಲಿಯಾದಲ್ಲಿ ಇದನ್ನು ಮಾಡಲಾಗಿತ್ತು, ನಂತರ ಯಾರೂ ಇದನ್ನು ಮಾಡಿಲ್ಲ. ನಾವು ಇಂಗ್ಲೆಂಡ್ ತಂಡದೊಂದಿಗೆ ಮಾತುಕತೆ ನಡೆಸುತ್ತಿದ್ದೇವೆ, ಆದರೆ ನಾವು ಅದನ್ನು ಕ್ರಮೇಣ ಆಯೋಜಿಸುತ್ತೇವೆ," ಎಂದು ಜಯ್ ಶಾ ಹೇಳಿದರು.
ಕ್ರಿಕೆಟ್ನಲ್ಲಿ ಲಿಂಗ ವೇತನ ಸಮಾನತೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಜಯ್ ಶಾ, ಮಹಿಳಾ ಕ್ರಿಕೆಟ್ ತಂಡಗಳು ಹೆಚ್ಚಿನ ಪಂದ್ಯಗಳನ್ನು ಆಡುವ ಮಹತ್ವವನ್ನು ಒತ್ತಿ ಹೇಳಿದರು.
"ಪುರುಷರು ಮತ್ತು ಮಹಿಳಾ ತಂಡಗಳ ಪಂದ್ಯಗಳ ಸಂಖ್ಯೆಯು ವ್ಯತ್ಯಾಸವನ್ನುಂಟುಮಾಡುತ್ತದೆ ಮತ್ತು ಅದಕ್ಕಾಗಿ ಪ್ರತಿ ಕ್ರಿಕೆಟ್ ಸಂಸ್ಥೆಯು ಪರಸ್ಪರ ವಿನಿಮಯ ಮಾಡಿಕೊಳ್ಳಬೇಕು, ನಾನು ಈ ಬಗ್ಗೆ ಮಾತನಾಡುವುದರಿಂದ ಮಾತ್ರ ವ್ಯತ್ಯಾಸವಾಗುವುದಿಲ್ಲ," ಎಂದರು.
"ಸದ್ಯ ಇಂಗ್ಲೆಂಡ್, ಆಸ್ಟ್ರೇಲಿಯಾ ಮತ್ತು ಬಿಸಿಸಿಐ ಕ್ರಿಕೆಟ್ ಮಂಡಳಿಗಳು ಆಡುತ್ತಿರುವ ಕ್ರಿಕೆಟ್ ಪಂದ್ಯಗಳನ್ನು, ಇತರ ತಂಡಗಳು ಸಹ ಆಡಬೇಕಾಗುತ್ತದೆ. ಆಗ ಮಾತ್ರ ನಾವು ಪಂದ್ಯಗಳ ಸಂಖ್ಯೆಯನ್ನು ಹೆಚ್ಚಿಸಲು ಸಾಧ್ಯವಾಗುತ್ತದೆ," ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅಭಿಪ್ರಾಯಪಟ್ಟರು.