ಬಹು ನಿರೀಕ್ಷಿತ ಆಸ್ಟ್ರೇಲಿಯಾ ಪ್ರವಾಸಕ್ಕೆ ಭಾರತ ತಂಡವನ್ನು ಆಯ್ಕೆ ಮಾಡಲಾಗಿದೆ. ಏಳು ತಿಂಗಳ ಬಳಿಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಲು ಸಜ್ಜಾಗಿದ್ದಾರೆ. ಇವರಿಬ್ಬರೂ ತಂಡದಲ್ಲಿ ಒಬ್ಬ ನುರಿತ ಬ್ಯಾಟರ್ ಪಾತ್ರವನ್ನು ನಿಭಾಯಿಸಲಿದ್ದಾರೆ. ಇದೇ ವೇಳೆ ಭವಿಷ್ಯದ ದೃಷ್ಟಿಯಿಂದ ಶುಭಮನ್ ಗಿಲ್ ಅವರಿಗೆ ಪಟ್ಟವನ್ನು ಕಟ್ಟಲಾಗಿದೆ. ಅಲ್ಲದೆ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಅವರಿಗೆ ಬಿಸಿಸಿಐ ಆಯ್ಕೆ ಸಮಿತಿ ಖಡಕ ಸೂಚನೆಯನ್ನು ನೀಡಿದೆ.
ಟೀಮ್ ಇಂಡಿಯಾವನ್ನು ಆಸ್ಟ್ರೇಲಿಯಾ ಪ್ರವಾಸದಲ್ಲಿ ಶುಭಮನ್ ಗಿಲ್ ಅವರು ಮುನ್ನಡೆಸಲಿದ್ದಾರೆ. ಈ ಮೂಲಕ 2027ರಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ನಲ್ಲಿ ಗಿಲ್ ಭಾರತದ ನಾಯಕರಾಗಲಿದ್ದಾರೆ ಎಂಬುದಂತೂ ಸತ್ಯ ಆದಂತೆ ಕಾಣುತ್ತಿದೆ. ತಂಡದ ಉಪನಾಯಕನ ಜವಾಬ್ದಾರಿಯನ್ನು ಶ್ರೇಯಸ್ ಅಯ್ಯರ್ ಅವರಿಗೆ ನೀಡಲಾಗಿದೆ. ಇನ್ನು ಟಿ20 ಹಾಗೂ ಟೆಸ್ಟ್ ಕ್ರಿಕೆಟ್ನಿಂದ ಈಗಾಗಲೇ ದೂರ ಸರಿದಿರುವ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅವರಿಗೂ ತಂಡದಲ್ಲಿ ಸ್ಥಾನ ನೀಡಲಾಗಿದೆ.

ಬಿಸಿಸಿಐ ಆಯ್ಕೆ ಸಮಿತಿಯ ಅಧ್ಯಕ್ಷ ಅಜಿತ್ ಅಗರ್ಕರ್ ಅವರು ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅವರ ಬಗ್ಗೆ ದೊಡ್ಡ ಹೇಳಿಕೆಯನ್ನು ನೀಡಿದ್ದಾರೆ. ಈ ಆಟಗಾರರನ್ನು ಸಹ ಬೇರೆ ಆಟಗಾರರಂತೆ ನೋಡಲಾಗುತ್ತದೆ. ಇವರಿಗೂ ಯಾವುದೇ ವಿಶೇಷ ವಿನಾಯಿತಿಗಳು ಇಲ್ಲ. ಈ ಇಬ್ಬರೂ ಸ್ಟಾರ್ ಆಟಗಾರರು ತಮಗೆ ಅವಕಾಶ ಸಿಕ್ಕಾಗಲೆಲ್ಲಾ ವಿಜಯ್ ಹಜಾರೆ ಟ್ರೋಫಿಯಂತಹ ದೇಶೀಯ ಪಂದ್ಯಾವಳಿಗಳಲ್ಲಿ ಆಡುವುದು ಸಹ ಮುಖ್ಯ ಎಂದು ಹೇಳಿದ್ದಾರೆ.
ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಇಬ್ಬರಿಗೂ ದೇಶೀಯ ಕ್ರಿಕೆಟ್ ಆಡುವುದರಿಂದ ಯಾವುದೇ ವಿನಾಯಿತಿ ಸಿಗುವ ಸಾಧ್ಯತೆ ಇಲ್ಲ. ಇವರು ಲಭ್ಯರಿದ್ದಾಗಲೆಲ್ಲಾ ದೇಶೀಯ ಕ್ರಿಕೆಟ್ನಲ್ಲಿ ಆಡಬೇಕು. ರೋಹಿತ್ ಮತ್ತು ಕೊಹ್ಲಿ ಅವರ ಆಯ್ಕೆಯು ಅರ್ಹತೆಯ ಆಧಾರದ ಮೇಲೆ ಇರುತ್ತದೆ ಎಂದು ಅಗರ್ಕರ್ ಸೂಚಿಸಿದ್ದಾರೆ.
ಟೀಮ್ ಇಂಡಿಯಾ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯ ಬಳಿಕ ಅಕ್ಟೋಬರ್ನಲ್ಲಿ ಆಸ್ಟ್ರೇಲಿಯಾ ಪ್ರವಾಸವನ್ನು ಬೆಳೆಸಲಿದೆ. ಈ ವೇಳೆ ಮೊದಲು ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಡಲಿದ್ದು, ಆ ಬಳಿಕ ಟಿ20 ಸರಣಿಯನ್ನು ಆಡಲಿದೆ. ಆಸೀಸ್ ವಿರುದ್ಧದ ಟಿ20 ಸರಣಿಗೂ ತಂಡವನ್ನು ಪ್ರಕಟಿಸಲಾಗಿದ್ದು, ಸೂರ್ಯಕುಮಾರ್ ತಂಡವನ್ನು ಮುನ್ನಡೆಸಲಿದ್ದಾರೆ.