ಇಂಡಿಯನ್ ಪ್ರೀಮಿಯರ್ ಲೀಗ್ ಕೊನೆಯ ಹಂತಕ್ಕೆ ಬಂದು ನಿಂತಿದೆ. ಮಂಗಳವಾರ ಲೀಗ್ ಹಂತದ ಕೊನೆಯ ಪಂದ್ಯ ಲಕ್ನೋನ ಏಕನಾ ಮೈದಾನದಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಆರ್ಸಿಬಿ ಹಾಗೂ ಎಸ್ಆರ್ಎಚ್ ತಂಡಗಳು ಕಾದಾಟ ನಡೆಸಲಿವೆ. ಈ ಪಂದ್ಯ ಬಳಿಕ ಐಪಿಎಲ್ ಕ್ವಾಲಿಫೈಯರ್ 1, ಎಲಿಮಿನೇಟರ್, ಕ್ವಾಲಿಫೈಯರ್ 2 ಹಾಗೂ ಫೈನಲ್ ಪಂದ್ಯಗಳು ನಡೆಯಲಿವೆ. ಈ ಪಂದ್ಯಕ್ಕೂ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲು ಬಿಸಿಸಿಐ ಪ್ಲ್ಯಾನ್ ನಡೆಸಿದೆ.
18ನೇ ಆವೃತ್ತಿಯ ಐಪಿಎಲ್ ಪಂದ್ಯಗಳು ನಡೆಯುತ್ತಿರುವ ವೇಳೆ ಭಾರತ ಹಾಗೂ ಪಾಕ್ ನಡುವೆ ಉದ್ವಿಗ್ನ ಪರಿಸ್ಥಿತಿಗಳು ನಿರ್ಮಾಣವಾಗಿತ್ತು. ಈಗ ಎರಡೂ ದೇಶಗಳ ನಡುವೆ ಕದನ ವಿರಾಮ ಘೋಷಣೆ ಆಗಿದೆ. ಹೀಗಾಗಿ ಮತ್ತೆ ಒಂದುವಾರದ ಬಳಿಕ ಐಪಿಎಲ್ ಪುನರಾರಂಭವಾಗಿದೆ. ಇನ್ನು ಐಪಿಎಲ್ ಫೈನಲ್ ಪಂದ್ಯದ ವೇಳೆ ಹಲವು ಕಾರ್ಯಕ್ರಮಗಳನ್ನು ಬಿಸಿಸಿಐ ಹಮ್ಮಿಕೊಳ್ಳಲು ಪ್ಲ್ಯಾನ್ ಮಾಡಿದೆ. ಇದೇ ವೇಳೆ ಬಿಸಿಸಿಐ ಆಪರೇಷನ್ ಸಿಂಧೂರ್ನ ಯಶಸ್ಸನ್ನು ಆಚರಿಸಲಿದೆ. ಅಹಮದಾಬಾದ್ನ ನರೇಂದ್ರ ಮೋದಿ ಮೈದಾನದಲ್ಲಿ ಫೈನಲ್ ಪಂದ್ಯ ನಡೆಯಲಿದೆ.

ಜೂನ್ 3 ರಂದು ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಐಪಿಎಲ್ ಫೈನಲ್ ನಡೆಯಲಿದೆ. ಈ ಪಂದ್ಯಕ್ಕೂ ಮುನ್ನ ಸಮಾರೋಪ ಸಮಾರಂಭ ನಡೆಯಲಿದೆ. ಐಪಿಎಲ್ ಫೈನಲ್ನಲ್ಲಿ ಆಪರೇಷನ್ ಸಿಂಧೂರ್ನ ಯಶಸ್ಸನ್ನು ಆಚರಿಸಲಾಗುವುದು, ಇದಕ್ಕಾಗಿ ಬಿಸಿಸಿಐ ವಿಶೇಷ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ವಿಶೇಷ ಅತಿಥಿಗಳನ್ನು ಆಹ್ವಾನಿಸಿದೆ. ಆಪರೇಷನ್ ಸಿಂಧೂರ್ ಯಶಸ್ಸನ್ನು ಆಚರಿಸಲು ಬಿಸಿಸಿಐ ಸಮಾರಂಭಕ್ಕೆ ರಕ್ಷಣಾ, ಸೇನಾ, ನೌಕಾಪಡೆ ಮತ್ತು ವಾಯುಪಡೆಯ ಮುಖ್ಯಸ್ಥರನ್ನು ಆಹ್ವಾನಿಸಿದೆ.
