
ನವದೆಹಲಿ: ತನ್ನ ಟೆಸ್ಟ್ ವೃತ್ತಿ ಬದುಕಿನ ಬಗೆಗಿನ ಗಾಳಿಸುದ್ದಿಗೆ ಭಾರತದ ವೇಗಿ ಭುವನೇಶ್ವರ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ. ಭುವಿ ಟೆಸ್ಟ್ ಆಡಲು ಬಯಸುತ್ತಿಲ್ಲ ಎಂಬಂತೆ ವರದಿಗಳು ಪ್ರಕಟವಾಗಿದ್ದವು. ಇದಕ್ಕೆ ಭುವಿ ಟ್ವೀಟ್ ಮೂಲಕ ಖಾರವಾಗೇ ಪ್ರತಿಕ್ರಿಯಿಸಿದ್ದಾರೆ.
ಇಂಗ್ಲೆಂಡ್ನಲ್ಲಿ ನಡೆಯಲಿರುವ ಐಸಿಸಿ ವರ್ಲ್ಡ್ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಮತ್ತು ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಗೆ ಬಿಸಿಸಿಐ ತಂಡ ಪ್ರಕಟಿಸಿತ್ತು. ಇದರಲ್ಲಿ ಭುವನೇಶ್ವರ್ಗೆ ಸ್ಥಾನ ಲಭಿಸಿರಲಿಲ್ಲ. ಹೀಗಾಗಿ ಭುವಿಯನ್ನು ತಂಡದಿಂದ ಹೊರಗಿಟ್ಟಿದ್ದರ ಬಗ್ಗೆ ನಾನಾ ವರದಿಗಳು ಪ್ರಕಟವಾಗಿದ್ದವು. ಇದಕ್ಕೆ ಭುವಿ ಸ್ಪಷ್ಟನೆ ನೀಡಿದ್ದಾರೆ.
ಟ್ವೀಟ್ ಮಾಡಿರುವ ಭುವಿ, 'ನಾನು ಟೆಸ್ಟ್ ಕ್ರಿಕೆಟ್ ಆಡಲು ಬಯಸುತ್ತಿಲ್ಲ ಎಂಬಂತೆ ವರದಿಗಳು ಪ್ರಕಟವಾಗುತ್ತಿವೆ. ಅದಕ್ಕೆ ಸ್ಪಷ್ಟನೆ ನೀಡುತ್ತಿದ್ದೇನೆ. ತಂಡದ ಆಯ್ಕೆಯನ್ನು ಲೆಕ್ಕಿಸದೆ ನಾನು ಯಾವಾಗಲೂ ಮೂರೂ ಮಾದರಿಯ ಕ್ರಿಕೆಟ್ಗಳಿಗೆ ತಯಾರಿ ನಡೆಸುತ್ತಿದ್ದೇನೆ, ಅದನ್ನು ಇನ್ನೂ ಮುಂದುವರೆಸುತ್ತೇನೆ. ನಿಮಗೊಂದು ಸಲಹೆ; ದಯವಿಟ್ಟು ನಿಮ್ಮ ಊಹೆಗಳನ್ನು ಆಧರಿಸಿ ವರದಿಗಳನ್ನು ಬರೆಯಬೇಡಿ,' ಎಂದು ಬರೆದುಕೊಂಡಿದ್ದಾರೆ.
ಭಾರತ ತಂಡದಲ್ಲಿ ಈಗಾಗಲೇ ಟೆಸ್ಟ್ ಕ್ರಿಕೆಟ್ಗೆ ಬೇಕಾಗುವಂತ ಪ್ರತಿಭಾವಂತ ಬೌಲರ್ಗಳಿದ್ದಾರೆ. ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಜಸ್ಪ್ರೀತ್ ಬೂಮ್ರಾ, ಮೊಹಮ್ಮದ್ ಶಮಿ, ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್ ಇವರೆಲ್ಲ ಇಂಗ್ಲೆಂಡ್ ಪ್ರವಾಸ ತಂಡದಲ್ಲಿರುವವರು. ಇವರಲ್ಲಿ ಹೆಚ್ಚಿನವರು ಕಳೆದ ಆಸ್ಟ್ರೇಲಿಯಾ ಪ್ರವಾಸದಲ್ಲಿ ಉತ್ತಮ ಪ್ರದರ್ಶನ ನೀಡಿದವರು. ಹೀಗಾಗಿ ಇವರನ್ನು ತಂಡದಿಂದ ಕೈಬಿಡಲು ಬಿಸಿಸಿಐ ಮನಸು ಮಾಡಿಲ್ಲ. ಈ ಕಾರಣದಿಂದ ಭುವಿಯನ್ನು ಬಿಸಿಸಿಐ ಇಂಗ್ಲೆಂಡ್ ಪ್ರವಾಸದಿಂದ ಹೊರಗಿಟ್ಟಿರಬಹುದು ಎಂದು ಹೇಳಲಾಗುತ್ತಿದೆ.