
ಭಾರತದಲ್ಲಿ ಕ್ರಿಕೆಟ್ ಕೇವಲ ಆಟವಲ್ಲ ಎಂಬುದು ಕೆಲ ದಶಕಗಳ ಹಿಂದೆಯೇ ಸಾಬೀತಾಗಿದೆ. ಅದರಲ್ಲೂ ಐಪಿಎಲ್ ಬಂದ ಬಳಿಕ ಈ ಆಟದ ಬೆಳವಣಿಗೆ ಪ್ರೇಕ್ಷಕರ ಅಭಿಮಾನ ಮತ್ತೊಂದು ಹಂತಕ್ಕೆ ತಲುಪಿದೆ. ತಮ್ಮ ನೆಚ್ಚಿನ ತಂಡದ ಪರವಾಗಿ ಅಭಿಮಾನವನ್ನು ವ್ಯಕ್ತಪಡಿಸಲು ಅಭಿಮಾನಿಗಳು ಭಿನ್ನ ವಿಭಿನ್ನ ದಾರಿ ತುಳಿಯುತ್ತಾರೆ. ಇವುಗಳ ಮಧ್ಯೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳ ಬಳಗ ಎಲ್ಲರೂ ಮೆಚ್ಚುವಂತಾ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ
'ಬ್ಲೀಡ್ ನಮ್ಮ ಆರ್ಸಿಬಿ' ಎಂಬ ಅಭಿಮಾನಿಗಳ ಬಳಗ ಈ ಬಾರಿಯ ಐಪಿಎಲ್ಗೂ ಮುನ್ನ ವಿಶೇಷವಾಗಿ ಶುಭಕೋರುತ್ತಿದ್ದಾರೆ. ರಕ್ತದಾನ ಸೇರಿದಂತೆ ವಿಶೇಷ ಕಾರ್ಯಕ್ರಮಗಳನ್ನು ಈ ಅಭಿಮಾನಿಗಳ ಬಳಗದಿಂದ ಆಯೋಜನೆ ಮಾಡಲಾಗಿದೆ. ಸಾಕಷ್ಟು ಸೆಲೆಬ್ರಿಟಿಗಳು ಕೂಡ ಈ ಕಾರ್ಯಕ್ಕೆ ಸಾಥ್ ನೀಡುತ್ತಿದ್ದಾರೆ.
ಮುಂಬರುವ ಏಪ್ರಿಲ್ 4ರಂದು ಬೆಂಗಳೂರಿನ ಜೆಪಿ ನಗದರಲ್ಲಿರುವ ಪುಟ್ಟೇನಹಳ್ಳಿ ಸರ್ಕಾರಿ ಶಾಲೆಯಲ್ಲಿ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಬೆಳಿಗ್ಗೆ 10 ಗಂಡೆಗೆ ಆರಂಬವಾಗುವ ಈ ರಕ್ತದಾನ ಶಿಬಿರ ಮಧ್ಯಾಹ್ನ 3 ಗಂಟೆಯವರೆಗೂ ನಡೆಯಲಿದೆ. ಇದರಲ್ಲಿ 100-200 ಆರ್ಸಿಬಿ ಅಭಿಮಾನಿಗಳು ರಕ್ತದಾನವನ್ನು ಮಾಡಲಿದ್ದಾರೆ. ಈ ಮೂಲಕ ವಿರಾಟ್ ಕೊಹ್ಲಿ ನೇತೃತ್ವದ ಆರ್ಸಿಬಿ ತಂಡವನ್ನು ಹುರಿದುಂಬಿಸಲು ಅಭಿಮಾನಿಗಳು ಮುಂದಾಗಿದ್ದಾರೆ.

ಇನ್ನು ಐಪಿಎಲ್ ಕ್ರಿಕೆಟ್ನ ತಂಡಕ್ಕೆ ಬೆಂಬಲವನ್ನು ವ್ಯಕ್ತಪಡಿಸುವ ದೃಷ್ಟಿಕೋನದಿಂದ ಅಭಿಮಾನಿಗಳು ಮಾಡುತ್ತಿರುವ ಈ ಸಾಮಾಜಿಕ ಕಾರ್ಯಕ್ಕೆ ಸೆಲೆಬ್ರಿಟಿಗಳು ಕೂಡ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ. ಸಂಗೀತ ನಿರ್ದೇಶಕ ರಘು ದೀಕ್ಷಿತ್, ಆಲ್ಒಕೆ(ಅಲೋಕ್), ನಟಿಯರಾದ ಶೃತಿ ಪ್ರಕಾಶ್, ಅನಿತಾ ಭಟ್, ರೀಶ್ಮಾ ನಾಣಯ್ಯ ಮುಂತಾದವರು ಭಾಗಿಯಾಗಲಿದ್ದಾರೆ.
ಆರ್ಸಿಬಿ ತಂಡಕ್ಕೆ ಬೆಂಬಲವನ್ನು ನಿಡುವ ನಿಟ್ಟಿನಲ್ಲಿ ಭವಿಷ್ಯದಲ್ಲಿ ನಿರಂತರವಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಗುರಿಯನ್ನು ಈ 'ಬ್ಲೀಡ್ ನಮ್ಮ ಆರ್ಸಿಬಿ' ಅಭಿಮಾನಿಗಳ ಬಳಗ ಹೊಂದಿದೆ. ಇನ್ನು ಕೇವಲ ಎರಡು ವಾರಗಳ ಅಂತರದಲ್ಲಿ ಐಪಿಎಲ್ 14ನೇ ಆವೃತ್ತಿ ಆರಂಭವಾಗಲಿದೆ. ಆದರೆ ಈ ಐಪಿಎಲ್ ಆರಂಭಕ್ಕೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳ ಬಳಗ ಈಗ ಎಲ್ಲರೂ ಮೆಚ್ಚುವಂತಾ ಕಾರ್ಯಕ್ಕೆ ಮುಂದಾಗಿದೆ. ಏಪ್ರಿಲ್ 9 ರಿಂದ ಐಪಿಎಲ್ ಆರಂಭವಾಗಲಿದ್ದು ಮೊದಲ ಪಂದ್ಯದಲ್ಲಿ ಆರ್ಸಿಬಿ ಮುಂಬೈ ತಂಡವನ್ನು ಎದುರಿಸಲಿದೆ.