ಭಾರತದಲ್ಲಿ ಅಕ್ಟೋಬರ್ 5ರಿಂದ ಅಧಿಕೃತವಾಗಿ ಪ್ರಾರಂಭವಾಗಲಿರುವ 2023ರ ಏಕದಿನ ವಿಶ್ವಕಪ್ ಪಂದ್ಯಾವಳಿಗೆ ದಿನಗಣನೆ ಶುರುವಾಗಿದ್ದು, ಕೆಲವೇ ದಿನಗಳಲ್ಲಿ ಭಾಗವಹಿಸುವ ಉಳಿದ ಒಂಬತ್ತು ತಂಡಗಳು ಭಾರತಕ್ಕೆ ಆಗಮಿಸಲಿವೆ.
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕಾರ್ಯದರ್ಶಿ ಜಯ್ ಶಾ ಅವರು 2023ರ ವಿಶ್ವಕಪ್ನ ಗೋಲ್ಡನ್ ಟಿಕೆಟ್ ಅನ್ನು ಮೊತ್ತೊಬ್ಬ ಸೂಪರ್ಸ್ಟಾರ್ ನಟ ರಜನಿಕಾಂತ್ಗೆ ಉಡುಗೊರೆಯಾಗಿ ನೀಡಿದ್ದಾರೆ.
ಅಕ್ಟೋಬರ್ 5ರಿಂದ ನವೆಂಬರ್ 19ರವರೆಗೆ ಭಾರತದಲ್ಲೇ ನಡೆಯಲಿರುವ ಅದ್ಧೂರಿ ಪಂದ್ಯಾವಳಿಗೆ ಗೋಲ್ಡನ್ ಟಿಕೆಟ್ ಅನ್ನು ತಲೈವಾ ರಜನಿಕಾಂತ್ಗೆ ಜಯ್ ಶಾ ನೀಡುತ್ತಿರುವ ಫೋಟೋವನ್ನು ಬಿಸಿಸಿಐ ಹಂಚಿಕೊಂಡಿದೆ.

ರಜನಿಕಾಂತ್ ಅವರಿಗೂ ಮುನ್ನ ಮಾಜಿ ದಿಗ್ಗಜ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಮತ್ತು ಬಾಲಿವುಡ್ ಖ್ಯಾತ ನಟ ಅಮಿತಾಭ್ ಬಚ್ಚನ್ ಅವರಿಗೆ ಬಿಸಿಸಿಐ 2023ರ ವಿಶ್ವಕಪ್ನ ಗೋಲ್ಡನ್ ಟಿಕೆಟ್ ನೀಡಿತ್ತು.
ಬಿಸಿಸಿಐ ಭಾರತದ ವಿವಿಧ ಕ್ಷೇತ್ರಗಳ ಲೆಜೆಂಡ್ಗಳನ್ನು ಕ್ರಿಕೆಟ್ನ ಅತಿ ದೊಡ್ಡ ವಿಶೇಷ ಪಾಸ್ನೊಂದಿಗೆ ಆಹ್ವಾನಿಸುವ ಮೂಲಕ ಗೌರವಿಸುತ್ತಿದೆ.
"ಸಿನಿಮಾದ ಆಚೆಗಿನ ವಿದ್ಯಮಾನ. ವರ್ಚಸ್ಸು ಮತ್ತು ಚಿತ್ರರಂಗದ ತೇಜಸ್ಸಿನ ನಿಜವಾದ ಸಾಕಾರವಾದ ರಜನಿಕಾಂತ್ ಅವರಿಗೆ ಬಿಸಿಸಿಐ ಗೌರವ ಕಾರ್ಯದರ್ಶಿ ಜಯ್ ಶಾ ಗೋಲ್ಡನ್ ಟಿಕೆಟ್ ನೀಡಿದರು. ಲೆಜೆಂಡರಿ ನಟ ಭಾಷೆ ಮತ್ತು ಸಂಸ್ಕೃತಿಯನ್ನು ಮೀರಿ ಲಕ್ಷಾಂತರ ಜನರ ಹೃದಯದಲ್ಲಿ ಅಳಿಸಲಾಗದ ಛಾಪು ಮೂಡಿಸಿದ್ದಾರೆ."
