ಬೆಂಗಳೂರು, ಆಗಸ್ಟ್ 20: ಭಾರಿ ಮಳೆ, ಗಾಳಿ ಹೊಡೆತಕ್ಕೆ ಸಿಲುಕಿರುವುದರಿಂದ ವಿಜಯವಾಡದಲ್ಲಿ ನಡೆಯಬೇಕಿದ್ದ ಚತುಷ್ಕೋನ ಪಂದ್ಯಗಳನ್ನು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಸಲು ನಿರ್ಧರಿಸಲಾಗಿದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಪ್ರಕಟಿಸಿದೆ.
ಭಾರತ ಎ,ಬಿ, ಪ್ರವಾಸಿ ಅಸ್ಟ್ರೇಲಿಯಾ ಎ ಹಾಗೂ ದಕ್ಷಿಣ ಆಫ್ರಿಕಾ ಎ ತಂಡಗಳ ನಡುವಿನ ಚತುಷ್ಕೋನ ಏಕದಿನ ಸರಣಿಯನ್ನು ವಿಜಯವಾಡದಲ್ಲಿ ಆಯೋಜಿಸಲಾಗಿತ್ತು. ಆದರೆ, ಪ್ರತಿಕೂಲ ಹವಾಮಾನದ ಕಾರಣದಿಂದ ಪಂದ್ಯಾವಳಿಯನ್ನು ಬೆಂಗಳೂರಿಗೆ ವರ್ಗಾಯಿಸಲಾಗಿದೆ ಎಂದು ಬಿಸಿಸಿಐ ಹೇಳಿದೆ.
ಕೆಪಿಎಲ್: ಶಿವಮೊಗ್ಗ ಲಯನ್ಸ್ ವಿರುದ್ಧ ಹುಬ್ಳಿ ಟೈಗರ್ಸ್ 25 ರನ್ ಜಯ
ಲೀಗ್ ಹಂತದ ಮೊದಲೆರಡು ಪಂದ್ಯಗಳು ಮುಲಪಾಡು, ವಿಜಯವಾಡದಲ್ಲಿ ನಡೆಸಲಾಯಿತು. ಆದರೆ, ಮೈದಾನದ ಸ್ಥಿತಿಗತಿ ಪರಿಶೀಲಿಸಿ, ಪಂದ್ಯ ನಡೆಸಲು ಸಾಧ್ಯವಿಲ್ಲ ಎಂದು ಅಂಪೈರ್ ಗಳು ನಿರ್ಧರಿಸಿದ್ದರಿಂದ ಪಂದ್ಯಗಳನ್ನು ಶಿಫ್ಟ್ ಮಾಡಲು ಮುಂದಾಗಬೇಕಾಯಿತು ಎಂದು ಬಿಸಿಸಿಐನ ಕಾರ್ಯಕಾರಿ ಕಾರ್ಯದರ್ಶಿ ಅಮಿತಾಬ್ ಚೌಧರಿ ಹೇಳಿದ್ದಾರೆ.
ಚಿನ್ನಸ್ವಾಮಿ ಕ್ರೀಡಾಂಗಣ ಹಾಗೂ ಆಲೂರಿನ ಮೈದಾನಗಳಲ್ಲಿ ಪಂದ್ಯಗಳನ್ನು ನಡೆಸಲಾಗುತ್ತದೆ. ಹೊಸ ವೇಳಾಪಟ್ಟಿ ಅನ್ವಯ ಲೀಗ್ ನಲ್ಲಿ ಒಂದು ಬಾರಿ ಮಾತ್ರ ತಂಡಗಳು ಮುಖಾಮುಖಿ ನಡೆಯಲಿದೆ. ಆಗಸ್ಟ್ 23, 25, 27ರಂದು ಲೀಗ್ ಪಂದ್ಯಗಳು ನಡೆಯಲಿದೆ. ಆಗಸ್ಟ್ 29ರಂದು ಫೈನಲ್ ಪಂದ್ಯ ನಿಗದಿಯಾಗಿದೆ.