ಭಾರತದ ಮುಕುಟ ಜಮ್ಮು ಕಾಶ್ಮೀರದಲ್ಲಿ ಏಪ್ರಿಲ್ 26 ರಂದು ಉಗ್ರರರು ಪಹಲ್ಗಾಮ್ನಲ್ಲಿ ಅಟ್ಟಹಾಸ ಮೆರೆದಿದ್ದರು. ಈ ವೇಳೆ 26 ಅಮಾಯಕರ ಜೀವವನ್ನು ತೆಗೆದಿದ್ದರು. ಇದಕ್ಕೆ ಪ್ರತಿಯಾಗಿ ಭಾರತೀಯ ಸೇನೆ ಮೇ 7 ರಂದು ಆಪರೇಷನ್ ಸಿಂಧೂರ್ ಅನ್ನು ಪ್ರಾರಂಭಿಸಿತು. ಮತ್ತು ಪಿಒಕೆಯಲ್ಲಿನ 9 ಭಯೋತ್ಪಾದಕ ನೆಲೆಗಳ ಮೇಲೆ ವೈಮಾನಿಕ ದಾಳಿ ನಡೆಸಿ ಅಬ್ಬರಿಸಿತ್ತು. ಈ ದಾಳಿಯ ವೇಳೆ ಪಾಕ್ ಸೈನಿಕರು ಹಾಗೂ ನಾಗರಿಕರಿಗೆ ಯಾವುದೇ ಹಾನಿಯಾಗದಂತೆ ನೋಡಿಕೊಳ್ಳುವ ಎಚ್ಚರಿಕೆಯನ್ನು ಸಹ ವಹಿಸಿಕೊಳ್ಳಲಾಗಿತ್ತು. ಇದಕ್ಕೆ ಪ್ರತಿಯಾಗಿ ಪಾಕ್ ಮತ್ತೆ ಡ್ರೋನ್ ಹಾಗೂ ಗುಂಡಿನ ದಾಳಿ ನಡೆಸಿತು.
ಸೋಮವಾರ ನಡೆದ ಐಪಿಎಲ್ ಪಂದ್ಯದಲ್ಲಿ ಮುಂಬೈ ತಂಡವನ್ನು ಮಣಿಸಿರುವ ಪಂಜಾಬ್ ಕಿಂಗ್ಸ್ ಕ್ವಾಲಿಫೈಯರ್1 ಕ್ಕೆ ಅರ್ಹತೆ ಪಡೆದಿದೆ. ಇನ್ನು ಮುಂಬೈ ಎಲಿಮಿನೇಟರ್ನಲ್ಲಿ ಪಂದ್ಯವನ್ನುಆಡಲಿದೆ. ಮಂಗಳವಾರ ಆರ್ಸಿಬಿ ಹಾಗೂ ಎಲ್ಎಸ್ಜಿ ನಡುವಣ ಲೀಗ್ ಹಂತದ ಕೊನೆಯ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ಜಯ ಸಾಧಿಸಿ ಆರ್ಸಿಬಿ ಕ್ವಾಲಿಫೈಯರ್ ಪಂದ್ಯವನ್ನು ಆಡಲು ಅರ್ಹತೆ ಪಡೆಯುವ ಕನಸು ಕಾಣುತ್ತಿದೆ. ಇನ್ನು ಗುಜರಾತ್ ಟೈಟಾನ್ಸ್ ಸಹ ಪ್ಲೇ ಆಫ್ಗೆ ಅರ್ಹತೆ ಪಡೆದಿದೆ. ಆದರೆ ಯಾರ ವಿರುದ್ಧ ಆಡಲಿದೆ ಎಂಬುದು ಇನ್ನು ನಿರ್ಧಾರವಾಗಿಲ್ಲ.