ಏಷ್ಯಾ ಕಪ್ ಹಾಗೂ ವಿಶ್ವಕಪ್ ಟೂರ್ನಿಯ ಆರಂಭಕ್ಕೆ ಈಗಾಗಲೇ ದಿನಗಣನೆ ಆರಂಭವಾಗಿದ್ದು ಅಂತಿಮ ಹಂತದ ಸಿದ್ಧತೆಗಳನ್ನು ಭಾರತ ತಂಡ ನಡೆಸುತ್ತಿದೆ. ಈ ಸಂದರ್ಭದಲ್ಲಿ ಟೀಮ್ ಇಂಡಿಯಾ ಪಾಲಿಗೆ ಕಹಿಸುದ್ದಿಯೊಂದು ಹೊರಬೀಳುವ ಸಾಧ್ಯತೆ ಹೆಚ್ಚಾಗಿದೆ. ವಿಶ್ವಕಪ್ಗೆ ಮುನ್ನ ಟೀಮ್ ಇಂಡಿಯಾ ವೇಗಿ ಜಸ್ಪ್ರೀತ್ ಬೂಮ್ರಾ ಸಂಪೂರ್ಣವಾಗಿ ಫಿಟ್ ಆಗಿದ್ದು ಐರ್ಲೆಂಡ್ ಪ್ರವಾಸದಲ್ಲಿ ತಮಡದ ನಾಯಕತ್ವ ವಹಿಸಿಕೊಳ್ಳಲಿದ್ದರೆ ಮತ್ತಿಬ್ಬರು ಆಟಗಾರರಾದ ಕೆಎಲ್ ರಾಹುಲ್ ಹಾಗೂ ಶ್ರೇಯಸ್ ಐಯ್ಯರ್ ವಿಚಾರವಾಗಿ ಹಿನ್ನಡೆಯ ಸುದ್ದಿ ಹೊರಬೀಳುತ್ತಿದೆ.
ಇದೇ ತಿಂಗಳಾಂತ್ಯದಲ್ಲಿ ಆರಂಬವಾಗಲಿರುವ ಏಷ್ಯಾ ಕಪ್ ಟೂರ್ನಿಗೆ ಕೆಎಲ್ ರಾಹುಲ್ ಹಾಗೂ ಶ್ರೇಯಸ್ ಐಯ್ಯರ್ ಇಬ್ಬರು ಕೂಡ ಅಲಭ್ಯವಾಗುವುದು ಕಷ್ಟ ಎಂಬ ಸುದ್ದಿ ಹೊರಬಿದ್ದಿದೆ. ಹೀಗಾಗಿ ಟೀಮ್ ಇಂಡಿಯಾದ ವಿಶ್ವಕಪ್ ಸಿದ್ಧತೆಗೆ ಇದು ಹೊಡೆತ ನೀಡುವ ಸಾಧ್ಯತೆಯೂ ಇದೆ. ಅಲ್ಲದೆ ವಿಶ್ವಕಪ್ನಂಥಾ ಟೂರ್ನಿಗೂ ಮುನ್ನ ನಿರೀಕ್ಷಿತ ಮಟ್ಟದ ಮ್ಯಾಚ್ ಅವಧಿ ಕೂಡ ಈ ಆಟಗಾರರಿಗೆ ದೊರೆಯದಿರುವುದರಿಂದಾಗಿ ಈ ಆಟಗಾರರ ಫಾರ್ಮ್ ಹಾಗೂ ಆಟದ ಲಯದ ಬಗ್ಗೆಯೂ ಗೊಂದಲ ಉಳಿದುಕೊಳ್ಳಲಿದೆ.

ಹ್ಯಾಮ್ಸ್ಟ್ರಿಂಗ್ ಗಾಯಕ್ಕೆ ತುತ್ತಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಕೆಎಲ್ ರಾಹುಲ್ ಚೇತರಿಸಿಕೊಳ್ಳುತ್ತಿದ್ದರೂ ಏಷ್ಯಾ ಕಪ್ಗೆ ಅವರು ಲಭ್ಯವಾಗುವ ಸಾಧ್ಯತೆ ಕಷ್ಟ. ಇತ್ತ ಮತ್ತೊಂದೆಡೆ ಶ್ರೇಯಸ್ ಐಯ್ಯರ್ ಈ ವಿಶ್ವಕಪ್ ಟೂರ್ನಿಯ ವೇಳೆಗೂ ಸಂಪೂರ್ಣವಾಗಿ ಸಿದ್ಧವಾಗುವ ಸಾಧ್ಯತೆಯ ಬಗ್ಗೆ ಕಳವಳ ಉಂಟಾಗಿದೆ.
ಇನ್ನು ಬಿಸಿಸಿಐ ಈ ಇಬ್ಬರು ಆಟಗಾರರ ಚೇತರಿಕೆಯ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರೂ ಈ ಜೋಡಿಯ ಕಮ್ಬ್ಯಾಕ್ ದಿನಾಂಕವನ್ನು ಸ್ಪಷ್ಟಪಡಿಸಿಲ್ಲ. ಪಂದ್ಯವನ್ನಾಡಲು ಈ ಆಟಗಾರರು ನಿಧಾನವಾಗಿ ತಮ್ಮ ಕೆಲಸದ ಹೊರೆಯನ್ನು ಹೆಚ್ಚಿಸುತ್ತಿದ್ದಾರೆ ಎಂದು ಮಾಹಿತಿಯನ್ನು ಮಾತ್ರವೇ ನೀಡಿದೆ ಬಿಸಿಸಿಐ.
