ಟೀಮ್ ಇಂಡಿಯಾದ 2024ರ ಐಸಿಸಿ ಟಿ20 ವಿಶ್ವಕಪ್ ಮಿಷನ್ ಯಶಸ್ವಿಯಾಗಿ ಕೊನೆಗೊಂಡಿತು. ಬಾರ್ಬಡೋಸ್ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಗೆಲ್ಲುವ ಮೂಲಕ ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ 11 ವರ್ಷಗಳ ಐಸಿಸಿ ಟ್ರೋಫಿ ಬರವನ್ನು ಕೊನೆಗೊಳಿಸಿತು.
ಇದೀಗ ಭಾರತ ತಂಡದ ಮುಂದಿನ ಪ್ರಮುಖ ಗುರಿಗಳೆಂದರೆ, 2025ರ ಚಾಂಪಿಯನ್ಸ್ ಟ್ರೋಫಿ ಮತ್ತು ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್. ಇದಕ್ಕಾಗಿ ಈಗಾಗಲೇ ರೋಹಿತ್ ಶರ್ಮಾ ಪಡೆ ಸಿದ್ಧವಾಗುತ್ತಿದೆ.

ಈಗಾಗಲೇ ಟಿ20 ಪಂದ್ಯಗಳಿಂದ ನಿವೃತ್ತಿಯಾಗಿರುವ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಯಂತಹ ಅನುಭವಿ ಆಟಗಾರರಿಗೆ ಆ ಎರಡು ಪಂದ್ಯಾವಳಿಗಳು ನಿರ್ಣಾಯಕವಾಗಿವೆ.
2024ರ ಟಿ20 ವಿಶ್ವಕಪ್ಗೆ ಮುಂಚಿತವಾಗಿ, ರಾಷ್ಟ್ರೀಯ ತಂಡದ ಮಹತ್ವಾಕಾಂಕ್ಷೆ ಹೊಂದಿರುವ ಆಟಗಾರರನ್ನು ದೇಶೀಯ ಪಂದ್ಯಾವಳಿಗಳಲ್ಲಿ ಆಡುವುದನ್ನು ಬಿಸಿಸಿಐ ಕಡ್ಡಾಯಗೊಳಿಸಿತ್ತು.

ಇದೀಗ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಒಂದು ಹೆಜ್ಜೆ ಮುಂದೆ ಹೋಗಿದೆ ಎಂದು ಪಿಟಿಐ ವರದಿ ಮಾಡಿದೆ. ಆದಾಗ್ಯೂ, ಮೂರು ಆಟಗಾರರಿಗೆ ನಿಯಮಗಳಿಂದ ವಿನಾಯಿತಿ ನೀಡಲಾಗಿದೆ.
ಸ್ಟಾರ್ ಕ್ರಿಕೆಟಿಗರು ಕೂಡ ರಾಷ್ಟ್ರೀಯ ಕರ್ತವ್ಯದಿಂದ ಮುಕ್ತರಾದಾಗ ದೇಶೀಯ ಪಂದ್ಯಾವಳಿಗಳಿಗೆ ತಮ್ಮನ್ನು ತಾವು ಲಭ್ಯವಾಗುವಂತೆ ಮಾಡಬೇಕು ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಖಡಕ್ ಸಂದೇಶ ರವಾನಿಸಿದ್ದಾರೆ. ಆದರೆ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ವೇಗಿ ಜಸ್ಪ್ರೀತ್ ಬುಮ್ರಾ ಅವರಂತಹವರಿಗೆ ವಿನಾಯಿತಿ ನೀಡಲಾಗುವುದು.
ಆದಾಗ್ಯೂ, ಬಾಂಗ್ಲಾದೇಶ ಮತ್ತು ನ್ಯೂಜಿಲೆಂಡ್ ವಿರುದ್ಧದ ತವರಿನ ಟೆಸ್ಟ್ ಪಂದ್ಯಗಳಿಗೆ ಪೂರ್ವಭಾವಿಯಾಗಿ, ಆಗಸ್ಟ್ನಲ್ಲಿ ಎಲ್ಲಾ ಇತರ ಟೆಸ್ಟ್ ಆಡುವ ಆಟಗಾರರು ಕನಿಷ್ಠ ಒಂದಾದರೂ ದುಲೀಪ್ ಟ್ರೋಫಿ ಪಂದ್ಯವನ್ನು ಆಡಬೇಕೆಂದು ಬಿಸಿಸಿಐ ಬಯಸಿದೆ.
