ಹುಬ್ಬಳ್ಳಿ, ಸೆ.11: ಆರ್ ವಿನಯ್ ಕುಮಾರ್ ಅವರ ನಾಯಕತ್ವದ ಬೆಳಗಾವಿ ಪ್ಯಾಂಥರ್ಸ್ ತಂಡ ಒಡೆಯರ್ ಕರ್ನಾಟಕ ಪ್ರಿಮಿಯರ್ ಲೀಗ್ 2014 ಫೈನಲ್ ತಲುಪಿದೆ. ಗುರುವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಬಿಜಾಪುರ್ ಬುಲ್ಸ್ ತಂಡವನ್ನು 53 ರನ್ ಗಳಿಂದ ಸೋಲಿಸಿ ಅರ್ಹ ಜಯ ಸಾಧಿಸಿದೆ.
ಟಾಸ್ ಗೆದ್ದ ಬಿಜಾಪುರ್ ಬುಲ್ಸ್ ತಂಡದ ನಾಯಕ ದೀಪಕ್ ಚೌಗುಲೆ ಅವರು ಎದುರಾಳಿ ತಂಡ ಬೆಳಗಾವಿ ಪ್ಯಾಂಥರ್ಸ್ ತಂಡಕ್ಕೆ ಮೊದಲು ಬ್ಯಾಟಿಂಗ್ ಅವಕಾಶ ನೀಡಿದ್ದೇ ಮುಳುವಾಯಿತು. ಆರ್ ವಿನಯ್ ಕುಮಾರ್ ಪಡೆ 20 ಓವರ್ ಗಳಲ್ಲಿ 173/6 ಸ್ಕೋರ್ ಮಾಡಿ ಬೃಹತ್ ಸವಾಲೊಡ್ಡಿತು. ಇದಕ್ಕೆ ಉತ್ತರವಾಗಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದ್ದ ಬಿಜಾಪುರ ಬುಲ್ಸ್ ತಂಡ 120ರನ್ ಗಳಿಗೆ ಆಲೌಟ್ ಅಗಿ ಸೋಲೊಪ್ಪಿಕೊಂಡಿತು.
174ರನ್ ಗುರಿ ಬೆನ್ನು ಹತ್ತಿದ ಚೌಗುಲೆ ತಂಡ 5.3 ಓವರ್ ಗಳಲ್ಲಿ 30/4 ಸ್ಕೋರ್ ಮಾಡಿ ಆರಂಭಿಕ ಆಘಾತ ಅನುಭವಿಸಿತು ನಂತರ ಚೇತರಿಕೆ ಕಾಣಲೇ ಇಲ್ಲ. ವಿನಯ್ ಕುಮಾರ್ ತಂಡ ಕರಾರುವಾಕ್ ಬೌಲಿಂಗ್ ಎದುರು ಮಂಡಿಯೂರಿತು. [ಕೆಪಿಎಲ್ 2014 ಫೈನಲ್ : ಬೆಳಗಾವಿ vs ಮೈಸೂರು]
ಬೆಳಗಾವಿ ಪ್ಯಾಂಥರ್ಸ್ ತಂಡಕ್ಕೆ ಇದು ಎರಡನೇ ಫೈನಲ್ ಆಗಿದೆ. 2009ರಲ್ಲಿ ಫೈನಲ್ ತಲುಪಿದ್ದ ಬೆಳಗಾವಿ ಪ್ಯಾಂಥರ್ಸ್ ತಂಡ ಅಂತಿಮ ಹಣಾಹಣಿಯಲ್ಲಿ ಬೆಂಗಳೂರು ಪ್ರಾವಿಡೆಂಟ್(ರೂರಲ್) ತಂಡದ ಮುಂದೆ ಸೋಲು ಕಂಡಿತ್ತು.
ಕಾರ್ಬನ್ ಕೆಪಿಎಲ್ 2014ರ ಎರಡನೇ ಸೆಮಿಫೈನಲ್ ನಲ್ಲಿ ಕಳೆದ ಬಾರಿ ಚಾಂಪಿಯನ್ ಮಂಗಳೂರು ಯುನೈಟೆಡ್ ಹಾಗೂ ಮೈಸೂರು ವಾರಿಯರ್ಸ್ ತಂಡ ಸೆಣೆಸಾಟ ನಡೆಸಿವೆ.
ಸಂಕ್ಷಿಪ್ತ ಸ್ಕೋರ್
ಬೆಳಗಾವಿ ಪ್ಯಾಂಥರ್ಸ್ 173/6, 20 ಓವರ್ಸ್ (ಸುನೀಲ್ ರಾಜು ಅಜೇಯ 57, ಕೆ ಗೌತಮ್ 31, ಮಿರ್ ಅಬ್ಬಾಸ್ 24, ಕೆಸಿ ಅಯ್ಯಪ್ಪ 2/29, ಅಭಿಮನ್ಯು ಮಿಥುನ್ 1/24, ಕೆಪಿ ಅಪ್ಪಣ್ಣ 1/28)
ಬಿಜಾಪುರ ಬುಲ್ಸ್ 120 ಆಲೌಟ್ 17.2 ಓವರ್ಸ್ ( ನಿಶಾಂತ್ ಸಿಂಗ್ 27, ಕೆಪಿ ಅಪ್ಪಣ್ಣ 24, ಆರ್ ಸಮರ್ಥ್ 18, ಕೆಸಿ ಅವಿನಾಶ್ 17, ಬಿ ನವೀನ್ 4/13, ಆರ್ ವಿನಯ್ ಕುಮಾರ್ 2/26, ಸ್ಟಾಲಿನ್ ಹೂವರ್ 1/15)
ಪಂದ್ಯ ಶ್ರೇಷ್ಠ: ಸುನೀಲ್ ರಾಜು
ಫಲಿತಾಂಶ: ಬೆಳಗಾವಿ ಪ್ಯಾಂಥರ್ಸ್ ತಂಡಕ್ಕೆ 53 ರನ್ ಗಳಿಂದ ಗೆಲುವು, ಫೈನಲ್ ಪ್ರವೇಶ
ಸೆಮಿ ಫೈನಲ್ ನಲ್ಲಿ ಸೋತಿರುವ ಬಿಜಾಪುರ ತಂಡಕ್ಕೆ 2.5 ಲಕ್ಷ ರು ಬಹುಮಾನ ದೊರೆಯಲಿದೆ.