"ತಲೈವಾ 2023ರ ಐಸಿಸಿ ವಿಶ್ವಕಪ್ ಪಂದ್ಯಾವಳಿಯನ್ನು ನಮ್ಮ ವಿಶೇಷ ಅತಿಥಿಯಾಗಿ ಅಲಂಕರಿಸುತ್ತಾರೆ ಮತ್ತು ಅವರ ಉಪಸ್ಥಿತಿಯೊಂದಿಗೆ ಅತಿದೊಡ್ಡ ಕ್ರಿಕೆಟ್ ಚಮತ್ಕಾರವನ್ನು ಮಾಡಲಿದ್ದಾರೆ ಎಂದು ಘೋಷಿಸಲು ನಾವು ರೋಮಾಂಚನಗೊಂಡಿದ್ದೇವೆ," ಎಂದು ಬಿಸಿಸಿಐ ಬರೆದುಕೊಂಡಿದೆ.
2023ರ ವಿಶ್ವಕಪ್ ಪಂದ್ಯಾವಳಿಗೆ ರಜನಿಕಾಂತ್ಗೆ ಗೋಲ್ಡನ್ ಟಿಕೆಟ್ ನೀಡಿದ್ದಕ್ಕಾಗಿ ಬಿಸಿಸಿಐ ಅನ್ನು ಭಾರತೀಯ ಕ್ರಿಕೆಟ್ ಅಭಿಮಾನಿಗಳು ಶ್ಲಾಘಿಸಿದ್ದಾರೆ. ಬಿಸಿಸಿಐ ಹಂಚಿಕೊಂಡ ಟ್ವೀಟ್ಗೆ ಎರಡು ಗಂಟೆಗಳಲ್ಲಿ 13,000ಕ್ಕೂ ಹೆಚ್ಚು ಲೈಕ್ಗಳು ಬಂದಿವೆ.
"2023ರ ಐಸಿಸಿ ಏಕದಿನ ವಿಶ್ವಕಪ್ಗಾಗಿ ಬಿಸಿಸಿಐಯಿಂದ ಪ್ರತಿಷ್ಠಿತ ಗೋಲ್ಡನ್ ಟಿಕೆಟ್ ಸ್ವೀಕರಿಸಲು ನನಗೆ ತುಂಬಾ ಸಂತೋಷವಾಗಿದೆ. ಬಿಸಿಸಿಐಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು. ಆತ್ಮೀಯ ಜಯ್ ಶಾ ಜಿ, ನಿಮ್ಮನ್ನು ಭೇಟಿಯಾಗಿದ್ದು ಸಂತೋಷವಾಗಿದೆ. ನಿಮ್ಮ ಆತ್ಮೀಯ ಮಾತುಗಳು ಮತ್ತು ಆಲೋಚನೆಗಳಿಗೆ ತುಂಬಾ ಧನ್ಯವಾದಗಳು," ಎಂದು ನಟ ರಜನಿಕಾಂತ್ ಟ್ವೀಟ್ ಮಾಡಿದ್ದಾರೆ.

ಈ ಹಿಂದಿನ ಸುತ್ತಿನಲ್ಲಿ ಭಾರತದ ವಿವಿಧ ಸ್ಟೇಡಿಯಂಗಳಲ್ಲಿ ಪಂದ್ಯಗಳನ್ನು ನೇರಪ್ರಸಾರ ವೀಕ್ಷಿಸಲು ಬಹಳಷ್ಟು ಅಭಿಮಾನಿಗಳು ಟಿಕೆಟ್ಗಳನ್ನು ಪಡೆದುಕೊಂಡಿದ್ದರು. ವಿಶ್ವಕಪ್ ಅಂಕಿಅಂಶಗಳ ಪ್ರಕಾರ, ಇನ್ನೂ ಒಂದು ಸುತ್ತಿನ ಟಿಕೆಟ್ ಮಾರಾಟವಿರುತ್ತದೆ.
BookMyShow ಭಾರತದ ಪಂದ್ಯಗಳ ಟಿಕೆಟ್ ಶೀಘ್ರದಲ್ಲೇ ಬರಲಿದೆ ಪೋಸ್ಟರ್ ಅನ್ನು ಹಾಕಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಟಿಕೆಟ್ಗಳು ಮಾರಾಟವಾಗಲಿದೆ ಎಂದು ಸುಳಿವು ನೀಡಿದೆ.