
ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಗಾಗಿ ಆಸ್ಟ್ರೇಲಿಯಾ ತಂಡದ ಆಟಗಾರರೆಲ್ಲರೂ ಭಾರತಕ್ಕೆ ಈಗಾಗಲೇ ಆಗಮಿಸಿದ್ದರೂ ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಉಸ್ಮಾನ್ ಖವಾಜ ಭಾರತ ಪ್ರವಾಸಕ್ಕೆ ಗ್ರೀನ್ ಸಿಗ್ನಲ್ ದೊರೆತಿರಲಿಲ್ಲ. ವೀಸಾ ಸಮಸ್ಯೆಯಿಂದಾಗಿ ಉಸ್ಮಾನ್ ಖವಾಜ ತಂಡದ ಜೊತೆಗೆ ಪ್ರಯಾಣಿಸಲು ಸಾಧ್ಯವಾಗದೆ ಆಸ್ಟ್ರೇಲಿಯಾದಲ್ಲಿಯೇ ಉಳಿದುಕೊಂಡಿದ್ದರು. ಆದರೆ ಇದೀಗ ಉಸ್ಮಾನ್ ಖವಾಜಾಗೆ ವೀಸಾ ಲಭ್ಯವಾಗುವ ಮೂಲಕ ಈ ಗೊಂದಲ ಪರಿಹಾರವಾಗಿದೆ.
ವಿಸಾ ಸಮಸ್ಯೆ ಬಗೆಹರಿದ ಕಾರಣ ಉಸ್ಮಾನ್ ಖವಾಜ ಫೆಬ್ರವರಿ 2ರಂದು ಭಾರತಕ್ಕೆ ಪ್ರಯಾಣ ಆರಂಭಿಸಲಿದ್ದು ಈ ಮೂಲಕ ಶೀಘ್ರದಲ್ಲಿಯೇ ಆಸಿಸ್ ತಂಡವನ್ನು ಕೂಡಿಕೊಳ್ಳಲಿದ್ದಾರೆ. ಆಸ್ಟ್ರೇಲಿಯಾ ತಂಡದ ಇತರ ಸದಸ್ಯರು ಎರಡು ಗುಂಪುಗಳಾಗಿ ಭಾರತಕ್ಕೆ ಪ್ರಯಾಣಿಸಿದ್ದಾರೆ. ಹೀಗಾಗಿ ಉಸ್ಮಾನ್ ಖವಾಜ ನೇರವಾಗಿ ಬೆಂಗಳೂರಿಗೆ ಆಗಮಿಸಲಿದ್ದಾರೆ.
ಉಸ್ಮಾನ್ ಖವಾಜ ಆಸ್ಟ್ರೇಲಿಯಾ ತಂಡದ ಪ್ರಮುಖ ಆಟಗಾರರಲ್ಲಿ ಒಬ್ಬರೆನಿಸಿದ್ದಾರೆ. ಅದ್ಭುತ ಫಾರ್ಮ್ನಲ್ಲಿದ್ದು ಸ್ಥಿರ ಪ್ರದರ್ಶನ ನೀಡುತ್ತಿರುವ ಖವಾಜ ಕಳೆದ ಹಲವು ಸರಣಿಗಳಲ್ಲಿ ರನ್ ಮಳೆ ಹರಿಸುತ್ತಿದ್ದಾರೆ. ಇದರ ಪರಿಣಾವಾಗಿ ಆಸ್ಟ್ರೇಲಿಯನ್ ಕ್ರಿಕೆಟ್ ಪ್ರಶಸ್ತಿ ಸಮಾರಂಭದಲ್ಲಿ ಖವಾಜ ಕಳೆದ ವರ್ಷ ನಿಧನರಾದ ಶೇನ್ ವಾರ್ನ್ ಹೆಸರಿನಲ್ಲಿ ನೀಡುವ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಮಾರ್ನಸ್ ಲ್ಯಾಬುಶೈನ್ ಹಾಗೂ ಸ್ಟೀವ್ ಸ್ಮಿತ್ ಅವರಿಗಿಂತ ಹೆಚ್ಚಿನ ವೋಟ್ ಪಡೆದು ಈ ಪ್ರಶಸ್ತಿ ಗೆದ್ದಿದ್ದಾರೆ ಖವಾಜ.
