
ನವದೆಹಲಿ: ನವದೆಹಲಿಯ ಫಿರೋಜ್ ಶಾ ಕೋಟ್ಲಾ ಸ್ಟೇಡಿಯಂ (ಈಗಿನ ಅರುಣ್ ಜೇಟ್ಲಿ ಸ್ಟೇಡಿಯಂ)ನಲ್ಲಿ ವೀಕ್ಷಕರ ಸ್ಟ್ಯಾಂಡ್ಗೆ ಇಡಲಾಗಿರುವ ತನ್ನ ಹೆಸರನ್ನು ಕೂಡಲೇ ತೆಗೆಸುವಂತೆ, ಇಲ್ಲದಿದ್ದರೆ ತಾನು ಡೆಲ್ಲಿ ಆ್ಯಂಡ್ ಡಿಸ್ಟ್ರಿಕ್ಟ್ ಕ್ರಿಕೆಟ್ ಅಸೋಸಿಯೇಶನ್ (ಡಿಡಿಸಿಎ) ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ಭಾರತದ ಮಾಜಿ ಸ್ಪಿನ್ ದಂತಕತೆ ಬಿಶಾನ್ ಸಿಂಗ್ ಬೇಡಿ ಬೆದರಿಕೆಯೊಡ್ಡಿದ್ದಾರೆ.
ಫಿರೋಜ್ ಶಾ ಕೋಟ್ಲಾ ಸ್ಟೇಡಿಯಂನಲ್ಲಿ ಡಿಡಿಸಿಎ ಮಾಜಿ ಅಧ್ಯಕ್ಷ ಅರುಣ್ ಜೇಟ್ಲಿ ಅವರ ಪ್ರತಿಮೆ ಸ್ಥಾಪಿಸಲು ಡಿಡಿಸಿಎ ಮುಂದಾಗಿದೆ. ಇದಕ್ಕೆ ಬಿಶಾನ್ ಸಿಂಗ್ ಬೇಡಿ ವಿರೋಧ ವ್ಯಕ್ತಪಡಿಸಿದ್ದಾರೆ. ಕ್ರೀಡಾ ತಾಣಗಳಲ್ಲಿ ರಾಜಕಾರಣಿಗಳ ಪ್ರತಿಮೆ ಸ್ಥಾಪಿಸಲು ಮುಂದಾಗಿರುವ ಡಿಡಿಸಿಎ ನಡೆಯನ್ನು ಖಂಡಿಸಿರುವ ಬೇಡಿ, ವೀಕ್ಷಕರ ಸ್ಟ್ಯಾಂಡ್ನಲ್ಲಿ ತನ್ನ ಹೆಸರು ಶೀಘ್ರ ತೆಗೆಸಿಬಿಡಿ ಎಂದು ಒತ್ತಾಯಿಸಿದ್ದಾರೆ.
ಕ್ರಿಕೆಟ್ ತಾಣಗಳಲ್ಲಿ ರಾಜಕಾರಣಿಗಳನ್ನು ಮೇಲಕ್ಕೆತ್ತುತ್ತಿರುವ ಡಿಡಿಸಿಎ ವಿರುದ್ಧ ಬೇಡಿ ಪತ್ರ ಬರೆದಿದ್ದರು. ಜೇಟ್ಲಿ ಪ್ರತಿಮೆ ಸ್ಥಾಪಿಸುವುದಾದರೆ ಸ್ಟೇಡಿಯಂನಲ್ಲಿ ವೀಕ್ಷಕರ ಸ್ಟ್ಯಾಂಡ್ಗೆ ಇಡಲಾಗಿರುವ ತನ್ನ ಹೆಸರನ್ನು ತೆಗೆಸಿಬಿಡಿ ಎಂದು ಬೇಡಿ ಪತ್ರದ ಮೂಲಕ ಕೇಳಿಕೊಂಡಿದ್ದರು. ಆದರೆ ಇದಕ್ಕೆ ಡಿಡಿಸಿಎಯಿಂದ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ.
'ನಾನು ನಿಮಗೆ ಪತ್ರ ಬರೆದು ಕೆಲವೇ ದಿನಗಳಾಗಿವೆ... ನನ್ನ ಪತ್ರ ಸಾರ್ವಜನಿಕವಾಗಿ ಹೋದ ಕೆಲವೇ ನಿಮಿಷಗಳಲ್ಲಿ ನನಗೆ ಜಗತ್ತಿನಾದ್ಯಂತ ಕ್ರಿಕೆಟ್ ಭ್ರಾತೃತ್ವದ ಬೆಂಬಲ ಲಭಿಸಿದೆ. ಆದರೆ ನಿಮ್ಮಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ನನಗೆ ಬೇಸರವಿದೆ,' ಎಂದು ಡಿಡಿಸಿಎಗೆ ಬರೆದಿರುವ ಪತ್ರದಲ್ಲಿ ಬೇಡಿ ಹೇಳಿದ್ದಾರೆ.