
ಟೀಮ್ ಇಂಡಿಯಾ ಸೀಮಿತ ಓವರ್ಗಳ ಪ್ರಮುಖ ಬೌಲರ್ ಭುವನೇಶ್ವರ್ ಕುಮಾರ್ ಟೆಸ್ಟ್ ತಂಡಕ್ಕೆ ಮರಳುವ ಬಯಕೆ ವ್ಯಕ್ತಪಡಿಸಿದ್ದಾರೆ. ಗಾಯದ ಸಮಸ್ಯೆಯಿಂದ ತಂಡಕ್ಕೆ ಮರಳಿದ ಬಳಿಕ ಭುವನೇಶ್ವರ್ ಕುಮಾರ್ ಸೀಮಿತ ಓವರ್ಗಳಲ್ಲಿ ಸ್ಥಾನವನ್ನು ಭದ್ರಪಡಿಸಿಕೊಂಡರೂ ಟೆಸ್ಟ್ ತಂಡಕ್ಕೆ ಮರಳಲು ಅವರಿಂದ ಸಾಧ್ಯವಾಗಿಲ್ಲ.
ಹೀಗಾಗಿ ಟೆಸ್ಟ್ ತಂಡಕ್ಕೆ ಮರಳಲು ಕಠಿಣ ಪ್ರಯತ್ನ ನಡೆಸುತ್ತಿರುವುದಾಗಿ ಅವರು ಹೇಳಿದ್ದಾರೆ. "ಟೆಸ್ಟ್ ಕ್ರಿಕೆಟ್ನಲ್ಲಿ ಮರಳುವುದನ್ನು ಎದುರು ನೋಡುತ್ತಿದ್ದೇನೆ. ಅದರೆ ಕಮ್ಬ್ಯಾಕ್ ಅಷ್ಟು ಸುಲಭವಲ್ಲ ಎಂಬುದು ಗೊತ್ತಿದೆ. ಯಾಕೆಂದರೆ ತಂಡದಲ್ಲಿ ಇರುವ ಪ್ರತಿಯೊಬ್ಬ ಆಟಗಾರನೂ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ," ಖಾಸಗಿ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಭುವನೇಶ್ವರ್ ಕುಮಾರ್ ಹೇಳಿಕೊಂಡಿದ್ದಾರೆ.
"ಗಾಯದ ಸಮಸ್ಯೆಗಳಿಂದ ಸಂಪೂರ್ಣ ಚೇತರಿಸಿದ್ದೇನೆ. ಅಂಗಣಕ್ಕೆ ಇಳಿದು ಅಬ್ಬರಿಸುವುದನ್ನು ಎದುರು ನೋಡುತ್ತಿದ್ದೇನೆ. ಆದರೆ ಸದ್ಯದ ಮಟ್ಟಿಗೆ ವಿಶ್ವಕಪ್ ತಂಡಕ್ಕೆ ಆಯ್ಕೆ ಆಗುವುದನ್ನು ಎದುರು ನೋಡುತ್ತಿಲ್ಲ. ಪರಿಸ್ಥಿತಿ ಸುಧಾರಣೆಯಾಗಲಿ ಎಂದು ಎದುರು ನೋಡುತ್ತಿದ್ದೇನೆ ಎಂದಿದ್ದಾರೆ.
ನನ್ನ ಸಾಮರ್ಥ್ಯ ಮೀರಿ ಟೆಸ್ಟ್ನಲ್ಲಿ ಸ್ಥಾನ ಪಡೆಯುವ ಪ್ರಯತ್ನ ಮಾಡುತ್ತೇನೆ ಎಂದಿರುವ ಭುವಿ ಟೆಸ್ಟ್ ಪಂದ್ಯ ಕ್ರಿಕೆಟ್ನ ಅತ್ಯಂತ ಕಠಿಣ ಮಾದರಿ. ಅಲ್ಲಿ ಉತ್ತಮ ಪ್ರದರ್ಶನ ನೀಡಿದರೆ ಸಿಗುವ ಸಂತೃಪ್ತಿಯೇ ಬೇರೆ ಎಂದಿದ್ದಾರೆ. ಸ್ವಿಂಗ್ ದಾಳಿಯ ಮೂಲಕ ಎದುರಾಳಿಗಳನ್ನು ಕಟ್ಟಿಹಾಕುವ ಚಾಣಕ್ಷತನತೆ ಹೊಂದಿರುವ ಭುವನೇಶ್ವರ್ 2018ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಜೊಹಾನ್ಸ್ಬರ್ಗ್ನಲ್ಲಿ ನಡೆದ ಟೆಸ್ಟ್ ಪಂದ್ಯದ ಬಳಿಕ ಟೆಸ್ಟ್ ತಂಡದಲ್ಲಿ ಕಾಣಿಸಿಕೊಂಡಿಲ್ಲ.
ಗಾಯದ ಸಮಸ್ಯೆಗೆ ತುತ್ತಾಗಿದ್ದ ಭುವನೇಶ್ವರ್ ಕುಮಾರ್ ಕಳೆದ ನ್ಯೂಜಿಲೆಂಡ್ ವಿರುದ್ಧದ ಸರಣಿಯನ್ನು ಕೂಡ ತಪ್ಪಿಸಿಕೊಂಡಿದ್ದರು. ಈಗ ಸಂಪೂರ್ಣವಾಗಿ ಫಿಟ್ ಆಗಿದ್ದು ತನ್ನ ಮೊದಲ ಆದ್ಯತೆ ಟೀಮ್ ಇಂಡಿಯಾ ಟೆಸ್ಟ್ ತಂಡದಲ್ಲಿ ಸ್ಥಾನವನ್ನು ಮತ್ತೆ ಗಳಿಸುವುದು ಎಂದಿದ್ದಾರೆ.