ಇನ್ನು ವೀಸಾ ಸಮಸ್ಯೆಯಿಂದಾಗಿ ಭಾರತಕ್ಕೆ ಆಸ್ಟ್ರೇಲಿಯಾ ತಂಡದ ಜೊತೆಗೆ ಪ್ರಯಾಣಿಸಲು ಸಾಧ್ಯವಾಗದ ವಿಚಾರವನ್ನು ಸ್ವತಃ ಉಸ್ಮಾನ್ ಖವಾಜ ಸಾಮಾಜಿಕ ಜಾಲತಾಣದಲ್ಲಿ ತಮಾಷೆಯಾಗಿ ಹಂಚಿಕೊಂಡಿದ್ದರು. ಖ್ಯಾತ ಮೀಮ್ ಚಿತ್ರವೊಂದನ್ನು ಬಳಸಿಕೊಂಡು "ನಾನು ಭಾರತದ ವೀಸಾಗಾಗಿ ಇದೇ ರೀತಿಯಾಗಿ ಕಾದುಕುಳಿತಿದ್ದೇನೆ" ಎಂದು ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದರು.
ಬಾರ್ಡರ್-ಗವಾಸ್ಕರ್ ಟ್ರೋಪಿ ಆರಂಭಕ್ಕೆ ದಿನಗಣನೆ
ಬಾರ್ಡರ್- ಗವಾಸ್ಕರ್ ಟೆಸ್ಟ್ ಸರಣಿಯ ಮೊದಲ ಪಂದ್ಯ ಫೆಬ್ರವರಿ 9ರಂದು ನಾಗ್ಪುರದಲ್ಲಿ ನಡೆಯಲಿದ್ದು ಅದಾದ ಬಳಿಕ ಎರಡನೇ ಟೆಸ್ಟ್ ಪಂದ್ಯ ದೆಹಲಿಯಲ್ಲಿ ನಡೆಯಲಿದೆ. ಮೂರನೇ ಪಂದ್ಯ ಧರ್ಮಶಾಲಾದಲ್ಲಿ ಆಯೋಜನೆಯಾದರೆ ಅಂತಿಮ ಟೆಸ್ಟ್ ಪಂದ್ ಅಹ್ಮದಾಬಾದ್ನಲ್ಲಿ ನಡೆಯಲಿದೆ
ಆಸ್ಟ್ರೇಲಿಯಾ ತಂಡ ಹೀಗಿದೆ: ಪ್ಯಾಟ್ ಕಮ್ಮಿನ್ಸ್ (ನಾಯಕ), ಆಷ್ಟನ್ ಅಗರ್, ಸ್ಕಾಟ್ ಬೋಲ್ಯಾಂಡ್, ಅಲೆಕ್ಸ್ ಕ್ಯಾರಿ, ಕ್ಯಾಮೆರಾನ್ ಗ್ರೀನ್, ಪೀಟರ್ ಹ್ಯಾಂಡ್ಸ್ಕಾಂಬ್, ಜೋಶ್ ಹ್ಯಾಜಲ್ವುಡ್, ಟ್ರಾವಿಸ್ ಹೆಡ್, ಉಸ್ಮಾನ್ ಖವಾಜಾ, ಮಾರ್ನಸ್ ಲ್ಯಾಬುಶೈನ್, ನಾಥನ್ ಲಿಯಾನ್, ಲ್ಯಾನ್ಸ್ ಮೋರಿಸ್, ಟಾಡ್ ಮರ್ಫಿ, ಮ್ಯಾಥ್ಯೂ ರೆನ್ಶಾ, ಸ್ಟೀವ್ ಸ್ಮಿತ್ (ಉಪನಾಯಕ), ಮಿಚೆಲ್ ಸ್ಟಾರ್ಕ್, ಮಿಚೆಲ್ ಸ್ವೆಪ್ಸನ್, ಡೇವಿಡ್ ವಾರ್ನರ್