"ಈ ಬಾರಿ ದುಲೀಪ್ ಟ್ರೋಫಿಗೆ ಯಾವುದೇ ವಲಯ ಆಯ್ಕೆ ಸಮಿತಿ ಇರುವುದಿಲ್ಲ. ರಾಷ್ಟ್ರೀಯ ಆಯ್ಕೆ ಸಮಿತಿ ಮಾತ್ರ ದುಲೀಪ್ ತಂಡಗಳನ್ನು ಆಯ್ಕೆ ಮಾಡುತ್ತದೆ. ಟೆಸ್ಟ್ ಆಡುವ ಎಲ್ಲಾ ಆಟಗಾರರನ್ನು ಆಯ್ಕೆ ಮಾಡಲಾಗುತ್ತದೆ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಜಸ್ಪ್ರೀತ್ ಬುಮ್ರಾ ಅವರು ಆಡಬೇಕೆ ಅಥವಾ ಬೇಡವೇ ಎಂಬುದು ಅವರ ಆಯ್ಕೆಯಾಗಿದೆ," ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
ಬಾಂಗ್ಲಾದೇಶ ಮತ್ತು ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯು ಗೌತಮ್ ಗಂಭೀರ್ ಅವರ ಮುಖ್ಯ ಕೋಚ್ ಅವಧಿಯ ಮೊದಲ ಎರಡು ಟೆಸ್ಟ್ ಸರಣಿಯಾಗಿದೆ.
ಟೀಂ ಇಂಡಿಯಾದ ಮುಖ್ಯ ಕೋಚ್ ಆಗಿ ಗೌತಮ್ ಗಂಭೀರ್ ನೇಮಕಗೊಂಡಿರುವುದನ್ನು ಭಾರತ ಸೇರಿದಂತೆ ವಿಶ್ವದ ಹಲವು ಮಾಜಿ ಕ್ರಿಕೆಟಿಗರು ಸ್ವಾಗತಿಸಿದ್ದಾರೆ ಮತ್ತು ಭಾರತ ತಂಡದಲ್ಲಿ ಗಮನಾರ್ಹ ಬದಲಾವಣೆಯನ್ನು ನಿರೀಕ್ಷಿಸಿದ್ದಾರೆ.
ಭಾರತ ಕ್ರಿಕೆಟ್ ತಂಡವು ತನ್ನ ಮುಂದಿನ ನಿಯೋಜನೆಗಾಗಿ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದೆ. ಈ ವೇಳೆ ಮೂರು ಪಂದ್ಯಗಳ ಟಿ20 ಸರಣಿ ಮತ್ತು ಮೂರು ಪಂದ್ಯಗಳ ಏಕದಿನ ಸರಣಿ ಆಡಲಿದೆ.
ಪ್ರಸ್ತುತ ಉಪನಾಯಕ ಹಾರ್ದಿಕ್ ಪಾಂಡ್ಯ ಬದಲಾಗಿ ಶ್ರೀಲಂಕಾ ವಿರುದ್ಧದ ಮುಂಬರುವ ಟಿ20 ಸರಣಿಗೆ ಸೂರ್ಯಕುಮಾರ್ ಯಾದವ್ ಅವರನ್ನು ಭಾರತ ತಂಡದ ನಾಯಕರನ್ನಾಗಿ ನೇಮಿಸುವ ನಿರೀಕ್ಷೆಯಿದೆ.
ಭಾರತದ 2024ರ ಟಿ20 ವಿಶ್ವಕಪ್ ವಿಜಯದ ನಂತರ, ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ರವೀಂದ್ರ ಜಡೇಜಾ ಮೂವರು ಅನುಭವಿಗಳು ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ ಸ್ವರೂಪದಿಂದ ನಿವೃತ್ತರಾದರು.
ಜಿಂಬಾಬ್ವೆ ವಿರುದ್ಧದ ಟಿ20 ಸರಣಿಯಲ್ಲಿ ಶುಭ್ಮನ್ ಗಿಲ್ ಭಾರತ ತಂಡದ ನಾಯಕರಾಗಿದ್ದರು. ಆದರೆ ಶ್ರೀಲಂಕಾ ಸರಣಿಗೆ ಮುನ್ನ ಗೌತಮ್ ಗಂಭೀರ್ ಮುಖ್ಯ ಕೋಚ್ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರಿಂದ, ಸೂರ್ಯಕುಮಾರ್ ಯಾದವ್ ಅವರನ್ನು ಖಾಯಂ ನಾಯಕತ್ವದ ಆಯ್ಕೆ ಎಂದು ಪರಿಗಣಿಸಲಾಗಿದೆ.