ಇನ್ನೇನು ಕೆಲವೇ ದಿನಗಳಲ್ಲಿ ಭಾರತದಲ್ಲಿ ಮಹಿಳಾ ವಿಶ್ವಕಪ್ ನಡೆಯಲಿದ್ದು, ಇದಕ್ಕಾಗಿ ತಯಾರಿಗಳು ಭರದಿಂದ ಸಾಗಿವೆ. ಈ ಮಧ್ಯೆ ಬೆಂಗಳೂರಿನಿಂದ ಬಂದಿರುವ ಒಂದು ಸುದ್ದಿ ನಿಜಕ್ಕೂ ಆಯೋಜಕರ ಚಿಂತೆಯನ್ನು ಹೆಚ್ಚಿಸಿದೆ. ಈ ಸುದ್ದಿ ನಿಜ ಆದಲ್ಲಿ ಬೆಂಗಳೂರಿನಲ್ಲಿ ನಡೆಯಬೇಕಿದ್ದ ಐಸಿಸಿ ಮಹಿಳಾ ವಿಶ್ವಕಪ್ ಪಂದ್ಯಗಳನ್ನು ಬೇರೆ ಸ್ಥಳಗಳಿಗೆ ಶಿಫ್ಟ್ ಮಾಡುವ ಅನಿವಾರ್ಯತೆ ಇದೆ. ಹೀಗೆ ಆಗಲು ಕಾರಣ ಏನು ಎಂಬ ಬಗ್ಗೆ ವರದಿ ಇಲ್ಲಿದೆ.
18ನೇ ಆವೃತ್ತಿಯ ಚಾಂಪಿಯನ್ ಪಟ್ಟವನ್ನು ಆರ್ಸಿಬಿ ಅಲಂಕರಿಸಿತು. ಜೂನ್ 4 ರಂದು ಸಂಭ್ರಮಾಚರಣೆಯ ವೇಳೆ ನಡೆದ ಕಾಲ್ತುಳಿತದಲ್ಲಿ 11 ಜನ ಸಾವನ್ನಪ್ಪಿದ್ದು, ಹಲವು ಜನರಿಗೆ ಗಾಯವಾಗಿದೆ. ಈ ಒಂದು ಪ್ರಕರಣ ಆರ್ಸಿಬಿ ಹಾಗೂ ಚಿನ್ನಸ್ವಾಮಿ ಅಂಗಳಕ್ಕೆ ಕಪ್ಪು ಚುಕ್ಕೆಯಾಗಿದೆ. ಹೀಗಾಗಿ ಮುಂಬರುವ ದೊಡ್ಡ ಟೂರ್ನಿಗಳ ಮೇಲೆ ಈ ಪ್ರಕರಣದ ಕರಿ ನೆರಳು ಬೀಳುವಂತೆ ಕಾಣುತ್ತಿದೆ.

ಮಹಿಳಾ ಏಕದಿನ ವಿಶ್ವಕಪ್ ಸೆಪ್ಟೆಂಬರ್ ಅಂತ್ಯದಲ್ಲಿ ಭಾರತದಲ್ಲಿ ನಡೆಯಲಿದೆ. ಈ ಟೂರ್ನಿಯ ನಾಲ್ಕು ಪಂದ್ಯಗಳಿಗೆ ಬೆಂಗಳೂರಿನ ಎಂ ಚಿನ್ನಸ್ವಾಮಿ ಮೈದಾನ ಸಾಕ್ಷಿಯಾಗಲಿದೆ. ಆದರೆ ಕರ್ನಾಟಕ ಕ್ರಿಕೆಟ್ ಅಸೋಸಿಯೇಷನ್ಗೆ, ಕರ್ನಾಟಕ ರಾಜ್ಯ ಸರ್ಕಾರದಿಂದ ಸಿಗಬೇಕಿದ್ದ ನಿರಾಕ್ಷೇಪರಣಾ ಪ್ರಮಾಣ ಪತ್ರ ಇನ್ನು ಸಿಕ್ಕಿಲ್ಲ. ಹೀಗಾಗಿ ಈ ಟೂರ್ನಿಯ ಪಂದ್ಯಗಳು ಬೆಂಗಳೂರಿನಲ್ಲಿ ನಡೆಯುತ್ತವೆಯೋ ಇಲ್ಲವೋ ಎಂಬ ಬಗ್ಗೆ ಅನುಮಾನ ಆರಂಭವಾಗಿದೆ.
