ಟೀಮ್ ಇಂಡಿಯಾದಲ್ಲಿ ಕಮ್ ಬ್ಯಾಕ್ ಮಾಡಬೇಕು ಎಂದು ಕನಸು ಕಾಣುತ್ತಿದ್ದ ಕರ್ನಾಟಕದ ಸ್ಟಾರ್ ಆಟಗಾರ ಕರುಣ್ ನಾಯರ್ ಅವರ ಕನಸು ನನಸಾಗುವ ಹಂತದಲ್ಲಿ ಬಂದು ನಿಂತಿದೆ. ದೇಶೀಯ ಟೂರ್ನಿಯಲ್ಲಿ ಸ್ಥಿರ ಪ್ರದರ್ಶನ ನೀಡಿದ ಪರಿಣಾಮ ಇವರಿಗೆ ರಾಷ್ಟ್ರೀಯ ತಂಡಕ್ಕೆ ಆಯ್ಕೆ ಮಾಡಲಾಗಿತ್ತು. ಇವರು ಈಗ ಇಂಗ್ಲೆಂಡ್ ಪ್ರವಾಸದಲ್ಲಿದ್ದು, ಮತ್ತೊಮ್ಮೆ ಅದೃಷ್ಟ ಪರೀಕ್ಷೆ ನಡೆಸಲು ಸಿದ್ಧರಾಗಿದ್ದಾರೆ. ಈ ಮೂಲಕ ಅಂದು ತವರಿನಲ್ಲಿ ಇಂಗ್ಲೆಂಡ್ ಬೌಲರ್ಗಳಿಗೆ ಕಾಟ ನೀಡಿದಂತೆ, ಈ ಬಾರಿ ಇಂಗ್ಲೆಂಡ್ನಲ್ಲಿ ಕಾಟ ನೀಡಲು ಪ್ಲ್ಯಾನ್ ಮಾಡಿಕೊಂಡಿದ್ದಾರೆ.
ಟೀಮ್ ಇಂಡಿಯಾದ ಅನುಭವಿ ಆಟಗಾರರಾದ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಅವರು ನಿವೃತ್ತರಾದ ಬಳಿಕ, ಇವರ ಸ್ಥಾನದ ಮೇಲೆ ಯುವ ಆಟಗಾರರು ಕಣ್ಣು ನೆಟ್ಟಿದ್ದಾರೆ. ಈ ವೇಳೆ ಕರುಣ್ ಸಹ ಈಗಾಗಲೇ ಒಂದು ಸ್ಥಾನದ ಮೇಲೆ ಕರ್ಚಿಫ್ ಹಾಕಿದ್ದಾರೆ. ಇವರು ಇಂಗ್ಲೆಂಡ್ ಪ್ರವಾಸದಲ್ಲಿ ಈಗಾಗಲೇ ಸ್ಥಿರ ಪ್ರದರ್ಶನವನ್ನು ನೀಡಿ ಗಮನ ಸೆಳೆದಿದ್ದಾರೆ. ಅಲ್ಲದೆ ಇವರಿಗೆ ಕೌಂಟಿ ಕ್ರಿಕೆಟ್ ಆಡಿದ ಅನುಭವ ಸಹ ಇದ್ದು, ಈ ಅನುಭವವನ್ನು ಇವರು ಸಂಪೂರ್ಣವಾಗಿ ಬಳಸಿಕೊಳ್ಳಲು ಪ್ಲ್ಯಾನ್ ಮಾಡಿದ್ದಾರೆ.

ದೇಶೀಯ ಟೂರ್ನಿಗಳಲ್ಲಿ ಅಬ್ಬರದ ಪ್ರದರ್ಶನ ನೀಡಿದ ಕರುಣ್ ನಾಯರ್ ಅವರಿಗೆ ಭಾರತ "ಎ" ತಂಡದಲ್ಲಿ ಸ್ಥಾನ ನೀಡಲಾಯಿತು. ಇವರು ಈ ಅವಕಾಶವನ್ನು ಎರಡೂ ಕೈಗಳಿಂದ ಬಳಸಿಕೊಂಡು ರನ್ ಮಹಲ್ ಕಟ್ಟಿದರು. ಕರುಣ್ ಭಾರತದ ಪರ ಅನಧಿಕೃತ ಟೆಸ್ಟ್ ಪಂದ್ಯದಲ್ಲಿ ಅತಿ ಹೆಚ್ಚು ರನ್ ಬಾರಿಸಿದ ಬ್ಯಾಟರ್ ಎಂಬ ಹೆಗ್ಗಳಿಕೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಇವರ ಈ ಪ್ರದರ್ಶನದ ಫಲವಾಗಿ ಇವರಿಗೆ ಪ್ಲೇಯಿಂಗ್ ಇಲೆವೆನ್ನಲ್ಲಿ ಸ್ಥಾನ ಲಭಿಸಬಹುದು ಎಂಬ ಲೆಕ್ಕಾಚಾರಗಳು ಆರಂಭವಾಗಿವೆ.
