ಬೆಂಗಳೂರು, ಡಿ. 09: ಎಂಎಸ್ ಧೋನಿ ಅಭಿಮಾನಿಗಳಿಗೆ ರಸದೌತಣ ಸಿಗಲಿದೆ. ಬಹುಕಾಲದ ನಂತರ ಧೋನಿ ಅವರು ಮತ್ತೊಮ್ಮೆ ದೇಶಿ ಕ್ರಿಕೆಟ್ ನಲ್ಲಿ ಬ್ಯಾಟ್ ಬೀಸಲಿದ್ದಾರೆ. ವೇಗಿ ವರುಣ್ ಆರೋನ್ ನಾಯಕತ್ವದಲ್ಲಿ ಧೋನಿ ವಿಜಯ್ ಹಜಾರೆ ಟ್ರೋಫಿಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಸುಮಾರು 8 ವರ್ಷಗಳ ಕಾಲ ಈ ಟೂರ್ನಿಯಲ್ಲಿ ಆಡುತ್ತಿರುವ ಧೋನಿ ಅವರ ಆಟವನ್ನು ನೋಡಲು ಬೆಂಗಳೂರಿನ ಕ್ರಿಕೆಟ್ ಅಭಿಮಾನಿಗಳಿಗೆ ಒಳ್ಳೆ ಅವಕಾಶ ಸಿಕ್ಕಿದೆ.
ಡಿಸೆಂಬರ್ 10 ರಿಂದ ಡಿಸೆಂಬರ್ 18ರ ತನಕ ನಡೆಯಲಿರುವ ವಿಜಯ್ ಹಜಾರೆ ಏಕದಿನ ಮಾದರಿ ಟೂರ್ನಿಯಲ್ಲಿ ಧೋನಿ ಅವರು ಆಡುತ್ತಿದ್ದಾರೆ. ಜಾರ್ಖಂಡ್ ತಂಡ ತನ್ನ ಮೊದಲ ಪಂದ್ಯದಲ್ಲಿ ಜಮ್ಮು ಮತ್ತು ಕಾಶ್ಮೀರದ ವಿರುದ್ಧ ಆಡಲಿದೆ. ಬೆಂಗಳೂರಿನ ಹೊರ ವಲಯದ ಕೆಎಸ್ ಸಿಎ ಆಲೂರು ಮೈದಾನದಲ್ಲಿ ಈ ಪಂದ್ಯ ನಡೆಯಲಿದೆ.

2007ರಲ್ಲಿ ಜಾರ್ಖಂಡ್ ಪರ ಆಡಿದ್ದ ಧೋನಿ ಅವರು ಸೈಯದ್ ಮುಷ್ತಾಕ್ ಅಲಿ ಟ್ವೆಂಟಿ20 ಟೂರ್ನಿಯಲ್ಲಿ ಪೂರ್ವ ವಲಯ ಪರ ಬ್ಯಾಟ್ ಬೀಸಿದ್ದರು. ದಕ್ಷಿಣ ಆಫ್ರಿಕಾ ವಿರುದ್ಧ ಮುಂಬೈಯಲ್ಲಿ ಕಳೆದ ಅಕ್ಟೋಬರ್ 25ರ ನಂತರ ಆಡಿದ ನಂತರ ಮತ್ತೊಮ್ಮೆ ಧೋನಿ ಕಣಕ್ಕಿಳಿಯುತ್ತಿದ್ದಾರೆ.
ಕರ್ನಾಟಕ, ಹರ್ಯಾಣ, ಗುಜರಾತ್, ಜಮ್ಮು ಮತ್ತು ಕಾಶ್ಮೀರ, ರೈಲ್ವೆಸ್, ಕೇರಳ ಜೊತೆಗೆ ಜಾರ್ಖಂಡ್ ಬಿ ಗುಂಪಿನಲ್ಲಿದೆ.
ವಿಜಯ್ ಹಜಾರೆ ಟ್ರೋಫಿಯಲ್ಲಿ ಧೋನಿ ಅಲ್ಲದೆ, ವಿರಾಟ್ ಕೊಹ್ಲಿ, ರವೀಂದ್ರ ಜಡೇಜ, ಚೇತೇಶ್ವರ್ ಪೂಜಾರಾ, ಇಶಾಂತ್ ಶರ್ಮ ಅವರು ಆಡಲಿದ್ದಾರೆ.

* ನೆಲಮಂಗಲ ಬಳಿಯ ಆಲೂರು ಮೈದಾನ 1ರಲ್ಲಿ ಡಿ. 10 (ಗುರುವಾರ) ಜಾರ್ಖಂಡ್ vs ಜಮ್ಮು ಮತ್ತು ಕಾಶ್ಮೀರ.
* ನೆಲಮಂಗಲ ಬಳಿಯ ಆಲೂರು ಮೈದಾನ 3ರಲ್ಲಿ ಡಿ. 11 (ಶುಕ್ರವಾರ) ಜಾರ್ಖಂಡ್ vs ಗುಜರಾತ್
* ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಡಿಸೆಂಬರ್ 13 ಭಾನುವಾರ ಜಾರ್ಖಂಡ್ vs ಕೇರಳ
* ನೆಲಮಂಗಲ ಬಳಿಯ ಆಲೂರು ಮೈದಾನ 3ರಲ್ಲಿ ಡಿ. 14 (ಸೋಮವಾರ) ಜಾರ್ಖಂಡ್ vs ಹರ್ಯಾಣ
* ನೆಲಮಂಗಲ ಬಳಿಯ ಆಲೂರು ಮೈದಾನ 2ರಲ್ಲಿ ಡಿ. 15 (ಮಂಗಳವಾರ) ಜಾರ್ಖಂಡ್ vs ಕರ್ನಾಟಕ
* ನೆಲಮಂಗಲ ಬಳಿಯ ಆಲೂರು ಮೈದಾನ 1ರಲ್ಲಿ ಡಿ. 17 (ಗುರುವಾರ) ಜಾರ್ಖಂಡ್ vs ರೈಲ್ವೆಸ್
(ಒನ್ ಇಂಡಿಯಾ ಸುದ್ದಿ)