ವಿಶಾಖಪಟ್ಟಣಂ, ನವೆಂಬರ್ 17: ಕ್ರಿಕೆಟ್ ಇತಿಹಾಸದಲ್ಲೇ ಇಂಥ ಘಟನೆ ನಡೆದಿದ್ದು ಬಹುಶಃ ಇದೇ ಮೊದಲ ಬಾರಿಗೆ ಎನ್ನಬಹುದು. ಇಂಗ್ಲೆಂಡ್ ಹಾಗೂ ಭಾರತ ನಡುವಿನ ಎರಡನೇ ಟೆಸ್ಟ್ ಪಂದ್ಯದ ಮೊದಲ ದಿನ(ನವೆಂಬರ್ 17) ದಂದು ಅವಧಿಗೆ ಮುನ್ನ ಚಹಾ ವಿರಾಮ ಘೋಷಿಸಲಾಯಿತು. ಇದಕ್ಕೆ ಕಾರಣವಾಗಿದ್ದು, ಒಂದು ನಾಯಿ ಎಂದರೆ ನಂಬಲಸಾಧ್ಯ!
ವಿಶಾಖಪಟ್ಟಣಂನ ಎಸಿಎ-ವಿಡಿಸಿಎ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದಿರುವ ಪಂದ್ಯದ ಮೊದಲ ದಿನದಂದು ನಾಯಿ ಕಾಟ ತಾಳಲಾರದೆ ಅಂಪೈರ್ ಗಳು ಅವಧಿಗೆ ಮುನ್ನ ಚಹಾ ವಿರಾಮಕ್ಕೆ ತೆರಳುವಂತೆ ಆಟಗಾರರಿಗೆ ಸೂಚಿಸಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಯಿತು.

ಭಾರತದ ಕ್ರಿಕೆಟ್ ಮೈದಾನಗಳಲ್ಲಿ ನಾಯಿಗಳು ಆಗಾಗ ಓಡಿ ಬರುವುದು ಹೊಸ ದೃಶ್ಯವೇನಲ್ಲ. ಆದರೆ, ನಾಯಿಯಿಂದಾಗಿ ಚಹಾವಿರಾಮಕ್ಕೆತೆರಳುವಂತಾಗಿದ್ದು ಇದೇ ಮೊದಲು.
56.2 ಓವರ್ ಗಳಲ್ಲಿ 210/2 ರನ್ ಸ್ಕೋರ್ ಮಾಡಿ ಭಾರತ ಉತ್ತಮ ಸ್ಥಿತಿಯಲ್ಲಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ವಿರಾಟ್ ಕೊಹ್ಲಿ 91 ಹಾಗೂ ಚೆತೇಶ್ವರ್ ಪೂಜಾರಾ 97ರನ್ ಗಳಿಸಿ ಕ್ರೀಸ್ ನಲ್ಲಿದ್ದರು. ಸ್ಟುವರ್ಟ್ ಬ್ರಾಡ್ ಬೌಲಿಂಗ್ ಮಾಡಲು ಬಿಡದಂತೆ ಮೈದಾನದ ತುಂಬೆಲ್ಲಾ ಓಡತೊಡಗಿದ ನಾಯಿಯನ್ನು ಹೊರಕ್ಕೆ ಕಳಿಸಲು ಇಂಗ್ಲೆಂಡ್ ಫೀಲ್ಡರ್ಸ್ ಪಟ್ಟ ಶ್ರಮ ವ್ಯರ್ಥವಾಯಿತು.
ಮೈದಾನದ ಸಿಬ್ಬಂದಿಗಳ ಕೈಯಿಂದಲೂ ನಾಯಿಯನ್ನು ಹೊರಕ್ಕೆ ಕಳಿಸಲು ಆಗಲಿಲ್ಲ. ಬೇಸತ್ತ ಒಬ್ಬ ಸಿಬ್ಬಂದಿ ತಮ್ಮ ಶೂ ಕಳಚಿ ನಾಯಿಗೆ ಎಸೆದಿದ್ದು ಆಯಿತು. ಎಲ್ಲಾ ಪ್ರಯತ್ನಗಳು ವಿಫಲವಾದ ಮೇಲೆ ಅಂಪೈರ್ ಗಳಾದ ಕುಮಾರ್ ಧರ್ಮಸೇನಾ(ಶ್ರೀಲಂಕಾ), ಆಸ್ಟ್ರೇಲಿಯಾದ ರಾಡ್ ಟಕ್ಕರ್ ಅವರು ಆಟಗಾರರನ್ನು ಚಹಾ ವಿರಾಮ ತೆಗೆದುಕೊಳ್ಳುವಂತೆ 2.10 PM ಗೆ ಸೂಚಿಸಿದರು.