ಅಹಮದಾಬಾದ್, ಡಿಸೆಂಬರ್ 10: ಟೀಂ ಇಂಡಿಯಾದ ಪ್ರಮುಖ ವೇಗಿ ಜಸ್ ಪ್ರೀತ್ ಬೂಮ್ರಾ ಅವರ ಅಜ್ಜ ಸಂತೋಕ್ ಸಿಂಗ್ ಬೂಮ್ರಾ ದುರಂತ ಅಂತ್ಯ ಕಂಡಿದ್ದಾರೆ. ನಾಪತ್ತೆಯಾಗಿದ್ದ ಸಂತೋಕ್ ಅವರ ಮೃತದೇಹ ಸಬರಮತಿ ನದಿಯಲ್ಲಿ ಪತ್ತೆಯಾಗಿದೆ.
ಗಾಂಧಿ ಸೇತುವೆ ಹಾಗು ದಧೀಚಿ ಸೇತುವೆಯ ನಡುವೆ ಸಿಕ್ಕ ಸಂತೋಕ್ ಸಿಂಗ್ ಬೂಮ್ರಾ ಅವರ ಮೃತದೇಹವನ್ನು ಹೊರಕ್ಕೆ ತೆಗೆಯಲಾಗಿದೆ ಎಂದು ಅಹಮದಾಬಾದಿನ ಅಗ್ನಿಶಾಮಕ ದಳದ ಸಿಬ್ಬಂದಿ ಹೇಳಿದ್ದಾರೆ.
ಜಸ್ ಪ್ರೀತ್ ಬೂಮ್ರಾ ಅವರನ್ನು ಭೇಟಿ ಮಾಡಲು ಅಹಮದಾಬಾದಿಗೆ ಬಂದಿದ್ದ 84 ವರ್ಷದ ಸಂತೋಕ್ ಸಿಂಗ್ ಬೂಮ್ರಾ ಅವರು ಶುಕ್ರವಾರದಿಂದ ಅವರು ನಾಪತ್ತೆಯಾಗಿದ್ದರು.

ಡಿಸೆಂಬರ್ 1ರಂದು ವಸ್ತ್ರಾಪುರ್ ನ ತನ್ನ ಪುತ್ರಿಯ ಮನೆಯಲ್ಲಿದ್ದರು. ಡಿಸೆಂಬರ್ 5ರಂದು ಜಸ್ಪ್ರೀತ್ ರ ಹುಟ್ಟುಹಬ್ಬದ ದಿನ ಅವರನ್ನು ಭೇಟಿಯಾಗಲು ಸಿಂಗ್ ಬಯಸಿದ್ದರು. ಏಕದಿನ ಸರಣಿ ಆರಂಭಕ್ಕೂ ಮುನ್ನ ಜಸ್ ಸ್ಪ್ರೀತ್ ಹುಟ್ಟುಹಬ್ಬ ಆಚರಿಸಲಾಗಿತ್ತು.
ಡಿಸೆಂಬರ್ 8ರಂದು ಸಿಂಗ್ ತನ್ನ ಪುತ್ರ ಬಲ್ವೀಂದರ್ ಸಿಂಗ್ ಗೆ ಕರೆ ಮಾಡಿದ್ದು, ಅನಾರೋಗ್ಯ ಪೀಡಿತ ಪತ್ನಿಯನ್ನು ಭೇಟಿಯಾಗಲು ಹೊರಡುವುದಾಗಿ ಹೇಳಿದ್ದರು. ಆದರೆ, ಬಳಿಕ ಅವರು ಎಲ್ಲಿದ್ದಾರೆ ಎಂಬುದು ತಿಳಿದು ಬಂದಿರಲಿಲ್ಲ ಎಂದು ಅಹಮದಾಬಾದ್ ಮಿರರ್ ವರದಿ ಮಾಡಿದೆ. ಜಸ್ ಪ್ರೀತ್ ಬೂಮ್ರಾ ಅವರು ಸದ್ಯ ಧರ್ಮಶಾಲದಲ್ಲಿ ಭಾನುವಾರ(ಡಿಸೆಂಬರ್ 10) ದಂದು ಶ್ರೀಲಂಕಾ ವಿರುದ್ಧದ ಮೊದಲ ಏಕದಿನ ಪಂದ್ಯವಾಡುತ್ತಿದ್ದಾರೆ.