ಟೀಮ್ ಇಂಡಿಯಾ ತವರಿನಲ್ಲಿ ನಡೆದ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ವೈಟ್ ವಾಷ್ ಸೋಲು ಅನುಭವಿಸಿದೆ. ನ್ಯೂಜಿಲೆಂಡ್ ಆಡಿದ ಮೂರು ಪಂದ್ಯಗಳಲ್ಲಿ ಗೆಲುವು ದಾಖಲಿಸಿ ಎಲ್ಲರ ಚಿತ್ತ ಕದ್ದಿದೆ. ಈ ಸೋಲಿನ ಬಳಿಕ ಟೀಮ್ ಇಂಡಿಯಾದ ಪ್ರದರ್ಶನದ ಬಗ್ಗೆ ಪ್ರಶ್ನೆಗಳು ಎದ್ದಿವೆ. ಟೀಮ್ ಇಂಡಿಯಾದ ಸ್ಟಾರ್ ಆಟಗಾರರು ಸೇರಿದಂತೆ ನೂತನ ಕೋಚ್ ಗೌತಮ್ ಗಂಭೀರ್ ಅವರ ಕೋಚಿಂಗ್ ಮೇಲೂ ಪ್ರಶ್ನೆಗಳು ಕೇಳಿ ಬರುತ್ತಿವೆ.
ನ್ಯೂಜಿಲೆಂಡ್ ವಿರುದ್ಧ ತವರಿನಲ್ಲಿ ಟೀಮ್ ಇಂಡಿಯಾ ಸೋಲು ಕಂಡಿದ್ದು, ಗೌತಮ್ ಗಂಭೀರ್ ಅವರಿಗೆ ನುಂಗಲಾರದ ತುತ್ತಾಗಿದೆ. ಈಗ ಬರುತ್ತಿರುವ ಸುದ್ದಿಗಳ ಪ್ರಕಾರ ಬಿಸಿಸಿಐ ಶೀಘ್ರದಲ್ಲಿ ಗೌತಮ್ ಗಂಭೀರ್ ಅವರೊಂದಿಗೆ ಸಭೆ ನಡೆಸಿ ದೊಡ್ಡ ನಿರ್ಧಾರವನ್ನು ಕೈ ಗೊಳ್ಳುವ ಸಾಧ್ಯತೆ ಇದೆ.

ಟೈಮ್ಸ್ ಆಫ್ ಇಂಡಿಯಾದ ವರದಿಯ ಪ್ರಕಾರ, ಬಿಸಿಸಿಐ ಶೀಘ್ರದಲ್ಲೇ ಟೀಮ್ ಇಂಡಿಯಾದ ನೂತನ ಕೋಚ್ ಅವರೊಂದಿಗೆ ಸಮಾಲೋಚನೆ ನಡೆಸುವ ಸಾಧ್ಯತೆ ಇದೆ. ಗೌತಮ್ ಗಂಭೀರ್ ಹಾಕಿಕೊಂಡಿರುವ ಮುಂದಿನ ಯೋಜನೆಗಳ ಬಗ್ಗೆಯೂ ಈ ವೇಳೆ ಚರ್ಚಿಸುವ ಸಾಧ್ಯತೆ ಇದೆ. ಇನ್ನು ತವರಿನಲ್ಲಿ ನಡೆದ ನ್ಯೂಜಿಲೆಂಡ್ ಸರಣಿಯ ವೇಳೆ ಸ್ಪಿನ್ ಟ್ರ್ಯಾಕ್ಗೆ ಬೇಡಿಕೆ ಇಟ್ಟಿದ್ದು ಎಲ್ಲರನ್ನು ಚಕಿತ ಗೊಳಿಸಿತ್ತು ಎಂದು ವರದಿಯೊಂದು ತಿಳಿಸಿದೆ. ಬಿಸಿಸಿಐ ಶೀಘ್ರದಲ್ಲೇ ಗೌತಮ್ ಗಂಭೀರ್ ಹಾಗೂ ಸಹಾಯಕ ಸಿಬ್ಬಂದಿಗಳ ಭವಿಷ್ಯದ ಯೋಜನೆಗಳ ಬಗ್ಗೆ ಚರ್ಚೆ ನಡೆಸಲಿದೆ.
