
ಬೆಂಗಳೂರು, ಆಗಸ್ಟ್ 28: ಗಾಯಗೊಂಡಿದ್ದ ವೇಗದ ಬೌಲರ್ ಭುವನೇಶ್ವರ್ ಕುಮಾರ್ ಫಿಟ್ ಆಗಿದ್ದು, ಬೆಂಗಳೂರಿನಲ್ಲಿ ನಡೆಯುತ್ತಿರುವ ಚತುಷ್ಕೋನ ಸರಣಿಯಲ್ಲಿ ಭಾರತ ಎ ತಂಡ ಪರ ಆಡಲಿದ್ದಾರೆ ಎಂದು ಬಿಸಿಸಿಐ ತಿಳಿಸಿದೆ.
ಇಂಗ್ಲೆಂಡ್ ವಿರುದ್ಧದ ಮೂರನೇ ಏಕದಿನ ಪಂದ್ಯದ ವೇಳೆ ಹಿಂಬದಿ ಗಾಯಕ್ಕೆ ತುತ್ತಾಗಿದ್ದ ಭುವನೇಶ್ವರ್, ಉಳಿದ ಪಂದ್ಯಗಳನ್ನು ಆಡಲು ಸಾಧ್ಯವಾಗದೆ ತವರಿಗೆ ಮರಳಿದ್ದರು.
ಆ ಪಂದ್ಯದಲ್ಲಿ ಅವರು 7 ಓವರ್ಗಳಲ್ಲಿ 49 ರನ್ ನೀಡಿದ್ದರು. ಯಾವುದೇ ವಿಕೆಟ್ ಪಡೆಯಲು ಅವರಿಗೆ ಸಾಧ್ಯವಾಗಿರಲಿಲ್ಲ. ಗಾಯದ ಕಾರಣ ಅವರು ಹಿಂದಿನ ಮೊನಚು ಕಳೆದುಕೊಂಡಿದ್ದರು.
ಟೆಸ್ಟ್ ಸರಣಿಯಿಂದಲೂ ಹೊರಗುಳಿದಿದ್ದ ಅವರು, ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ತರಬೇತಿ ಪಡೆದುಕೊಳ್ಳಲಿದ್ದಾರೆ.
'ಭುವನೇಶ್ವರ್ ಕುಮಾರ್ ಫಿಟ್ ಆಗಿದ್ದಾರೆ ಎಂದು ಘೋಷಿಸಲಾಗಿದೆ. ಪ್ರಸ್ತುತ ನಡೆಯುತ್ತಿರುವ ಚತುಷ್ಕೋನ ಸರಣಿಯಲ್ಲಿ ಭಾರತ ಎ ತಂಡದಲ್ಲಿ ಅವರು ಆಡಲಿದ್ದಾರೆ' ಎಂದು ಬಿಸಿಸಿಐ ಹೇಳಿಕೆಯಲ್ಲಿ ತಿಳಿಸಿದೆ.
ಭುವನೇಶ್ವರ್ ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಹೆಚ್ಚುವರಿ ಎರಡು ವಾರಗಳು ಬೇಕು. ಹೀಗಾಗಿ ಅವರು ಇಂಗ್ಲೆಂಡ್ ವಿರುದ್ಧದ ಕೊನೆಯ ಎರಡು ಟೆಸ್ಟ್ ಪಂದ್ಯಗಳಲ್ಲಿಯೂ ಆಡುವುದಿಲ್ಲ.
ಗಾಯದ ಕಾರಣ ಅವರು ಶ್ರೀಲಂಕಾದಲ್ಲಿ ನಡೆದ ನಿದಹಾಸ್ ಟ್ರೋಫಿ ಮತ್ತು ಅಫ್ಘಾನಿಸ್ತಾನ ವಿರುದ್ಧದ ಏಕೈಕ ಟೆಸ್ಟ್ನಲ್ಲಿಯೂ ಆಡಿರಲಿಲ್ಲ.
ಚತುಷ್ಕೋನ ಸರಣಿಯಲ್ಲಿ ಶ್ರೇಯಸ್ ಅಯ್ಯರ್ ನಾಯಕತ್ವದ ಭಾರತ ಎ ಮತ್ತು ದಕ್ಷಿಣ ಆಫ್ರಿಕಾ ಎ ತಂಡಗಳು ಆಗಸ್ಟ್ 29ರಂದು ಮೂರನೇ ಸ್ಥಾನಕ್ಕಾಗಿ ಸೆಣಸಲಿವೆ.
ದಕ್ಷಿಣ ಆಫ್ರಿಕಾ ಎ ಮತ್ತು ಭಾರತ ಬಿ ತಂಡಗಳ ವಿರುದ್ಧ ಸೋಲು ಅನುಭವಿಸಿದ್ದ ಭಾರತ ಎ, ಕೇವಲ 9 ಅಂಕ ಗಳಿಸಿ ಫೈನಲ್ ತಲುಪುಲು ವಿಫಲವಾಗಿತ್ತು.