
ಡಿಸೆಂಬರ್ 21 ರಂದು ನಡೆಯಲಿರುವ ಬಿಸಿಸಿಐನ ಅಪೆಕ್ಸ್ ಕೌನ್ಸಿಲ್ ಸಭೆಯಲ್ಲಿ ಭಾರತ ಟಿ20 ತಂಡಕ್ಕೆ ನೂತನ ನಾಯಕನ್ನು ಘೋಷಿಸುವ ಸಾಧ್ಯತೆ ಇದೆ.
ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಭಾರತ ಟಿ20 ತಂಡದ ನಾಯಕರಾಗಿ ಆಯ್ಕೆಯಾಗಲಿದ್ದಾರೆ. ರೋಹಿತ್ ಶರ್ಮಾ ಟಿ20 ನಾಯಕತ್ವ ಬಿಟ್ಟುಕೊಡಲಿದ್ದು, ಏಕದಿನ ಮತ್ತು ಟೆಸ್ಟ್ ಮಾದರಿಯಲ್ಲಿ ನಾಯಕರಾಗಿ ಮುಂದುವರೆಯುವ ಸಾಧ್ಯತೆ ಇದೆ.
2022 ರ ಟಿ20 ವಿಶ್ವಕಪ್ನಲ್ಲಿ ಸೆಮಿಫೈನಲ್ನಲ್ಲಿ ಇಂಗ್ಲೆಂಡ್ ವಿರುದ್ಧ ಹೀಯಾಯವಾಗಿ ಸೋತು ನಿರ್ಗಮಿಸಿತ್ತು. ಅಂದಿನಿಂದ ತಂಡದಲ್ಲಿ ಮಹತ್ವದ ಬದಲಾವಣೆ ಮಾಡಲು ಬಿಸಿಸಿಐ ತೀರ್ಮಾನಿಸಿದೆ. ಡಿಸೆಂಬರ್ 21ರಂದು ನಡೆಯುವ ಸಭೆಯಲ್ಲಿ ರೋಹಿತ್ ಶರ್ಮಾ ಸೇರಿದಂತೆ ಹಲವು ಪ್ರಮುಖ ಕ್ರಿಕೆಟಿಗರನ್ನು ಟಿ20 ತಂಡದಿಂದ ಕೈಬಿಡುವ ಸಾಧ್ಯತೆ ಇದೆ.
ತಮ್ಮ ಚೊಚ್ಚಲ ಐಪಿಎಲ್ ಋತುವಿನಲ್ಲಿ ಗುಜರಾತ್ ಟೈಟಾನ್ಸ್ ತಂಡ ಚಾಂಪಿಯನ್ ಆಗಲು ಹಾರ್ದಿಕ್ ಪಾಂಡ್ಯ ನಾಯಕತ್ವ ಕೂಡ ಕಾರಣವಾಗಿತ್ತು. ಐರ್ಲೆಂಡ್ ಮತ್ತು ನ್ಯೂಜಿಲೆಂಡ್ ವಿರುದ್ಧ ಟಿ20 ಸರಣಿಯಲ್ಲಿ ಪಾಂಡ್ಯ ಭಾರತ ತಂಡದ ನಾಯಕತ್ವ ವಹಿಸಿದ್ದರು, ಅವರು ಎರಡೂ ಟಿ20 ಸರಣಿಯನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು.

ಪಾಂಡ್ಯ ಉತ್ತಮ ಆಯ್ಕೆ
ಹಾರ್ದಿಕ್ ಪಾಂಡ್ಯ ಭಾರತ ತಂಡದ ಅನುಭವಿ ಆಲ್ರೌಂಡರ್ ಆಟಗಾರ. ಆತನ ನಾಯಕತ್ವದಲ್ಲಿ ಗುಜರಾತ್ ಜೈಂಟ್ಸ್ ಉತ್ತಮ ಸಾಧನೆ ಮಾಡಿದೆ. ಮೈದಾನದಲ್ಲಿ ಆತನ ಚಾಣಾಕ್ಷ ನಾಯಕತ್ವದ ಗುಣಗಳು ಮತ್ತು ಯುದ್ಧತಂತ್ರದ ಮನಸ್ಥಿತಿಯು ಅವರನ್ನು ಉತ್ತಮ ನಾಯಕರನ್ನಾಗಿ ಮಾಡಲಿದೆ. ಆದರೆ, ಗಾಯದ ಇತಿಹಾಸವನ್ನು ಹೊಂದಿರುವುದು ತಂಡದ ಕಳವಳಕ್ಕೆ ಕಾರಣವಾಗಿದೆ.
2021 ರ ಟಿ 20 ವಿಶ್ವಕಪ್ನಲ್ಲಿ ಭಾರತ ತಂಡ ಸೆಮಿಫೈನಲ್ ತಲುಪುವಲ್ಲಿ ಕೂಡ ವಿಫಲವಾಯಿತು. ಈ ಸೋಲಿನ ಬಳಿಕ ವಿರಾಟ್ ಕೊಹ್ಲಿ ತಂಡದ ನಾಯಕತ್ವ ತ್ಯಜಿಸಿದರು. ನಂತರ ರೋಹಿತ್ ಶರ್ಮಾ ನಾಯಕತ್ವದ ಜವಾಬ್ದಾರಿ ವಹಿಸಿಕೊಂಡರು. ಎಂಎಸ್ ಧೋನಿ ನಂತರ ಶರ್ಮಾ ಭಾರತ ಟಿ20 ತಂಡದ ಅತ್ಯಂತ ಯಶಸ್ವಿ ನಾಯಕರಾಗಿದ್ದಾರೆ. ಅವರು 51 ಟಿ20 ಪಂದ್ಯಗಳಲ್ಲಿ ಭಾರತವನ್ನು ಮುನ್ನಡೆಸಿದ್ದು 39 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದಾರೆ.
ಡಿಸೆಂಬರ್ 21 ರ ಮಹತ್ವದ ಸಭೆಯಲ್ಲಿ ನಾಯಕನ ಹೆಸರು ಘೋಷಣೆ ಹೊರತು ಪಡಿಸಿ ಹಲವು ಪ್ರಮುಖ ನಿರ್ಧಾರಗಳನ್ನು ಮಾಡುವ ಸಾಧ್ಯತೆ ಇದೆ. ಹೊಸ ಆಯ್ಕೆ ಸಮಿತಿಯನ್ನು ನೇಮಿಸಲಾಗುತ್ತದೆ. ಟಿ20 ಮಾದರಿಗೆ ಹೊಸ ಕೋಚ್ ನೇಮಕ ಮಾಡುವ ಸಾಧ್ಯತೆ ಇದೆ. ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಪಿಂಕ್ ಬಾಲ್ ಸರಣಿ ಬಗ್ಗೆ ಕೂಡ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಗುತ್ತದೆ.