ಏಷ್ಯಾ ಕಪ್ ಟಿ20 ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯ ಮುಗಿದು ದಿನಗಳೆ ಕಳೆದಿವೆ. ಈ ಟೂರ್ನಿಯಲ್ಲಿ ಟೀಮ್ ಇಂಡಿಯಾ ಭರ್ಜರಿ ಪ್ರದರ್ಶನ ನೀಡಿ ಜಯ ಸಾಧಿಸಿದೆ. ಈ ಟೂರ್ನಿಯ ಫೈನಲ್ ಪಂದ್ಯದಲ್ಲಿ ಭಾರತ, ಪಾಕಿಸ್ತಾನ ತಂಡವನ್ನು ಮಣಿಸಿ, ಚಾಂಪಿಯನ್ ಪಟ್ಟವನ್ನು ಅಲಂಕರಿಸಿತು. ಈ ವೇಳೆ ಟೀಮ್ ಇಂಡಿಯಾ ಟ್ರೋಫಿಯನ್ನು ಅಲಂಕರಿಸಿದರೂ, ಪ್ರಶಸ್ತಿಯನ್ನು ಎತ್ತಿ ಸಂಭ್ರಮಿಸಲಿಲ್ಲ. ಇದು ದೊಡ್ಡ ವಿವಾದವನ್ನು ಸೃಷ್ಟಿಸಿತು.
ಏಷ್ಯಾ ಕಪ್ ಟಿ20 ಸಮಾರೋಪ ಸಮಾರಂಭದಲ್ಲಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಹಾಗೂ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷರೂ ಆಗಿರುವ ಮೊಹ್ಸಿನ್ ನಖ್ವಿ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿದ್ದರಿಂದ ಟೀಮ್ ಇಂಡಿಯಾ ಸಮರೋಪವನ್ನು ಬಹಿಷ್ಕರಿಸಿತ್ತು. ನಖ್ವಿ ಅವರು ಇದ್ದ ವೇದಿಕೆಯನ್ನು ತಾವು ಏರುವುದಿಲ್ಲ ಎಂದು ಭಾರತ ಹೇಳಿತ್ತು. ಅದಾದ ಬಳಿಕ ಏಷ್ಯಾ ಕಪ್ನ್ನು ನಖ್ವಿ ಪಾಕ್ಗೆ ಕರೆದೊಯ್ದು ವಿವಾದವನ್ನು ಸೃಷ್ಟಿಸಿದರು.

ಪಿಸಿಬಿ ಅಧ್ಯಕ್ಷರ ಈ ನಡೆ ಬಹಳ ಚರ್ಚೆಗೆ ಕಾರಣವಾಯಿತು. ಆ ಬಳಿಕ ನಖ್ವಿ ವಿವಾದದಿಂದ ಪಾರಾಗಲು ಪ್ರಶಸ್ತಿಯನ್ನು ಪ್ರತೇಕ ಕಾರ್ಯಕ್ರವನ್ನು ಮಾಡಿ ಭಾರತಕ್ಕೆ ನೀಡುವುದಾಗಿ ತಿಳಿಸಿತು. ಆಗಲೂ ಭಾರತ ಒಪ್ಪದಾಗ, ಟ್ರೋಫಿಯನ್ನು ದುಬೈನಲ್ಲಿರುವ ಏಷ್ಯನ್ ಕೌನ್ಸಿಲ್ ಸಭೆಯ ಲಾಕರ್ನಲ್ಲಿ ಇಟ್ಟು ಬೀಗ ಹಾಕಲಾಗಿತ್ತು. ಆಗಲೂ ಈ ಸುದ್ದಿ ಬಹು ಚರ್ಚೆಗೆ ಗ್ರಾಸವಾಗಿತ್ತು.
ಬಿಸಿಸಿಐ ಈಗ ನಖ್ವಿ ನಿರ್ಧಾರವನ್ನು ಐಸಿಸಿ ಮುಂದಿಡುವ ದೊಡ್ಡ ನಿರ್ಧಾರವನ್ನು ಮಾಡಿದೆ. ಬಿಸಿಸಿಐ ಎಸಿಸಿ ಮುಖ್ಯಸ್ಥ ಮೊಹ್ಸಿನ್ ನಖ್ವಿಗೆ ಇಮೇಲ್ ಬರೆದು ಭಾರತಕ್ಕೆ ಟ್ರೋಫಿಯನ್ನು ಹಸ್ತಾಂತರಿಸುವಂತೆ ಕೇಳಿದೆ ಎಂದು ವರದಿಯಾಗಿದೆ. ಎಸಿಸಿ ಮುಖ್ಯಸ್ಥರು ಈ ಇಮೇಲ್ಗೆ ಪ್ರತಿಕ್ರಿಯೆ ನೀಡದೇ ಇದ್ದರೆ ಈ ವಿಷಯವನ್ನು ಐಸಿಸಿಗೆ ತಿಳಿಸಲಾಗುವುದು ಎಂದು ಬಿಸಿಸಿಐ ಎಚ್ಚರಿಕೆ ನೀಡಿದೆ.
ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಭಾರತ ಹಾಗೂ ಪಾಕ್ ತಂಡಗಳು ಒಟ್ಟು ಮೂರು ಬಾರಿ ಮುಖಾಮುಖಿ ಆಗಿದ್ದವು. ಈ ಮೂರು ಪಂದ್ಯಗಳನ್ನು ಭಾರತ ಗೆದ್ದು ಬೀಗಿತ್ತು. ಭಾರತ ಈ ಟೂರ್ನಿಯಲ್ಲಿ ಪಾಕ್ ತಂಡದೊಂದಿಗೆ ಹಸ್ತಲಾಘವ ಮಾಡಲಿಲ್ಲ. ಪಂದ್ಯ ಮುಗಿದ ಬಳಿಕ ಕ್ರೀಡಾ ಸ್ಪೂರ್ತಿ ಮೆರೆಯದ ಭಾರತದ ನಡೆಯ ವಿರುದ್ಧ ಪಾಕ್ ಕೆಂಡ ಕಾರಿತ್ತು. ಭಾರತ ಹಾಗೂ ಪಾಕಿಸ್ತಾನ ನಡುವಣ ಉದ್ವೀಗ್ನತೆ ಹೆಚ್ಚಾದ ಬಳಿಕದ ಉಭಯ ದೇಶಗಳು ಇದೇ ಮೊದಲ ಬಾರಿಗೆ ಅಖಾಡಕ್ಕೆ ಎಂಟ್ರಿ ನೀಡಿದ್ದರಿಂದ ರೋಚಕತೆ ಮನೆ ಮಾಡಿತ್ತು.