ಸೌದಿಯಲ್ಲಿ ನಡೆದ ಐಪಿಎಲ್ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸ್ಟಾರ್ ಆಟಗಾರರಿಗೆ ಮಣೆ ಹಾಕಿದೆ. ಈ ಆಟಗಾರರು ಈಗಾಗಲೇ ಐಪಿಎಲ್ನಲ್ಲಿ ತಮ್ಮ ಆಟದಿಂದ ಗಮನ ಸೆಳೆದರೆ, ಯುವ ಆಟಗಾರರು ಈಗ ರಾಷ್ಟ್ರೀಯ ತಂಡದ ಪರ ಮಿಂಚು ಹರಿಸುತ್ತಿದ್ದಾರೆ. ಆರ್ಸಿಬಿ ತಂಡವನ್ನು ಸೇರುತ್ತಿದ್ದಂತೆ ಇಂಗ್ಲೆಂಡ್ ತಂಡದ ಜಾಕಬ್ ಬೆಥೆಲ್ ಅವರ ಅದೃಷ್ಟ ಬದಲಾಯಿತು. ಅವರಿಗೆ ಇಂಗ್ಲೆಂಡ್ ತಂಡದಲ್ಲಿ ಸ್ಥಾನ ಲಭಿಸಿತು. ಅಲ್ಲದೆ ಕೇಂದ್ರ ಒಪ್ಪಂದ ಸಹ ಸಿಕ್ಕಿತು. ಇದೇ ರೀತಿ ಇನ್ನೊಬ್ಬ ಆಟಗಾರನ ಅದೃಷ್ಟ ಈಗ ಬದಲಾಗಿದೆ.
ಟೀಮ್ ಇಂಡಿಯಾಕ್ಕೆ ಕಮ್ ಬ್ಯಾಕ್ ಮಾಡುವ ಕನಸು ಕಾಣುತ್ತಿರುವ ವೇಗಿಗೆ ಆರ್ಸಿಬಿ ಈ ಬಾರಿ ವೇದಿಕೆ ಕಲ್ಪಿಸಿದೆ. ಸೌದಿಯಲ್ಲಿ ನಡೆದ ಮೆಗಾ ಹರಾಜಿನಲ್ಲಿ ಆರ್ಸಿಬಿ, ಸನ್ರೈಸರ್ಸ್ ಹೈದರಬಾದ್ ತಂಡ ಕೈ ಬಿಟ್ಟ ವೇಗಿಗೆ ಭಾರೀ ಬಾಜಿ ಕಟ್ಟಿತು. ಈ ವೇಗಿ ಹೊಸ ಚೆಂಡಿನ ಮೂಲಕ ಬಿಗುವಿನ ದಾಳಿ ನಡೆಸಬಲ್ಲ ಕ್ಷಮತೆ ಹೊಂದಿದ್ದಾರೆ. ಇವರು ಐಪಿಎಲ್ನಲ್ಲಿ ಭರ್ಜರಿ ದಾಖಲೆ ಹೊಂದಿದ್ದಾರೆ. ಅಲ್ಲದೆ ಸ್ವಿಂಗ್ ಮೇಲೆ ಚೆನ್ನಾಗಿ ಕಮಾಂಡ್ ಹೊಂದಿರುವ ಭುವನೇಶ್ವರ್ ಕುಮಾರ್. ಇವರಿಗೆ ಆರ್ಸಿಬಿ 10.75 ಕೋಟಿ ನೀಡಿ ತಂಡಕ್ಕೆ ಸೇರಿಸಿಕೊಂಡಿದೆ.

ಆರ್ಸಿಬಿ ತಂಡವನ್ನು ಸೇರುತ್ತಿದ್ದಂತೆ ಭುವಿ ಹಳೆಯ ಖದರ್ನಲ್ಲಿ ಬೌಲಿಂಗ್ ಮಾಡುವಂತೆ ಕಂಡು ಬಂದಿದೆ. ಗುರುವಾರ ನಡೆದ ಸೈಯದ್ ಮುಷ್ತಾಕ್ ಅಲಿ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಭುವನೇಶ್ವರ್ ಕುಮಾರ್ ಅಮೋಘ ಸಾಧನೆ ಮಾಡಿದ್ದಾರೆ. ಈ ಮೂಲಕ ಆರ್ಸಿಬಿ ಅಭಿಮಾನಿಗಳ ಮುಖದಲ್ಲಿ ಮಂದಹಾಸ ಮೂಡಿಸಿದ್ದಾರೆ. ಸೈಯದ್ ಮುಷ್ತಾಕ್ ಅಲಿ ಟಿ20 ಕ್ರಿಕೆಟ್ ಟೂರ್ನಿಯ ಸಿ ಗುಂಪಿನ ಪಂದ್ಯದಲ್ಲಿ ಭುವನೇಶ್ವರ್ ಕುಮಾರ್ ಜಾರ್ಖಂಡ್ ವಿರುದ್ಧ ಹ್ಯಾಟ್ರಿಕ್ ವಿಕೆಟ್ ಸಾಧನೆ ಮಾಡಿದ್ದಾರೆ.
ಜಾರ್ಖಂಡ್ ವಿರುದ್ಧ ಉತ್ತರ ಪ್ರದೇಶ ಮೊದಲು ಬ್ಯಾಟ್ ಮಾಡಿ 20 ಓವರ್ಗಳಲ್ಲಿ 8 ವಿಕೆಟ್ಗೆ 160 ರನ್ ಸಿಡಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಜಾರ್ಖಂಡ್ 19.5 ಓವರ್ಗಳಲ್ಲಿ 150 ರನ್ ಗಳಿಗೆ ಆಲೌಟ್ ಆಯಿತು.

ಪಂದ್ಯದ 17ನೇ ಓವರ್ ಬೌಲ್ ಮಾಡಿದ ಭುವನೇಶ್ವರ್ ಕುಮಾರ್ ಅಮೋಘ ದಾಳಿ ಸಂಘಟಿಸಿದರು. ಮೊದಲ ಎಸೆತದಲ್ಲಿ ರಾಬಿನ್ ಮಿಂಜ್ ಅವರನ್ನು, ಎರಡನೇ ಎಸೆತದಲ್ಲಿ ಬಾಲ ಕೃಷ್ಣ ರನ್ನು, ಮೂರನೇ ಎಸೆತದಲ್ಲಿ ವಿವೇಕಾನಂದ ತಿವಾರಿ ಅವರನ್ನು ಬಲಿ ಪಡೆದು ಹ್ಯಾಟ್ರಿಕ್ ಸಾಧನೆ ಮಾಡಿದರು. ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಆಡಿದ 7 ಪಂದ್ಯಗಳಲ್ಲಿ ಭುವಿ 9 ವಿಕೆಟ್ ಕಬಳಿಸಿದ್ದಾರೆ.
ಭುವನೇಶ್ವರ್ ಕುಮಾರ್ ಈ ವರೆಗೆ ಐಪಿಎಲ್ನಲ್ಲಿ 176 ಪಂದ್ಯಗಳನ್ನು ಆಡಿದ್ದು, 181 ವಿಕೆಟ್ ಕಬಳಿಸಿದ್ದಾರೆ. ಇದರಲ್ಲಿ ಎರಡು ಬಾರಿ ಐದಕ್ಕೂ ಹೆಚ್ಚು ವಿಕೆಟ್ ಪಡೆದ ಬೀಗಿದ್ದಾರೆ.