ಟೀಮ್ ಇಂಡಿಯಾ ಹಾಗೂ ಆಸ್ಟ್ರೇಲಿಯಾ ನಡುವಣ ಏಕದಿನ ಸರಣಿ ಅಕ್ಟೋಬರ್ನಲ್ಲಿ ಆರಂಭವಾಗಲಿದೆ. ಈ ಸರಣಿಗೆ ಭಾರತ ತಂಡವನ್ನು ಶನಿವಾರ ಪ್ರಕಟಿಸಲಾಗಿದೆ. ನಿರೀಕ್ಷೆಯಂತೆ ಈ ಸರಣಿಯಲ್ಲಿ ಟೀಮ್ ಇಂಡಿಯಾದ ಸೂಪರ್ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಸ್ಥಾನ ಪಡೆದಿದ್ದಾರೆ. ಆದರೆ ಈ ಇಬ್ಬರೂ ಆಟಗಾರರು ನೂತನ ನಾಯಕ ಶುಭಮನ್ ಗಿಲ್ ಅಡಿಯಲ್ಲಿ ಆಡಲಿದ್ದಾರೆ. ಏಕಾಏಕಿ ರೋಹಿತ್ ಶರ್ಮಾ ಅವರನ್ನು ಏಕದಿನ ನಾಯಕತ್ವದಿಂದ ಕೆಳಗಿಳಿಸಿದ್ದು ಏಕೆ ಎಂಬ ಪ್ರಶ್ನೆಗಳು ಉದ್ಭವಿಸುತ್ತವೆ. ಇದಕ್ಕೆ ಬಿಸಿಸಿಐ ಮೂಲಗಳಿಂದ ಕೆಲವು ಮಾಹಿತಿ ಸಿಕ್ಕಿದೆ.
ಶುಭಮನ್ ಗಿಲ್ ಅವರನ್ನು ನಾಯಕರನ್ನಾಗಿ ನೇಮಕ ಮಾಡಿದ್ದ ಕ್ರಿಕೆಟ್ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಯಿತು. ಈ ವೇಳೆ ರೋಹಿತ್ ಅವರನ್ನು ನಾಯಕತ್ವದಿಂದ ಕೆಳಗಿಳಿಸಿರುವ ಹಿಂದಿನ ಉದ್ದೇಶ ಏನು ಎಂಬ ಪ್ರಶ್ನೆಗಳು ಸಹ ಹುಟ್ಟಿಕೊಂಡವು. ಆದರೆ ಇದೆಲ್ಲವೂ ಮೊದಲೇ ನಿರ್ಧಾರಿಸಿರಬಹುದು ಎಂಬುದು ಈಗ ತಿಳಿದು ಬರುತ್ತಿದೆ. ರೋಹಿತ್ ಶರ್ಮಾ ಏಕದಿನ ವಿಶ್ವಕಪ್ ಆಡುತ್ತಾರೋ ಇಲ್ಲವೋ ಎಂಬುದರ ಬಗ್ಗೆ ಇನ್ನು ಖಚಿತತೆ ಇಲ್ಲ ಎಂದು ಆಯ್ಕೆ ಸಮಿತಿಯ ಅಧ್ಯಕ್ಷ ಅಜಿತ್ ಅಗರ್ಕರ್ ಸುಳಿವು ನೀಡಿದರು. ಈ ಅನಿಶ್ಚತೆ ವಿರಾಟ್ ಕೊಹ್ಲಿಗೂ ಅನ್ವಯವಾಗುತ್ತದೆ.

ಬಿಸಿಸಿಐ ಆಯ್ಕೆ ಸಮಿತಿ ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ದೃಷ್ಟಿಯಲ್ಲಿ ಇಟ್ಟುಕೊಂಡು ತಯಾರಿ ನಡೆಸುತ್ತಿದೆ ಎಂದು ತಿಳಿದು ಬಂದಿದೆ. ಹೀಗಾಗಿ ಕೆಲವು ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸುವ ಅನುಭವ ಸಿಗಲಿ ಎಂಬ ಉದ್ದೇಶದಿಂದಲೇ ಶುಭಮನ್ ಗಿಲ್ ಅವರಿಗೆ ಪಟ್ಟ ಕಟ್ಟಲಾಗಿದೆ. ಅಲ್ಲದೆ ಇವರಿಗೆ ನಾಯಕತ್ವ ನೀಡುವಂತೆ ಹಲವು ಧ್ವನಿ ಎತ್ತಿದ್ದರು.