ಈಗಾಗಲೇ ಮಹಿಳಾ ಏಕದಿನ ವಿಶ್ವಕಪ್ ವೇಳಾಪಟ್ಟಿಯನ್ನು ಘೋಷಿಸಲಾಗಿದೆ. ಘೋಷಿತ ವೇಳಾ ಪಟ್ಟಿಯಂತೆ ಚಿನ್ನಸ್ವಾಮಿ ಅಂಗಳದಲ್ಲಿ ಭಾರತ ಹಾಗೂ ಶ್ರೀಲಂಕಾ ನಡುವಣ ಮೊದಲ ಪಂದ್ಯ ನಡೆಯಲಿದೆ. ಆದರೆ ಈಗ ಬರುತ್ತಿರುವ ಮಾಹಿತಿಯಂತೆ ರಾಜ್ಯ ಸರ್ಕಾರದ ಅಗತ್ಯ ಅನುಮೋದನೆ ಸಿಕ್ಕದೇ ಇರುವುದು ನಿಜಕ್ಕೂ ಆಯೋಜಕರ ಚಿಂತೆಯನ್ನು ದ್ವಿಗುಣ ಮಾಡಿದೆ. ಆರ್ಸಿಬಿ ತಂಡದ ವಿಜಯೋತ್ಸವದ ವೇಳೆ ನಡೆದ ಕಾಲ್ತುಳಿತ ಪ್ರಕರಣದ ಬಳಿಕ ಈ ಮೈದಾನದಲ್ಲಿ ದೊಡ್ಡ ಟೂರ್ನಿಗಳನ್ನು ನಡೆಸುವ ಬಗ್ಗೆ ಪ್ರಶ್ನೆಗಳನ್ನು ಎತ್ತಲಾಗಿದೆ. ಈ ಮೊದಲೇ ಮಹಾರಾಜ ಟಿ20 ಕ್ರಿಕೆಟ್ ಟೂರ್ನಿಯ ಪಂದ್ಯಗಳನ್ನು ಬೆಂಗಳೂರಿನ ಎಂ ಚಿನ್ನಸ್ವಾಮಿ ಮೈದಾನದಲ್ಲಿ ನಡೆಸಲು ತೀರ್ಮಾನಿಸಲಾಗಿತ್ತು. ಈಗ ಈ ಪಂದ್ಯಗಳನ್ನು ಮೈಸೂರಿಗೆ ಶಿಫ್ಟ್ ಮಾಡಲಾಗಿದೆ.
ಈ ಬಾರಿ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ನಲ್ಲಿ ಒಟ್ಟು 8 ತಂಡಗಳು ಭಾಗವಸಿಲಿದ್ದು, 4 ಮೈದಾನಗಳಲ್ಲಿ ನಡೆಯಲಿವೆ. ಬೆಂಗಳೂರು, ಗುವಾಹಟಿ, ಇಂದೋರ್ ಮತ್ತು ವಿಶಾಖಪಟ್ಟಣಂ ಮೈದಾನಗಳು ಈ ಪಂದ್ಯಕ್ಕೆ ಸಾಕ್ಷಿಯಾಗಲಿವೆ. ಇನ್ನು ಭಾರತ ಪ್ರವಾಸವನ್ನು ಬೆಳೆಸದ ಪಾಕಿಸ್ತಾನ ತಂಡ ತನ್ನ ಎಲ್ಲ ಪಂದ್ಯಗಳನ್ನು ಶ್ರೀಲಂಕಾದ ಕೊಲಂಬೊ ಮೈದಾನದಲ್ಲಿ ಆಡಲಿದೆ.
ಮುಂದಿನ ಆವೃತ್ತಿಯ ಐಪಿಎಲ್ನ ಪಂದ್ಯಗಳು ಚಿನ್ನಸ್ವಾಮಿಯಲ್ಲಿ ನಡೆಯುತ್ತವೋ ಇಲ್ಲವೋ ಎಂಬ ಬಗ್ಗೆ ಸಹ ಅನುಮಾನ ಮೂಡಿದೆ. ಹೀಗೆ ಆದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತವರಿನ ಪಂದ್ಯಗಳನ್ನು ಯಾವ ಅಂಗಳದಲ್ಲಿ ಆಡುತ್ತದೆ ಎಂಬುದು ಕುತೂಹಲ ಮೂಡಿಸಿದೆ.