ಎಂಟು ವರ್ಷಗಳ ಬಳಿಕ ಕರುಣ್ ನಾಯರ್ ಟೆಸ್ಟ್ ಕ್ರಿಕೆಟ್ಗೆ ಮರಳುವ ಸೂಚನೆಯನ್ನು ಬಿಸಿಸಿಐ ಒಂದು ಪೋಸ್ಟ್ ನಿಡಿದೆ. ಈ ವಿಡಿಯೋದಲ್ಲಿ ಕರುಣ್ ನಾಯರ್ ಸ್ನೇಹಿತ ಕೆಎಲ್ ರಾಹುಲ್ ವಿಶೇಷ ಸಂದೇಶವನ್ನು ನೀಡಿದ್ದಾರೆ. ಈ ವಿಡಿಯೋದಲ್ಲಿ ರಾಹುಲ್, ಕರುಣ್ ಹೋರಾಟ ಹಾದಿಯ ಬಗ್ಗೆ ಮೆಲಕು ಹಾಕಿದ್ದಾರೆ. ಕರುಣ್ ಬಗ್ಗೆ ಮಾತನಾಡಿರುವ ರಾಹುಲ್, "ನಾಯರ್ ಟೀಮ್ ಇಂಡಿಯಾದಿಂದ ಹೊರಗುಳಿದ ನಂತರ ಇಂಗ್ಲೆಂಡ್ನಲ್ಲಿ ಕೌಂಟಿ ಕ್ರಿಕೆಟ್ ಆಡಿದ್ದಾರೆ. ಈ ಕ್ಷಣ ನಿಜಕ್ಕೂ ಅವರಿಗೆ ವಿಶೇಷ. ಕೌಂಟಿ ಕ್ರಿಕೆಟ್ನಲ್ಲಿ ಅವರು ಆಡಿದ ಅನುಭವ ಮುಂದಿನ ದಿನಗಳಲ್ಲಿ ತಂಡಕ್ಕೆ ನೆರವಾಗಲಿದೆ ಎಂದಿದ್ದಾರೆ.

ಈ ಸುವರ್ಣ ಅವಕಾಶ ಮತ್ತೆ ಲಭಿಸಿದಕ್ಕೆ ಕರುಣ್ ನಾಯರ್ ಸಂತಸವನ್ನು ವ್ಯಕ್ತ ಪಡಿಸಿದ್ದಾರೆ. ಮತ್ತೆ ಟೀಮ್ ಇಂಡಿಯಾಕ್ಕೆ ಕಮ್ ಬ್ಯಾಕ್ ಮಾಡಲು ಅವಕಾಶ ಸಿಕ್ಕಿದ್ದು ಅದೃಷ್ಟ ಎಂದು ಭಾವಿಸುತ್ತೇನೆ. ಈ ಅವಕಾಶವನ್ನು ಬಳಸಿಕೊಳ್ಳಲು ನಾನು ಪ್ಲ್ಯಾನ್ ಮಾಡಿದ್ದೇನೆ. ಈ ಅವಕಶ ಲಭಿಸಿದಕ್ಕೆ ನನ್ನಲ್ಲಿ ಬಣ್ಣಿಸಲಾಗದ ಭಾವನೆಗಳಿವೆ. ನನ್ನ ಮೇಲಿನ ಭರವಸೆಯನ್ನು ಮೈದಾನದಲ್ಲಿ ಪ್ರದರ್ಶನ ನೀಡಿ ಉತ್ತರ ನೀಡುವೆ ಎಂದಿದ್ದಾರೆ.