ಟೀಮ್ ಇಂಡಿಯಾದ ನೂತನ ಕೋಚ್ ಆಗುವ ಮುನ್ನ ಗೌತಮ್ ಗಂಭೀರ್, ಹಲವು ಬೇಡಿಕೆಗಳನ್ನು ಬಿಸಿಸಿಐ ಮುಂದೆ ಇಟ್ಟಿದ್ದರು. ಈ ಎಲ್ಲ ಬೇಡಿಕೆಗಳಿಗೆ ಬಿಸಿಸಿಐ ಅಸ್ತು ಎಂದಿದೆ. ಎನ್ಸಿಎದಲ್ಲಿ ತಯಾರಾದ ಕೋಚ್ಗೆ ಮನ್ನಣೆ ನೀಡುವುದು ಬಿಸಿಸಿಐ ನಿಲುವಾಗಿತ್ತು. ಅಲ್ಲದೆ ಆಯ್ಕೆಯ ವೇಳೆಯೂ ಅವರಿಗೆ ಬುಲಾವು ನೀಡಲಾಗಿತ್ತು ಎಂದು ತಿಳಿದು ಬಂದಿದೆ. ಆದರೆ ನ್ಯೂಜಿಲೆಂಡ್ ವಿರುದ್ಧ ತವರಿನಲ್ಲಿ ಹೀನಾಯ ಸೋಲು ಕಂಡ ಬಳಿಕ ಇವರ ಕೋಚಿಂಗ್ ಬಗ್ಗೆ ಪ್ರಶ್ನೆಗಳು ಎದ್ದಿವೆ.
ಎರಡನೇ ಹಾಗೂ ಮೂರನೇ ಟೆಸ್ಟ್ನಲ್ಲಿ ಸ್ಪಿನ್ ಟ್ರ್ಯಾಕ್ ನಿರ್ಮಿಸುವಂತೆ ಬೇಡಿಕೆ ಇಡಲಾಗಿತ್ತು. ಅದರಂತೆ ಪುಣೆ ಹಾಗೂ ಮುಂಬೈನಲ್ಲಿ ಸ್ಪಿನ್ ಟ್ರ್ಯಾಕ್ ನಿರ್ಮಿಸಲಾಗಿತ್ತು. ಗೌತಮ್ ಗಂಭಿರ್ ಅವರ ನಿರ್ಧಾರ ಅಂಗಳದಲ್ಲಿ ಕೈ ಕೊಟ್ಟಿದೆ. ಟೀಮ್ ಇಂಡಿಯಾದ ಸ್ಪಿನ್ ಬೌಲರ್ಗಳು ಈ ಮೈದಾನದಲ್ಲಿ ಅಬ್ಬರಿಸಬೇಕಿತ್ತು. ಆದರೆ ನ್ಯೂಜಿಲೆಂಡ್ನ ಮಿಚೆಲ್ ಸ್ಯಾಂಟ್ನರ್ ಹಾಗೂ ಅಜಾಜ್ ಪಟೇಲ್ ಪಿಚ್ನ ಸಂಪೂರ್ಣ ಲಾಭ ಪಡೆದು ಬೌಲ್ ಮಾಡಿದರು. ಎರಡನೇ ಟೆಸ್ಟ್ನಲ್ಲಿ ಸ್ಯಾಂಟ್ನರ್ 13 ವಿಕೆಟ್ ಪಡೆದರೆ, ಕೊನೆಯ ಟೆಸ್ಟ್ನಲ್ಲಿ ಅಜಾಜ್ ಪಟೇಲ್ 10 ವಿಕೆಟ್ ಪಡೆದರು.

ಇನ್ನು ಟೀಮ್ ಇಂಡಿಯಾದ ಬ್ಯಾಟಿಂಗ್ ಆರ್ಡರ್ನಲ್ಲಿ ಪದೇ ಪದೇ ಬದಲಾವಣೆ ಮಾಡಿದ್ದಕ್ಕೂ ಸಹ ಟೀಕೆಗಳು ಕೇಳಿ ಬಂದಿವೆ. ಬೆಂಗಳೂರಿನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ್ದು ಏಕೆ ಎಂಬ ಪ್ರಶ್ನೆಗಳು ಎದ್ದಿವೆ. ಇನ್ನು ಯುವ ಆಟಗಾರ ಸರ್ಫರಾಜ್ ಖಾನ್ ಅವರ ಬ್ಯಾಟಿಂಗ್ ಕ್ರಮಾಂಕವನ್ನು ಪದೇ ಪದೇ ಬದಲಾಯಿಸಿದ್ದು ಏಕೆ ಎಂಬ ಪ್ರಶ್ನೆಗಳು ಎದ್ದಿವೆ. ಹೀಗಿರುವಾಗ ಗಂಭೀರ್ ಪ್ರವಾಸದ ಪ್ಲ್ಯಾನ್ ಏನು ಮಾಡುತ್ತಾರೆ ಎಂಬ ಪ್ರಶ್ನೆಗಳು ಮೂಡುವಂತೆ ಮಾಡಿವೆ.