ಪಿಟಿಐಗೆ ಬಿಸಿಸಿಐನ ಅಧಿಕಾರಿಯೊಬ್ಬರು ನೀಡಿರುವ ಮಾಹಿತಿಯನ್ನು ಅದು ಉಲ್ಲೇಖಿಸಿ ವರದಿ ಮಾಡಿದ್ದು ಕೆಎಲ್ ರಾಹುಲ್ ಹಾಗೂ ಶ್ರೇಯಸ್ ಐಯ್ಯರ್ ಏಷ್ಯಾಕಪ್ ಟೂರ್ನಿಯಲ್ಲಿ ಆಡುವ ಸಾಧ್ಯತೆಯ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಾರೆ. "ಶ್ರೀಲಂಕಾದ ಆರ್ದ್ರತೆಯ ವಾತಾವರಂದಲ್ಲಿ 50 ಓವರ್ಗಳ ಪಂದ್ಯವನ್ನಾಡಲು ಬೇಕಾದ ಫಿಟ್ನೆಸನ್ನು ಕೆಎಲ್ ರಾಹುಲ್ ಹಾಗೂ ಶ್ರೇಯಸ್ ಐಯ್ಯರ್ ಹೊಂದುವುದು ಅಸಾಧ್ಯ. ಆದರೆ ವೈದ್ಯಕೀಯ ತಂಡ ರಾಹುಲ್ ಬಗ್ಗೆ ವಿಶ್ವಕಪ್ಗೂ ಮುನ್ನ ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧದ ಸರಣಿಯ ವೇಳೆಗೆ ಸಿದ್ಧವಾಗುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ" ಎಂದು ಮಾಹಿತಿ ನೀಡಿದ್ದಾರೆ.
"ಅಯ್ಯರ್ ವಿಚಾರದಲ್ಲಿ ಅವರು ಕೌಶಲ್ಯ ತರಬೇತಿಯನ್ನು ಈಗಾಗಲೇ ಪ್ರಾರಂಭಿಸಿದ್ದಾರೆ. ಆದರೆ ಭಾರತೀಯ ತಂಡದ ಮ್ಯಾನೇಜ್ಮೆಂಟ್ 100% ಫಿಟ್ ಆಗಿರುವ ಅಯ್ಯರ್ ಅವರನ್ನು ಅಂಗಳಕ್ಕೆ ಇಳಿಸಬೇಕೆಂದು ಬಯಸಿದರೆ ಅದು ಅವರ ಕೈತಪ್ಪಲಿದೆ. ಕಮ್ಬ್ಯಾಕ್ಗೆ ಏಕದಿನ ಕ್ರಿಕೆಟ್ಗಿಂತ ಟಿ20 ಸುಲಭದ ವೇದಿಕೆಯಾಗಿದೆ. ನಾವು ಕೂಡ ಪ್ರಾರ್ಥಿಸುತ್ತಿದ್ದೇವೆ" ಎಂದಿದ್ದಾರೆ ಬಿಸಿಸಿಐನ ಹೆರು ಹೇಳಲಿಚ್ಚಿಸದ ಅಧಿಕಾರಿ.
ಇನ್ನು ಕೆಎಲ್ ರಾಹುಲ್ ಹಾಗೂ ಶ್ರೇಯಸ್ ಐಯ್ಯರ್ ಏಷ್ಯಾಕಪ್ಗೆ ಅಲಭ್ಯವಾಗುವ ಸುದ್ದಿ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲು ಸ್ಪರ್ಧೆ ನಡೆಸುತ್ತಿರುವ ಮತ್ತಿಬ್ಬರು ಆಟಗಾರರಿಗೆ ಮತ್ತೊಂದು ಅವಕಾಶ ದೊರೆತಂತಾಗುತ್ತದೆ. ಸಂಜು ಸ್ಯಾಮ್ಸನ್ ಹಾಗೂ ಸೂರ್ಯಕುಮಾರ್ ಯಾದವ್ ಈ ಬಾರಿಯ ವಿಶ್ವಕಪ್ ತಂಡದಲ್ಲಿ ಸ್ಥಾನವನ್ನು ಗಿಟ್ಟಿಸಿಕೊಳ್ಳಲು ತೀವ್ರ ಪೈಪೋಟಿ ನಡೆಸುತ್ತಿದ್ದು ಏಕದಿನ ಮಾದರಿಯಲ್ಲಿ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಲು ಏಷ್ಯಾಕಪ್ ಟೂರ್ನಿ ಈ ಇಬ್ಬರಿಗೂ ಮತ್ತೊಂದು ಅಕಾಶವಾಗಲಿದೆ. ಇಲ್ಲಿ ಉತ್ತಮ ಪ್ರದರ್ಶನ ನೀಡಿದ ಆಟಗಾರ ಭಾರತ ತಂಡದಲ್ಲಿ ವಿಶ್ವಕಪ್ನಲ್ಲಿಯೂ ಆಡುವ ಅವಕಾಶ ಗಿಟ್ಟಿಸಿಕೊಳ್ಳಬಹುದು.