
2004-05ರ ಬಳಿಕ ಭಾರತದಲ್ಲಿ ಟೆಸ್ಟ್ ಸರಣಿಯನ್ನು ಗೆಲ್ಲದ ಆಸ್ಟ್ರೇಲಿಯಾ ಈ ಬಾರಿ ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯನ್ನು ಗೆಲ್ಲಲೇಬೇಕೆನ್ನುವ ಹಠಕ್ಕೆ ಬಿದ್ದಿದೆ. ಭಾರತಕ್ಕೆ ಬರುವ ಮುನ್ನ ಸಿಡ್ನಿಯಲ್ಲಿ ಸ್ಪಿನ್ ಪಿಚ್ ನಿರ್ಮಿಸಿಕೊಂಡು ಅಭ್ಯಾಸ ನಡೆಸಿದ್ದ ಕಾಂಗರೂ ಪಡೆ ಈಗ ಹೊಸ ಉಪಾಯ ಹೂಡಿದೆ.
ಫೆಬ್ರವರಿ 1ರಂದು ಭಾರತಕ್ಕೆ ಆಗಮಿಸಿರುವ ಆಸ್ಟ್ರೇಲಿಯಾ ಬೆಂಗಳೂರಿನ ಹೊರವಲಯದಲ್ಲಿರುವ ಆಲೂರಿನಲ್ಲಿ 5 ದಿನಗಳ ಕಾಲ ಅಭ್ಯಾಸ ನಡೆಸಲಿದೆ. ಭಾರತದ ಪ್ರಮುಖ ಸ್ಪಿನ್ನರ್ ಗಳಾದ ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್ ಮತ್ತು ರವೀಂದ್ರ ಜಡೇಜಾರನ್ನು ಎದುರಿಸಲು ಮಾಸ್ಟರ್ ಪ್ಲ್ಯಾನ್ ರೂಪಿಸಿದೆ.
ಬೆಂಗಳೂರಿನಲ್ಲಿ ಅಭ್ಯಾಸದ ವೇಳೆ ನೆಟ್ಸ್ನಲ್ಲಿ ಬೌಲಿಂಗ್ ಮಾಡಲು ಜಮ್ಮು ಕಾಶ್ಮೀರದ ಮಿಸ್ಟರಿ ಸ್ಪಿನ್ನರ್ ಅಬಿದ್ ಮುಷ್ತಾಕ್ರನ್ನು ಆಹ್ವಾನಿಸಿದೆ. ಟೀಂ ಇಂಡಿಯಾ ಸ್ಪಿನ್ನರ್ ಗಳ ವಿರುದ್ಧ ಆಡಲು ಆಸ್ಟ್ರೇಲಿಯಾ ಹೂಡಿರುವ ರಹಸ್ಯ ಉಪಾಯ ಇದೀಗ ಬಯಲಾಗಿದೆ.
ಭಾರತದಲ್ಲಿ ಆಡಿರುವ 6 ಟೆಸ್ಟ್ ಪಂದ್ಯಗಳಲ್ಲಿ 39 ವಿಕೆಟ್ ಪಡೆದಿರುವ ಅಕ್ಷರ್ ಪಟೇಲ್ ಆಸ್ಟ್ರೇಲಿಯಾದ ಚಿಂತೆಗೆ ಕಾರಣವಾಗಿದ್ದಾರೆ. ಅಕ್ಷರ್ ಪಟೇಲ್ರನ್ನು ನಿರ್ಲಕ್ಷಿಸಿದರೆ ಭಾರಿ ತೊಂದರೆ ಅನುಭವಿಸಬೇಕಾಗುತ್ತದೆ ಎಂದು ಅರಿತಿರುವ ಆಸ್ಟ್ರೇಲಿಯಾ ಅವರ ಬೌಲಿಂಗ್ ಎದುರಿಸಲು ಸಜ್ಜಾಗಲು ಈ ಉಪಾಯ ಮಾಡಿದೆ.

