ಐಸಿಸಿ ಟೂರ್ನಿಯ ಫೈನಲ್ನಲ್ಲಿ ಸೋಲಿನ ಸರಪಳಿ ಈ ಬಾರಿಯ ಟಿ20 ವಿಶ್ವಕಪ್ನಲ್ಲಿ ಕೊನೆಗೊಳ್ಳಬಹುದು. ಸತತ ಮೂರು ಟೂರ್ನಿಗಳಲ್ಲಿ ಐಸಿಸಿ ಟ್ರೋಫಿಯ ಫೈನಲ್ಗೆ ಏರಿದ್ದ ಭಾರತದ ಕಪ್ ಗೆಲ್ಲುವ ಆಸೆ ಫಲಿಸಲಿಲ್ಲ. ಇದನ್ನೇ ನೋಡುತ್ತಾ ಇದ್ದರೆ, ಟೀಮ್ ಇಂಡಿಯಾ ಕಪ್ ಗೆಲ್ಲುವ ಆಸೆ ಕ್ಷೀಣಿಸುತ್ತಿದೆ ಎಂದು ಅನಿಸುತ್ತಿತ್ತು. ಆದರೆ ಟೀಮ್ ಇಂಡಿಯಾದ ಮಾಜಿ ಆಟಗಾರ ಎರಡು ಬ್ರಹ್ಮಾಸ್ತ್ರವನ್ನು ಸಿದ್ಧಪಡಿಸಿದ್ದು, ಟೀಮ್ ಇಂಡಿಯಾದ ಶಸ್ತ್ರಾಗಾರಕ್ಕೆ ನೀಡಿದ್ದಾರೆ.
ಟಿ20 ವಿಶ್ವಕಪ್ಗೂ ಮುನ್ನ ಕೊನೆಯ ಅಂತಾರಾಷ್ಟ್ರೀಯ ಸರಣಿಗೆ ಪ್ರವೇಶಿಸಿದ್ದ ಭಾರತ ತಂಡಕ್ಕೆ, ಅಫ್ಘಾನಿಸ್ತಾನ ವಿರುದ್ಧದ ಮೊದಲ ಪಂದ್ಯದಲ್ಲಿ ಇಬ್ಬರು ಅಪಾಯಕಾರಿ ಭರವಸೆಯ ಆಟಗಾರರು ತಮ್ಮ ಶಕ್ತಿ ಪ್ರದರ್ಶಿಸಿದ್ದಾರೆ. ಮೊಹಾಲಿ ಟಿ20ಯಲ್ಲಿ 159 ರನ್ಗಳನ್ನು ಬೆನ್ನಟ್ಟಿ ಗೆಲ್ಲಿಸಿದ್ದ ಭಾರತ ತಂಡದ ಇಬ್ಬರು ಆಟಗಾರರು, ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಗರಡಿಯಲ್ಲಿ ಪಳಗಿದವರು.

ಅಫ್ಘಾನಿಸ್ತಾನ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭಾರತ 6 ವಿಕೆಟ್ಗಳ ಸುಲಭ ಜಯ ದಾಖಲಿಸಿ 1-0 ಮುನ್ನಡೆ ಸಾಧಿಸಿದೆ. ಈ ಪಂದ್ಯದಲ್ಲಿ 40 ಎಸೆತಗಳಲ್ಲಿ 60 ರನ್ ಗಳಿಸಿದ ಶಿವಂ ದುಬೆ. ಇವರು ಮಹೇಂದ್ರ ಸಿಂಗ್ ಧೋನಿ ಅವರ ವರ್ತನೆ ಮತ್ತು ಶೈಲಿಯಿಂದ ಆಟದಲ್ಲಿ ಬದಲಾವಣೆ ತಂದಿದ್ದಾರೆ. ದುಬೆ ಅವರ ಆಕ್ರಮಣಕಾರಿ ಅರ್ಧಶತಕದಿಂದ ಭಾರತ ಗುರುವಾರ ಆರು ವಿಕೆಟ್ಗಳ ಜಯ ಸಾಧಿಸಿತು. ಈ ಇನ್ನಿಂಗ್ಸ್ನೊಂದಿಗೆ ಅವರು ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಪಡೆದಿದ್ದಾರೆ.
