ಕರ್ನಾಟಕ ಹಾಗೂ ಬಂಗಳಾ ತಂಡಗಳು ರಣಜಿ ಟ್ರೋಫಿ ಸಿ ಗುಂಪಿನ ಕಾದಾಟ ನಡೆಸಿದವು. ಮೊದಲ ದಿನದ ಗೌರವವನ್ನು ಪ್ರವಾಸಿ ಬಂಗಳಾ ತಂಡ ತನ್ನದಾಗಿಸಿಕೊಂಡಿದೆ.
ಬೆಂಗಳೂರಿನಲ್ಲಿ ಬುಧವಾರಿಂದ ಆರಂಭವಾದ ಪಂದ್ಯದಲ್ಲಿ ಟಾಸ್ ಗೆದ್ದ ಕರ್ನಾಟಕ ಮೊದಲು ಫೀಲ್ಡಿಂಗ್ ಮಾಡಲು ಮುಂದಾಯಿತು. ಮೊದಲು ಬ್ಯಾಟ್ ಮಾಡಿದ ಬಂಗಾಳ ದಿನದಾಟದಂತ್ಯಕ್ಕೆ ಐದು ವಿಕೆಟ್ ನಷ್ಟಕ್ಕೆ 249 ರನ್ ಕಲೆ ಹಾಕಿದೆ. ಬಂಗಾಳ ಪರ ಶಹಬಾಜ್ ಅಹ್ಮದ್ ಅಜೇಯ 54, ವೃದ್ಧಿಮನ್ ಸಹಾ ಅಜೇಯ 6 ರನ್ ಸಿಡಿಸಿ ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡುವ ನಾಯಕ ಮಯಾಂಕ್ ಅಗರ್ವಾಲ್ ನಿರ್ಧಾರವನ್ನು ಬೌಲರ್ಗಳು ಸಮರ್ಥಿಸಿಕೊಂಡರು. ಆರಂಭಿಕ ಶುವಂ ದುಬೆ ಹಾಗೂ ಸುದೀಪ್ ಕುಮಾರ್ ಘರಾಮಿ ಅವರನ್ನು ಬೇಗನೆ ಪೆವಿಲಿಯನ್ಗೆ ಅಟ್ಟುವಲ್ಲಿ ವಾಸುಕಿ ಕೌಶಿಕ್ ಸಫಲರಾದರು. ಮೊದಲ ಓವರ್ನ ಮೂರನೇ ಎಸೆತದಲ್ಲಿ ಶುವಂ ಇಲ್ಲದ ಹೊಡೆತಕ್ಕೆ ಮುಂದಾಗಿ ಸೊನ್ನೆ ಸುತ್ತಿದರು.
45 ಎಸೆತಗಳನ್ನು ಎದುರಿಸಿ ಬಿಗ್ ಇನಿಂಗ್ಸ್ ಕಟ್ಟುವ ಭರವಸೆಯನ್ನು ಮೂಡಿಸಿದ್ದ ಸುದೀಪ್ ಕುಮಾರ್ 16ನೇ ಓವರ್ನ ಎರಡನೇ ಎಸೆತದಲ್ಲಿ ನಿಕಿನ್ ಜೋಸ್ಗೆ ಕ್ಯಾಚ್ ನೀಡಿದರು.
21 ರನ್ಗಳಿಗೆ 2 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ಸುದೀಪ್ ಚಟರ್ಜಿ ಹಾಗೂ ಅನುಸ್ತುಪ್ ಮುಜುಂಮ್ದಾರ್ ಉತ್ತಮ ಜೊತೆಯಾಟದ ಕಾಣಿಕೆ ನೀಡಿದರು. ಈ ಜೋಡಿ ಸುಮಾರು 26 ಓವರ್ಗಳ ವರೆಗೆ ವಿಕೆಟ್ ಬೀಳದಂತೆ ನೋಡಿಕೊಂಡು ಬ್ಯಾಟ್ ಮಾಡಿತು. ಅಲ್ಲದೆ ತಂಡಕ್ಕೆ ಶತಕದ ಜೊತೆಯಾಟದ ಕಾಣಿಕೆ ನೀಡಿತು. ಆರಂಭಿಕ ಆಟಗಾರ ಸುದೀಪ್ 120 ಎಸೆತಗಳಲ್ಲಿ 5 ಬೌಂಡರಿ ಸೇರಿದಂತೆ 55 ರನ್ ಬಾರಿಸಿ ಮುನ್ನಗುತ್ತಿದ್ದಾಗ ವಾಸುಕಿ ಕೌಶಿಕ್ ತೋಡಿದ ಖೆಡ್ಡಾಗೆ ಬಲಿಯಾದರು.
ನಾಲ್ಕನೇ ವಿಕೆಟ್ಗೆ ನಾಯಕ ಅನುಸ್ತುಪ್ ಮುಜುಂಮ್ದಾರ್ ಹಾಗೂ ಶಹಬಾಜ್ ಅಹ್ಮದ್ ಮನಮೋಹಕ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಈ ಜೋಡಿ 80 ರನ್ ಸೇರಿಸಿ ತಂಡದ ಮೊತ್ತವನ್ನು 200ರ ಗಡಿ ದಾಟಿಸಿರುತು. 164 ಎಸೆತಗಳಲ್ಲಿ 16 ಬೌಂಡರಿ ಬಾರಿಸಿ 101 ರನ್ ಬಾರಿಸಿ ಅಬ್ಬರಿಸಿದ್ದ ಅನುಸ್ತುಪ್ ಮುಜುಂಮ್ದಾರ್ ಶ್ರೇಯಸ್ ಗೋಪಾಲ್ ಸ್ಪಿನ್ ಬೌಲ್ ಅರಿಯುವಲ್ಲಿ ಎಡವಿ ಪೆವೆಲಿಯನ್ ಸೇರಿದರು.
ಅವಿಲಿನ್ ಘೋಷ್ 1 ಬೌಂಡರಿ, 2 ಸಿಕ್ಸರ್ ಸಹಾಯದಿಂದ 22 ರನ್ ಸಿಡಿಸಿ ಔಟ್ ಆದರು.
ಭರವಸೆಯ ಮಧ್ಯಮ ಕ್ರಮಾಂಕದ ಆಟಗಾರ ಶಹಬಾಜ್ ಅಹ್ಮದ್ 103 ಎಸೆತಗಳಲ್ಲಿ 6 ಬೌಂಡರಿ ಸೇರಿದಂತೆ ಅಜೇಯ 54 ರನ್ ಸಿಡಿಸಿ ಗುರುವಾರಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಟಾಪ್ ಆರ್ಡರ್ ಬ್ಯಾಟರ್ಗಳಿಗೆ ಕಾಟ ನಿಡಿದ ವಾಸುಕಿ ಕೌಶಿಕ್ 29 ರನ್ ನೀಡಿ ಮೂರು ವಿಕೆಟ್ ಕಬಳಿಸಿದರು. ಉಳಿದಂತೆ ಶ್ರೇಯಸ್ ಗೋಪಾಲ್, ಅಭಿಲಾಶ್ ಶೆಟ್ಟಿ ತಲಾ ಒಂದು ವಿಕೆಟ್ ಕಬಳಿಸಿದರು.