ಮಿಸ್ಟರಿ ಸ್ಪಿನ್ನರ್ ಅಬಿದ್ ಮುಷ್ತಾಕ್
ಕಳೆದ ಬಾರಿ ತವರಿನಲ್ಲಿ ನಡೆದಿದ್ದ ಬಾರ್ಡರ್ ಗವಾಸ್ಕರ್ ಸರಣಿಯಲ್ಲಿ ರವೀಂದ್ರ ಜಡೇಜಾ ಆಸ್ಟ್ರೇಲಿಯಾ ತಂಡಕ್ಕೆ ಮಾರಕವಾಗಿದ್ದರು. ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು. 36 ಟೆಸ್ಟ್ ಪಂದ್ಯಗಳಲ್ಲಿ 172 ವಿಕೆಟ್ ಪಡೆಯುವ ಮೂಲಕ ಟೆಸ್ಟ್ನಲ್ಲಿ ತಾನೆಂತಹ ಮಾರಕ ಬೌಲರ್ ಎನ್ನುವುದನ್ನು ಸಾಬೀತು ಮಾಡಿದ್ದಾರೆ. ಭಾರತಕ್ಕಾಗಿ ಅಭ್ಯಾಸ ಪಂದ್ಯಕ್ಕೆ ತೆರಳುವ ಮುನ್ನ ರಣಜಿ ಟ್ರೋಫಿ ಪಂದ್ಯದಲ್ಲಿ ಆಡಿದ್ದ ಅವರು 8 ವಿಕೆಟ್ ಪಡೆದು ಈಗಾಗಲೇ ಎದುರಾಳಿಗಳಿಗೆ ಎಚ್ಚರಿಕೆಯ ಸಂದೇಶವನ್ನು ನೀಡಿದ್ದಾರೆ.
ಅಬಿದ್ ಮುಷ್ತಾಕ್ ರಣಜಿ ಟ್ರೋಫಿಯಲ್ಲಿ ಜಮ್ಮು ಕಾಶ್ಮೀರದ ಪರವಾಗಿ ಆಡುತ್ತಾರೆ. ರಣಜಿ ಪಂದ್ಯದಲ್ಲಿ ವಿದರ್ಭ ವಿರುದ್ಧ 18 ರನ್ ನೀಡಿ 8 ವಿಕೆಟ್ ಪಡೆಯುವ ಮೂಲಕ ಗಮನ ಸೆಳೆದಿದ್ದರು. ಅವರ ಮಿಸ್ಟರಿ ಸ್ಪಿನ್ ಬೌಲಿಂಗ್ ನೋಡಿರುವ ಆಸ್ಟ್ರೇಲಿಯಾ ಅವರನ್ನು ನೆಟ್ಸ್ನಲ್ಲಿ ಬೌಲಿಂಗ್ ಮಾಡಲು ಆಹ್ವಾನಿಸಿದೆ.

ಜಮ್ಮು ಕಾಶ್ಮೀರದ ಪ್ರತಿಭಾವಂತ ಬೌಲರ್
"ಅಬಿದ್ಗೆ ತಮ್ಮ ಬೌಲಿಂಗ್ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಇದೊಂದು ಉತ್ತಮ ಅವಕಾಶ. ಅವರು ಸ್ಟೀವ್ ಸ್ಮಿತ್, ಮಾರ್ನಸ್ ಲ್ಯಾಬುಸ್ಚಾಗ್ನೆ, ಉಸ್ಮಾನ್ ಖವಾಜರಂತಹ ವಿಶ್ವದರ್ಜೆಯ ಬ್ಯಾಟರ್ ಗಳಿಗೆ ಬೌಲಿಂಗ್ ಮಾಡಹುದಾಗಿದೆ. ಜಮ್ಮು ಮತ್ತು ಕಾಶ್ಮೀರ ಕ್ರಿಕೆಟ್ಗೆ ಇದೊಂದು ಶುಭ ಸುದ್ದಿಯಾಗಿದೆ. ಅಬಿದ್ ಒಬ್ಬ ಪ್ರತಿಭಾವಂತ ಬೌಲರ್ ಅದನ್ನು ಉತ್ತಮಪಡಿಸಿಕೊಳ್ಳುವ ಸಾಮರ್ಥ್ಯ ಹೊಂದಿದ್ದಾರೆ" ಎಂದು ಕೆ ಸ್ಪೋರ್ಟ್ಸ್ ವರದಿ ಮಾಡಿದೆ.