
ಭಾರತ ಹಾಗೂ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯ ಅಂತಿಮ ಪಂದ್ಯದಲ್ಲಿ ಟೀಮ್ ಇಂಡಿಯಾದ ಅನುಭವಿ ಆಟಗಾರ ವಿರಾಟ್ ಕೊಹ್ಲಿ ಸಿಡಿಸಿದ ಅದ್ಭುತ ಶತಕದಿಂದಾಗಿ ಟೀಮ್ ಇಂಡಿಯಾ ಪಂದ್ಯದಲ್ಲಿ ಸುಸ್ಥಿತಿಯಲ್ಲಿದೆ. ಪಂದ್ಯ ಕೊನೆಯ ದಿನಕ್ಕೆ ಕಾಲಿಟ್ಟ ಕಾರಣ ಎಲ್ಲಾ ಫಲಿತಾಂಶಗಳಿಗೂ ಮುಕ್ತವಾಗಿದ್ದು ಕೊನೆಯ ದಿನ ಯಾರ ಕೈ ಮೇಲಾಗಲಿದೆ ಎಂಬುದು ಕುತೂಹಲ ಮೂಡಿಸಿದೆ. ಈ ಸಂದರ್ಭದಲ್ಲಿ ಆಸ್ಟ್ರೇಲಿಯಾದ ವಿಕೆಟ್ ಕೀಪರ್ ಬ್ಯಾಟರ್ ಅಲೆಕ್ಸ್ ಕ್ಯಾರಿ ನಾಲ್ಕನೇ ದಿನದಾಟದ ಬಗ್ಗೆ ಮಾತನಾಡಿದ್ದು ಕೊಹ್ಲಿ ಪ್ರದರ್ಶನಕ್ಕೆ ವಿಶೇಷ ಮೆಚ್ಚಿಗೆ ಸೂಚಿಸಿದ್ದಾರೆ.
ಅಹ್ಮದಾಬಾದ್ ಟೆಸ್ಟ್ನ ಮೊದಲ ಇನ್ನಿಂಗ್ಸ್ನಲ್ಲಿ ಟೀಮ್ ಇಂಡಿಯಾದ ಆಟಗಾರ ವಿರಾಟ್ ಕೊಹ್ಲಿ ಆಸ್ಟ್ರೇಲಿಯಾಗೆ ಯಾವುದೇ ಒಂದು ಅವಕಾಶವನ್ನು ಕೂಡ ನೀಡಲಿಲ್ಲ. ಆತನೋರ್ವ ಕ್ಲಾಸ್ ಆಟಗಾರ ಎಂದು ಅಲೆಕ್ಸ್ ಕ್ಯಾರಿ ಬಣ್ಣಿಸಿದ್ದಾರೆ. ಮುಂದುವರಿದ ಅವರು ವಿರಾಟ್ ಕೊಹ್ಲಿ ಅವರ ಈ ಪ್ರದರ್ಶಣ ತನಗೆ ಅಚ್ಚರಿ ಮೂಡಿಸಿಲ್ಲ ಎಂದು ಕೂಡ ಹೇಳಿಕೆ ನೀಡಿದ್ದಾರೆ.
ಅಹ್ಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ತಮ್ಮ 28ನೇ ಟೆಸ್ಟ್ ಶತಕವನ್ನು ಬಾರಿಸಿದ್ದಾರೆ. ಈ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅವರು 75ನೇ ಶತಕವನ್ನು ಬಾರಿಸಿದಂತಾಗಿದೆ. ಸಚಿನ್ ತೆಂಡೂಲ್ಕರ್ ಬಳಿಕ ಈ ಸಾಧನೆ ಮಾಡಿದ ಏಕೈಕ ಆಟಗಾರ ಎನಿಸಿಕೊಂಡಿರುವ ವಿರಾಟ್ ಕೊಹ್ಲಿ ಅತ್ಯಂತ ಕಡಿಮೆ ಇನ್ನಿಂಗ್ಸ್ನಲ್ಲಿ ಈ ಸಾಧನೆ ಮಾಡಿದ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.