ರೋಹಿತ್ ಶರ್ಮಾ ಅವರನ್ನು ಹಠಾತನೆ ಏಕದಿನ ಫಾರ್ಮೆಟ್ನಿಂದ ಕೆಳಗಿಳಿಸುವುದು ಸುಲಭದ ಕೆಲಸವಂತೂ ಆಗಿರಲಿಲ್ಲ. ಏಕೆಂದರೆ ಇವರ ಮುಂದಾಳತ್ವದಲ್ಲಿ ಟೀಮ್ ಇಂಡಿಯಾ ಚಾಂಪಿಯನ್ಸ್ ಟ್ರೋಫಿ ಗೆದ್ದಿತ್ತು. ಅಲ್ಲದೆ ರೋಹಿತ್ ಈ ಸರಣಿಯಲ್ಲಿ ಉತ್ತಮ ಟಚ್ನಲ್ಲಿದ್ದರು. ಇನ್ನು ರೋಹಿತ್ ಟಿ20 ಹಾಗೂ ಟೆಸ್ಟ್ಗೆ ನಿವೃತ್ತಿ ಘೋಷಿಸಿದ್ದರಿಂದ ಇವರು ಏಕದಿನ ಪಂದ್ಯಗಳನ್ನು ಮಾತ್ರ ಆಡಲಿದ್ದಾರೆ. ಅಲ್ಲದೆ ಇವರಿಗೆ ಹೆಚ್ಚಿನ ಮ್ಯಾಚ್ ಪ್ರ್ಯಾಕ್ಟಿಸ್ ಸಿಗುವುದಿಲ್ಲ ಎಂಬ ವಾದವಿದೆ.

ರೋಹಿತ್ ಹಾಗೂ ವಿರಾಟ್ ಅವರಿಗೆ ಏಕದಿನ ವಿಶ್ವಕಪ್ ವೇಳೆಗೆ ವಯಸ್ಸು ಆಗುತ್ತದೆ. ಅವರ ಫಾರ್ಮ್ ಆಧಾರಿಸಿ ಅವರನ್ನು ತಂಡದಲ್ಲಿ ಇಟ್ಟುಕೊಳ್ಳಬೇಕಾ ಎಂಬ ಪ್ರಶ್ನೆಗೆ ಉತ್ತರ ಹುಡುಕುವ ಕೆಲಸವನ್ನು ಬಿಸಿಸಿಐ ಆಯ್ಕೆ ಸಮಿತಿ ಮಾಡುವ ಸಾಧ್ಯತೆ ಇದೆ. ಇನ್ನು ಇದೇ ದೃಷ್ಟಿಯಿಂದ ಬಿಸಿಸಿಐ ಆಯ್ಕೆ ಸಮಿತಿ ಹಲವು ಯುವ ಆಟಗಾರರಿಗೆ ಮಣೆ ಹಾಕಿದ್ದು, ಮ್ಯಾಚ್ ಪ್ರ್ಯಾಕ್ಟಿಸ್ ಮಾಡಿಸುವ ಇರಾದೆಯನ್ನು ಹೊಂದಿದೆ. ಇನ್ನು ರೋಹಿತ್ ಶರ್ಮಾ ಅವರನ್ನು ಏಕದಿನ ಫಾರ್ಮೆಟ್ ನಾಯಕನ ಸ್ಥಾನದಿಂದ ಕೆಳಗಿಳಿಸಿರುವುದು ವಿರಾಟ್ ಭವಿಷ್ಯದ ಬಗ್ಗೆಯೂ ಯೋಚಿಸುವಂತೆ ಮಾಡಿದೆ.