ಪಂದ್ಯದ ಬಳಿಕ ಮಾತನಾಡಿದ ದುಬೆ "ನಾನು ಬ್ಯಾಟಿಂಗ್ಗೆ ಬಂದಾಗ, ಪಂದ್ಯವನ್ನು ಮುಗಿಸುವ ಬಗ್ಗೆ ಎಂಎಸ್ ಧೋನಿಯಿಂದ ನಾನು ಕಲಿತದ್ದನ್ನು ಕಾರ್ಯಗತಗೊಳಿಸಲು ಬಯಸಿದ್ದೆ. ಅವರು ವಿಭಿನ್ನ ಪರಿಸ್ಥಿತಿಗಳಲ್ಲಿ ಹೇಗೆ ಆಡಬೇಕೆಂದು ನನಗೆ ಕಲಿಸಿದರು. ಮತ್ತು ಅವರು ನನ್ನ ಬ್ಯಾಟಿಂಗ್ ಅನ್ನು ಪರಿಶೀಲಿಸುತ್ತಿದ್ದರೆ, ನಾನು ಉತ್ತಮವಾಗಿ ಆಡುತ್ತೇನೆ ಎಂದು ನನಗೆ ಎರಡು ಅಥವಾ ಮೂರು ಸಲಹೆಗಳನ್ನು ನೀಡಿದರು. ಅವರಿಂದಾಗಿ ನನ್ನ ಆತ್ಮವಿಶ್ವಾಸ ಹೆಚ್ಚಾಯಿತು ಎಂದಿದ್ದಾರೆ.

ದುಬೆ ಕಳೆದ ವರ್ಷ ಹ್ಯಾಂಗ್ಝೌ ಏಷ್ಯನ್ ಗೇಮ್ಸ್ನಲ್ಲಿ ಭಾರತದ ಪರ ಆಡಿದ್ದರು. ಆಸ್ಟ್ರೇಲಿಯಾ ವಿರುದ್ಧದ ಸ್ವದೇಶಿ ಟಿ20 ಸರಣಿಯಲ್ಲಿ ಭಾರತ ತಂಡದ ಭಾಗವಾಗಿದ್ದರೂ ಆಡುವ ಅವಕಾಶ ಸಿಗಲಿಲ್ಲ. ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಅವರನ್ನು ಆಯ್ಕೆ ಮಾಡಿರಲಿಲ್ಲ. ರೋಹಿತ್ ಶರ್ಮಾ ನಾಯಕತ್ವದಲ್ಲಿ ದುಬೆ ಧೋನಿಯ ಸ್ಥಾನವನ್ನು ಪಡೆದರು.
"ಧೋನಿ ಹಾಗೂ ರೋಹಿತ್ ಟಾಪ್ ಆರ್ಡರ್ನಲ್ಲಿ ಬ್ಯಾಟಿಂಗ್ ಮಾಡಲು ನನಗೆ ಅವಕಾಶ ಕೊಟ್ಟಿದ್ದಾರೆ. ಇನ್ನೂ ಮಾಡಲು ಸಾಕಷ್ಟು ಶ್ರಮವಿದೆ. ಅವರು ನನ್ನೊಂದಿಗೆ ಇದ್ದಾರೆ ಮತ್ತು ನಾನು ಚೆನ್ನಾಗಿ ಆಡಬೇಕೆಂದು ನನಗೆ ತಿಳಿದಿದೆ ಎಂದಿದ್ದಾರೆ.
ಅಫ್ಘಾನಿಸ್ತಾನ ವಿರುದ್ಧದ ಮೊದಲ ಟಿ20 ಮುಗಿದ ನಂತರ ರಿಂಕು ಸಿಂಗ್ ಕೂಡ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಬಗ್ಗೆ ಮಾತನಾಡಿದ್ದಾರೆ. ಶಾಂತವಾಗಿ, ಬಿಗ್ ಹಿಟ್ ಬಾರಿಸುವ ಸಾಮರ್ಥ್ಯದ ಬಗ್ಗೆ ಅವರು ಹೇಳಿಕೊಟ್ಟಿದ್ದಾರೆ. ನಾನು ಐಪಿಎಲ್ ಸಮಯದಲ್ಲಿ ಧೋನಿ ಭಯ್ಯಾ ಅವರೊಂದಿಗೆ ಮಾತನಾಡಿದ್ದೇನೆ ಮತ್ತು ನೀವು ಪಂದ್ಯವನ್ನು ಮುಗಿಸುವತ್ತ ಗಮನ ಹರಿಸಬೇಕಾದರೆ, ನೀವು ಚೆಂಡಿನ ಬಗ್ಗೆ ಯೋಚಿಸುವುದನ್ನು ನಿಲ್ಲಿಸಬೇಕು ಎಂದು ಅವರು ವಿವರಿಸಿದರು. ಯಾವ ಶಾಟ್ ಅನ್ನು ಹೊಡೆಯಬೇಕು ಎಂದು ಮುಂಚಿತವಾಗಿ ನಿರ್ಧರಿಸುವ ಅಗತ್ಯವಿಲ್ಲ. ಆದರೆ ಮುಂದೆ ಬರುವ ಚೆಂಡಿನ ಪ್ರಕಾರ ಆಡುವುದು ಮುಖ್ಯವಾಗಿದೆ ಎಂದು ತಿಳಿಸಿದ್ದರು ಎಂದು ಹೇಳಿದ್ದಾರೆ.