"ಆತನೋರ್ವ ಕ್ಲಾಸ್ ಆಟಗಾರ, ನಮಗೆ ಆತ ಯಾವುದೇ ಅವಕಾಶವನ್ನು ನೀಡಲಿಲ್ಲ. ವಿರಾಟ್ ಕೊಹ್ಲಿಗೆ ಇಲ್ಲಿ ಬೌಲಿಂಗ್ ನಡೆಸುವುದು ಬಹಳ ಕಠಿಣವಾಗಲಿದೆ ಎಂದು ನಾವು ಊಹಿಸಿದ್ದೆವು. ಆತನನ್ನು ಎಷ್ಟು ಸಾಧ್ಯವೀ ಅಷ್ಟು ತಡೆಹಿಡಿಯುವ ಪ್ರಯತ್ನ ನಡೆಸಿದೆವು ಹಾಗೂ ಮತ್ತೊಂದು ತುದಿಯಲ್ಲಿ ವಿಕೆಟ್ಗಳನ್ನು ಪಡೆಯಲು ಪ್ರಯತ್ನಿಸಿದೆವು. ವಿರಾಟ್ ಕೊಹ್ಲಿ ಮೈದಾನಕ್ಕೆ ಇಳಿದಾಗ ಅಲ್ಲಿ ಅಬ್ಬರವಿರುತ್ತದೆ ಎಂಬುದು ನಮಗೆ ತಿಳಿದಿದೆ. ಅವರು ಇಂದು ಅದ್ಭುತವಾಗಿ ಆಡಿದರು. ಆದರೆ ನಾವು ಕೂಡ ಉತ್ತಮ ಸ್ಥಿತಿಯಲ್ಲಿಯೇ ಇದ್ದೇವೆ ಎಂದು ಭಾವಿಸುತ್ತೇನೆ" ಎಂದಿದ್ದಾರೆ ಆಸ್ಟ್ರೇಲಿಯಾದ ಆಟಗಾರ ಅಲೆಕ್ಸ್ ಕ್ಯಾರಿ.
ಇನ್ನು ಈ ಸಂದರ್ಭದಲ್ಲಿ ಟೀಮ್ ಇಂಡಿಯಾದ ಮಾಜಿ ಆಟಗಾರ ಹರ್ಭಜನ್ ಸಿಂಗ್ ಕೂಡ ಪ್ರತಿಕ್ರಿಯಿಸಿದ್ದಾರೆ. ಕೊಹ್ಲಿ ತಮ್ಮ ಲಯವನ್ನು ಕಂಡುಕೊಳ್ಳಬೇಕಾದರೆ ಈ ರೀತಿಯ ಇನ್ನಿಂಗ್ಸ್ನ ಅಗತ್ಯವಿತ್ತು ಎಂದಿದ್ದಾರೆ. ಇಂಥಾ ಇನ್ನಿಂಗ್ಸ್ಗಳನ್ನು ಹೆಚ್ಚಾಗಿ ಕೊಹ್ಲಿಯಿಂದ ನಿರೀಕ್ಷಿಸುವುದಾಗಿ ಹೇಳಿದ ಹರ್ಭಜನ್ ಸಿಂಗ್ ತಂಡಕ್ಕೆ ಹಳೇಯ ಕೊಹ್ಲಿಯಂತೆ ಕೊಡುಗೆ ನೀಡಬೇಕು ಎಂಬ ನಿರೀಕ್ಷೆ ವ್ಯಕ್ತಪಡಿಸಿದರು.
"ವಿರಾಟ್ ಕೊಹ್ಲಿ ಹಾಗೂ ಅವರ ಅಭಿಮಾನಿಗಳು ಇಂದು ಈ ಶತಕದಿಂದಾಗಿ ಬಹಳ ನಿರಾಳವಾಗಿರುತ್ತಾರೆ. ನಾನು ಕೂಡ ಅವರು ಸೇರಿದಂತೆ ಎಲ್ಲಾ ಬ್ಯಾಟರ್ಗಳು ಕೂಡ ರನ್ಗಳಿಸುವುದನ್ನು ನಿರೀಕ್ಷಿಸುತ್ತೇನೆ. ಉತ್ತಮವಾದ ಪಿಚ್ಗಳಲ್ಲಿ ಆಡಿದರೆ ಹೆಚ್ಚಿನ ರನ್ಗಳು ಹರಿದುಬರುತ್ತವೆ. ರನ್ಗಳಿಸಲು ಪೂರಕವಾಗುವಂಥಾ ಪಿಚ್ ದೊರೆತಿರುವುದು ಅದೃಷ್ಟ" ಎಂದಿದ್ದಾರೆ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್.