
ಬಿಸಿಸಿಐ: ಸಯ್ಯದ್ ಮುಷ್ತಾಕ್ ಟ್ರೋಫಿ ಟಿ20 ಟೂರ್ನಿಯನ್ನು ಯಶಸ್ವಿಯಾಗಿ ಆಯೋಜಿಸಿದ ಬಳಿಕ 50 ಓವರ್ಗಳ ವಿಜಯ್ ಹಜಾರೆ ಟ್ರೋಫಿ, ಹಿರಿಯ ಮಹಿಳೆಯರ ಏಕದಿನ ಕ್ರಿಕೆಟ್ ಟೂರ್ನಿ ಮತ್ತು ಅಂಡರ್-19 ಮಟ್ಟದ ವಿನೂ ಮಂಕಡ್ ಟ್ರೋಫಿ ಟೂರ್ನಿ ಆಯೋಚಿಸಲು ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ ಮುಂದಾಗಿದೆ.
ಟೂರ್ನಿಗಳ ಆಯೋಜನೆಗೆ ಸಂಬಂಧಿಸಿ ರಾಜ್ಯಗಳಲ್ಲಿ ಕೊರೊನಾ ಪ್ರಕರಣಗಳ ಬಗ್ಗೆ ಅಭಿಪ್ರಾಯ ನೀಡುವಂತೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ರಾಜ್ಯಗಳ ಕ್ರಿಕೆಟ್ ಅಸೋಸಿಯೇಶನ್ಗಳಿಗೆ ಪತ್ರ ಕಳುಹಿಸಿದ್ದಾರೆ. ರಾಜ್ಯ ಕ್ರೀಡಾ ಮಂಡಳಿಗಳ ಅಭಿಪ್ರಾಯದ ಮೇರೆಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎನ್ನಲಾಗಿದೆ.
'ಕೊರೊನಾವೈರಸ್ ಪಿಡುಗು ನಮ್ಮಲ್ಲಿ ಪ್ರತಿಯೊಬ್ಬರನ್ನೂ ಪರೀಕ್ಷಿಸಿದೆ. ಅದು ತಾಗದ ಬದುಕೇ ಇಲ್ಲ. ನಿಮ್ಮ ಬೆಂಬಲ ಇರದಿದ್ದರೆ ತುಂಬಾ ಕಷ್ಟವಾಗುತ್ತಿತ್ತು. ನಿಮ್ಮ ಬೆಂಬಲದೊಂದಿಗೆ ನಾವು ಪುರುಷರ ವಿಭಾಗದ ದೇಸಿ ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳನ್ನು ನಡೆಸಲು ಸಾಧ್ಯವಾಯ್ತು,' ಎಂದು ಪತ್ರದಲ್ಲಿ ಬರೆಯಲಾಗಿದೆ.
'ಹಿರಿಯ ಮಹಿಳೆಯರ ಏಕದಿನ ಟೂರ್ನಿ ನಡೆಸಲು ಮುಂದಾಗುತ್ತಿದ್ದೇವೆ ಎಂದು ತಿಳಿಸಲು ಖುಷಿಪಡುತ್ತೇನೆ. ಇದೇ ವೇಳೆ ವಿಜಯ್ ಹಜಾರೆ, ಅಂಡರ್ 19 ವಿಭಾಗದವರಿಗೆ ವಿನೂ ಮಂಕಡ್ ಟ್ರೋಫಿ ನಡೆಸುವುದರಲ್ಲಿದ್ದೇವೆ. ದೇಸಿ ಕ್ರಿಕೆಟ್ 2021ಕ್ಕೆ ಸಂಬಂಧಿಸಿ ಅಭಿಪ್ರಾಯ ತಿಳಿಸಿದ ಬಳಿಕ ನಿರ್ಧರಿಸಲಿದ್ದೇವೆ,' ಎಂದು ಶಾ ಬರೆದಿದ್ದಾರೆ ಎನ್ನಲಾಗಿದೆ.