
ಇಂಗ್ಲೆಂಡ್ ವಿರುದ್ಧದ ಸೀಮಿತ ಓವರ್ಗಳ ಸರಣಿಯ ಮೂಲಕ ಟೀಮ್ ಇಂಡಿಯಾ ವೇಗಿ ಭುವನೇಶ್ವರ್ ಕುಮಾರ್ ಭಾರತ ತಂಡಕ್ಕೆ ಮರಳಿದ್ದರು. ಈ ಸರಣಿಯಲ್ಲಿ ಭುವನೇಶ್ವರ್ ಕುಮಾರ್ ಅದ್ಭುತ ಬೌಲಿಂಗ್ ಪ್ರದರ್ಶನ ಮಾಡುವ ಮೂಲಕ ತಂಡಕ್ಕೆ ಕೊಡುಗೆಯನ್ನು ನೀಡಿದರು. ಈ ಪ್ರದರ್ಶನಕ್ಕೆ ಮಾಜಿ ಕ್ರಿಕೆಟಿಗ ಲಕ್ಷ್ಮಣ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಭುವನೇಶ್ವರ್ ಕುಮಾರ್ ಭಾರತ ತಂಡಕ್ಕೆ ಮರಳುವ ಜೊತೆಗೆ ಉತ್ತಮ ಫಾರ್ಮ್ನಲ್ಲಿರುವುದು ಭಾರತ ತಂಡಕ್ಕೆ ದೊಡ್ಡ ಸಕಾರಾತ್ಮಕ ಸಂಗತಿಯಾಗಿದೆ. ಮುಂಬರುವ ಟಿ20 ವಿಶ್ವಕಪ್ನಲ್ಲಿ ಭುವನೇಶ್ರ್ ಕುಮಾರ್ ಭಾರತ ತಂಡದ ಪರವಾಗಿ ಪ್ರಮುಖ ಪಾತ್ರವಹಿಸಲಿದ್ದಾರೆ ಎಂದು ವಿವಿಎಸ್ ಲಕ್ಷ್ಮಣ್ ಹೇಳಿಕೆ ನೀಡಿದ್ದಾರೆ.
ಭುವನೇಶ್ವರ್ ಕುಮಾರ್ ಇತ್ತೀಚೆಗೆ ಗಾಯದ ಸಮಸ್ಯೆಗೆ ಹಲವು ಬಾರಿ ಒಳಗಾಗಿದ್ದಾರೆ. ಕಳೆದ ಬಾರಿಯ ಐಪಿಎಲ್ ಆವೃತ್ತಿಯಿಂದಲೂ ಭುವನೇಶ್ವರ್ ಕುಮಾರ್ ಬಹುತೇಕ ಗಾಯದ ಕಾರಣದಿಮದಲೇ ಹೊರಗುಳಿಯಬೇಕಾಯಿತು. ಐಪಿಎಲ್ನಲ್ಲಿ ಸನ್ರೈಸರ್ಸ್ ಹೈದರಾಬಾದ್ ಪರವಾಗಿ ಕಣಕ್ಕಿಳಿಯುತ್ತಿರುವ ಭುವನೇಶ್ವರ್ ಕುಮಾರ್ ಅವರನ್ನು ಇದೇ ತಂಡದ ಮೆಂಟರ್ ಆಗಿರುವ ಲಕ್ಷ್ಮಣ್ ಸಮೀಪದಿಂದ ಗಮನಿಸಿದ್ದಾರೆ.
"ಸನ್ರೈಸರ್ಸ್ ಹೈದರಾನಾದ್ ತಂಡದ ಪರವಾಗಿ ನಾನು ಆತನ ಜೊತೆಗೆ ಸಾಕಷ್ಟು ಹತ್ತಿರದಿಂದ ಕರ್ತವ್ಯ ನಿರ್ವಹಿಸಿದ್ದೇನೆ. ಹಾಗಾಗಿ ಭಾರತ ತಂಡಕ್ಕೆ ಆತನ ಪುನರಾಗಮನ ಎಷ್ಟು ಪ್ರಮುಖವಾಗಿದ್ದು ಎಂದು ನನಗೆ ಅರಿವಿದೆ. ಯಾವಾಗೆಲ್ಲಾ ತಾನು ಅವಕಾಶವನ್ನು ಪಡೆಯುತ್ತಾರೋ ಆಗ ಆತ ನಿಜವಾಗಿಯೂ ಚೆಂಡಿನ ಮೂಲಕ ಅದ್ಭುತವಾಗಿ ಕೆಲಸ ನಿರ್ವಹಿಸುತ್ತಾರೆ" ಎಂದಿದ್ದಾರೆ ವಿವಿಎಸ್ ಲಕ್ಷ್ಮಣ್.
"ನನ್ನ ಪ್ರಕಾರ ಭುವನೇಶ್ವರ್ ಕುಮಾರ್ ಫಾರ್ಮ್ಗೆ ಮರಳಿರುವುದು ಭಾರತಕ್ಕೆ ದೊಡ್ಡ ಸಕಾರಾತ್ಮಕ ಸಂಗತಿ. ಅದರಲ್ಲೂ ಈ ವರ್ಷ ಭಾರತದಲ್ಲಿ ಟಿ20 ವಿಶ್ವಕಪ್ ನಡೆಯುವುದು ಪ್ರಮುಖ ಸಂಗತಿಯಾಗಿದೆ" ಎಂದು ವಿವಿಎಸ್ ಲಕ್ಷ್ಮಣ್ ಭುವನೇಶ್ವರ್ ಕುಮಾರ್ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.