
ಆಸ್ಟ್ರೇಲಿಯಾ ತಂಡ ಬಾರ್ಡರ್-ಗವಾಸ್ಕರ್ ಟ್ರೋಪಿಯಲ್ಲಿ ಕಮ್ಬ್ಯಾಕ್ ಮಾಡಬೇಕಾದರೆ ವೈಯಕ್ತಿಕ ಪ್ರದರ್ಶನಗಳಿಂದ ಮಾತ್ರವೇ ಸಾಧ್ಯ ಎಂದಿದ್ದಾರೆ ಭಾರತದ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್. ದೆಹಲಿಯಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿಯೂ ಆಸ್ಟ್ರೇಲಿಯಾ ತಂಡ ಹೀನಾಯ ಪ್ರದರ್ಶನ ನೀಡಿದ್ದು 6 ವಿಕೆಟ್ಗಳ ಅಂತರದ ಸೋಲು ಅನುಭವಿಸಿದೆ. ಹೀಗಾಗಿ ಟೀಮ್ ಇಂಡಿಯಾ 4 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 2-0 ಅಂತರದ ಮೇಲುಗೈ ಸಾಧಿಸಿದೆ.
ಭಾರತದ ಗೆಲುವಿನ ಬಳಿಕ ಸ್ಟಾರ್ ಸ್ಪೋರ್ಟ್ಸ್ ಜೊತೆಗೆ ಮಾತನಾಡಿದ ಗೌತಮ್ ಗಂಭೀರ್ "ಸರಣಿಯ ಮಧ್ಯದಲ್ಲಿ ಆಸ್ಟ್ರೇಲಿಯಾದ ದಾಂಡಿಗರು ಬ್ಯಾಟಿಂಗ್ನ ಕೌಶಲ್ಯತೆಯಲ್ಲಿ ಬದಲಾವಣೆ ಮಾಡಿಕೊಳ್ಳಲು ಸಾಧ್ಯವಿಲ್ಲ, ಹೀಗ ಅವರಲ್ಲಿರುವ ಒಂದೇ ಭರವಸೆಯೆಂದರೆ ವೈಯಕ್ತಿಕ ಪ್ರದರ್ಶನಗಳ ಮೇಲೆ ಭರವಸೆಯಿಡುವುದಾಗಿದೆ" ಎಂದಿದ್ದಾರೆ.
"ಈ ಆಟಗಾರರಿಗೆ ಈಗ ರಕ್ಷಣಾತ್ಮಕ ಆಟವನ್ನು ಕಲಿಸುವುದು ಸಾಧ್ಯ ಎಂದು ನನಗೆ ಅನಿಸುತ್ತಿಲ್ಲ. ಸರಣಿಯ ಮಧ್ಯಭಾಗದಲ್ಲಿ ನೀವು ತಾಂತ್ರಿಕ ಬದಲಾವಣೆ ಮಾಡಿಕೊಂಡರೆ 260 ರನ್ಗಳಿಸಲು ಸಾಧ್ಯವಿಲ್ಲ 120 ರನ್ ಮಾತ್ರವೇ ಗಳಿಸಬಹುದು. ಆಟಗಾರರ ವೈಯಕ್ತಿಕ ಪ್ರದರ್ಶನಗಳಿಂದ ಮಾತ್ರವೇ ತಂಡ ಕಮ್ಬ್ಯಾಕ್ ಮಾಡಬಹುದು. ಒಟ್ಟಾರೆ ತಂಡವಾಗಿ ಸಾಧ್ಯವಿಲ್ಲ" ಎಂದಿದ್ದಾರೆ ಗೌತಮ್ ಗಂಭೀರ್.
ಇನ್ನು ಮುಂದುವರಿದು ಮಾತನಾಡಿದ ಗಂಭೀರ್ ಆಸ್ಟ್ರೇಲಿಯಾ ಆಟಗಾರರ ಬಳಗದಲ್ಲಿ ಸಾಕಷ್ಟು ಗೊಂದಲ ಹಾಗೂ ಆತ್ಮವಿಶ್ವಾಸದ ಕೊರತೆಯಿದೆ ಎಂದಿದ್ದು ಇದರಿಂದ ಹೊರಬರುವುದು ಅಸಾಧ್ಯ ಎಂದಿದ್ದಾರೆ. "ಉಸ್ಮಾನ್ ಖವಾಜಾ ದ್ವಿಶತಕ ಸಿಡಿಸಿದರೆ, ಅಥವಾ ಸ್ಟೀವ್ ಸ್ಮಿತ್ ವೈಯಕ್ತಿಕವಾದ ಶತಕ ಅಥವಾ 150 ರನ್ಗಳನ್ನು ಗಳಿಸಿದರೆ, ಆಸ್ಟ್ರೇಲಿಯಾ ಉತ್ತಮ ಸ್ಕೋರ್ ಗಳಿಸಲು ಸಾಧ್ಯವಿದೆ. ಆದರೆ ತಾಂತ್ರಿಕವಾಗಿ ನೋಡಿದರೆ ಅವರು ಕಮ್ಬ್ಯಾಕ್ ಮಾಡುವುದು ಸಾಧ್ಯ ಎಂದು ನನಗೆ ಅನಿಸುತ್ತಿಲ್ಲ" ಎಂದಿದ್ದಾರೆ ಗಂಭೀರ್.
ಇನ್ನು ಇದೇ ಸಂದರ್ಭದಲ್ಲಿ ಗೌಂಭೀರ್ ಅವರಲ್ಲಿ ಭಾರತ ಈ ಸರಣಿಯನ್ನು ವೈಟ್ವಾಶ್ ಮಾಡಬಹುದೇ ಎಂದು ಕೇಳಲಾಯಿತು. ಇದಕ್ಕೆ ಉತ್ತರಿಸುವುದು ಅಸಾಧ್ಯ ಎಂದಿದ್ದಾರೆ ಗಂಭೀರ್. "ಆಸ್ಟ್ರೇಲಿಯಾ 0-4 ಅಂತರದಿಂದ ಭಾರತಕ್ಕೆ ಶರಣಾಗಲಿದೆ ಎಂದು ಹೇಳಲು ಸಾಧ್ಯವಿಲ್ಲ. ಯಾಕೆಂದರೆ ಆಸ್ಟ್ರೇಲಿಯಾ ತಂಡದಲ್ಲಿ ಸ್ಟೀವ್ ಸ್ಮಿತ್, ಲ್ಯಾಬುಶೈನ್, ಉಸ್ಮಾನ್ ಖವಾಜಾ, ಮೊದಲಾದ ಆಟಗಾರರಿದ್ದಾರೆ. ಈ ಆಟಗಾರರು ಫಲಿತಾಂಶದಲ್ಲಿ ಭಾರೀ ಬದಲಾವನೆ ಮಾಡಬಹುದು" ಎಂದಿದ್ದಾರೆ ಗಂಭೀರ್.