ಮುಂಬೈ, ನ.5: ಟೀಂ ಇಂಡಿಯಾದ ವೇಗದ ಬೌಲರ್ ಭುವನೇಶ್ವರ್ ಕುಮಾರ್ ಅವರು ಐಸಿಸಿ ಎಲ್ ಜಿ ಪೀಪಲ್ಸ್ ಚಾಯ್ಸ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ ಎಂದು ಐಸಿಸಿ ಬುಧವಾರ ಪ್ರಕಟಿಸಿದೆ. ಮೊಟ್ಟ ಮೊದಲ ಬಾರಿಗೆ ಬೌಲರ್ ಒಬ್ಬರಿಗೆ ಈ ಪ್ರಶಸ್ತಿ ಲಭಿಸುತ್ತಿದೆ.
ಐಸಿಸಿ ನೀಡುವ ಎಲ್ ಜಿ ಪೀಪಲ್ಸ್ ಚಾಯ್ಸ್ ಪ್ರಶಸ್ತಿ ಮೊದಲಿಗೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ (2010) ಅವರಿಗೆ ಲಭಿಸಿತ್ತು. ನಂತರ ಶ್ರೀಲಂಕಾದ ಕುಮಾರ ಸಂಗಾಕ್ಕಾರ (2011) ಹಾಗೂ ಮಹೇಲ ಜಯವರ್ಧನೆ (2012) ಅವರು ಈ ಪ್ರೆಶಸ್ತಿಗೆ ಭಾಜನರಾಗಿದ್ದರು. ಕಳೆದ ಬಾರಿಯ ಪ್ರಶಸ್ತಿ ಟೀಂ ಇಂಡಿಯಾ ನಾಯಕ ಎಂಎಸ್ ಧೋನಿ ಪಾಲಾಗಿತ್ತು.

ಈ ವರ್ಷ ಈ ಪ್ರಶಸ್ತಿಯ ಸಾಲಿನಲ್ಲಿ ಆಸ್ಟ್ರೇಲಿಯಾದ ವೇಗದ ಬೌಲರ್ ಮಿಚೆಲ್ ಜಾನ್ಸನ್, ಶ್ರೀಲಂಕಾದ ನಾಯಕ ಏಜೆಂಲೋ ಮ್ಯಾಥ್ಯೂಸ್ , ದಕ್ಷಿಣ ಆಫ್ರಿಕಾದ ವೇಗಿ ಡೇಲ್ ಸ್ಟೇನ್ ಮತ್ತು ಇಂಗ್ಲೆಂಡ್ ಮಹಿಳಾ ತಂಡದ ನಾಯಕಿ ಚಾರ್ಲೋಟೋ ಎಡ್ವರ್ಡ್ಸ್ ಪೈಪೋಟಿ ನಡೆಸಿದ್ದರು. ಅಂತಿಮವಾಗಿ ವೇಗಿ ಭುವನೇಶ್ವರ್ ಕುಮಾರ್ ಅವರು ಪ್ರತಿಷ್ಠಿತ ಪ್ರಶಸ್ತಿ ಗಳಿಸಿದ್ದಾರೆ. [ಕುಂಬ್ಳೆಯಿಂದ ಹೊಸ ಸ್ಪೆಲ್ ಶುರು]
ಟೀಂ ಇಂಡಿಯಾದ ಪ್ರಮುಖ ವೇಗಿ ಭುವನೇಶ್ವರ್ ಕುಮಾರ್ ಅವರಿಗೆ ಕ್ರಿಕೆಟ್ ದಿಗ್ಗಜ ಅನಿಲ್ ಕುಂಬ್ಳೆ ಅವರು ಹಾರ್ದಿಕ ಅಭಿನಂದನೆ ಸಲ್ಲಿಸಿದ್ದಾರೆ. ಇತ್ತೀಚೆಗಷ್ಟೇ ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ಸೇರಿರುವ ಅನಿಲ್ ಕುಂಬ್ಳೆ ಅವರು ಟ್ವೀಟ್ ಮಾಡಿ ಭುವನೇಶ್ವರ್ ಗೆ ವಿಶ್ ಮಾಡಿದ್ದಾರೆ.
ಪ್ರಶಸ್ತಿಗೆ ಆಯ್ಕೆಯಾಗಿದ್ದಕ್ಕೆ ಸಂತಸ ವ್ಯಕ್ತಪಡಿಸಿರುವ ಭುವನೇಶ್ವರ್ ಕುಮಾರ್, ಐಸಿಸಿ ಎಲ್ ಜಿ ಪೀಪಲ್ಸ್ ಚಾಯ್ಸ್ ಪ್ರಶಸ್ತಿಗೆ ನನ್ನನ್ನು ಆಯ್ಕೆ ಮಾಡಿ ಮತ ಹಾಕಿದ ಎಲ್ಲರಿಗೂ ನಾನು ಧನ್ಯವಾದ ಅರ್ಪಿಸುತ್ತೇನೆ. ನನ್ನ ಅಭಿಮಾನಿಗಳ ಹಾರೈಕೆ ಹಾಗೂ ತಂಡದ ಇತರೆ ಸದಸ್ಯರ ಸಹಕಾರದಿಂದ ಟೀಂ ಇಂಡಿಯಾಕ್ಕಾಗಿ ಉತ್ತಮವಾಗಿ ಆಡಲು ಸಾಧ್ಯವಾಗಿದೆ ಎಂದು ಹೇಳಿದ್ದಾರೆ.