ಅಡಿಲೇಡ್ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಹಗಲು-ರಾತ್ರಿ ಟೆಸ್ಟ್ ಪಂದ್ಯವನ್ನು ಭಾರತ ಸೋತಿದೆ. ಕೇವಲ ಎರಡೂವರೆ ದಿನಗಳಲ್ಲಿ ಅಡಿಲೇಡ್ ಟೆಸ್ಟ್ ಪಂದ್ಯವನ್ನು 10 ವಿಕೆಟ್ಗಳಿಂದ ಆಸ್ಟ್ರೇಲಿಯಾ ಗೆದ್ದಿದೆ. ಈ ಸೋಲಿನ ಬಳಿಕ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಗರಂ ಆಗಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಟೀಮ್ ಇಂಡಿಯಾದ ಇಂತಹ ಸೋಲಿನಿಂದ ರೋಹಿತ್ ಶರ್ಮಾ ಬೇಸರಗೊಂಡಿದ್ದಾರೆ. ಇದಾದ ಬಳಿಕ ಅಡಿಲೇಡ್ ಟೆಸ್ಟ್ ಪಂದ್ಯದ ಸೋಲಿಗೆ ಕಾರಣಗಳನ್ನು ರೋಹಿತ್ ಶರ್ಮಾ ವಿವರಿಸಿದರು.
ಅಡಿಲೇಡ್ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಹಗಲು-ರಾತ್ರಿ ಟೆಸ್ಟ್ನಲ್ಲಿ ಸೋಲಿನ ಬಳಿಕ ರೋಹಿತ್ ಶರ್ಮಾ ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ. 'ಅಡಿಲೇಡ್ ಟೆಸ್ಟ್ ಪಂದ್ಯದ ಸೋಲು ನಮಗೆ ನಿರಾಶಾದಾಯಕವಾಗಿದೆ. ನಾವು ಚೆನ್ನಾಗಿ ಆಡಲಿಲ್ಲ. ಆಸ್ಟ್ರೇಲಿಯಾ ನಮಗಿಂತ ಉತ್ತಮವಾಗಿ ಆಡಿದೆ. ಸಿಕ್ಕ ಅವಕಾಶಗಳನ್ನು ಬಳಸಿಕೊಳ್ಳುವಲ್ಲಿ ವಿಫಲರಾಗಿದ್ದೇವೆ. ಪರ್ತ್ನಲ್ಲಿ ನಾವು ಮಾಡಿದ್ದು ವಿಶೇಷವಾಗಿತ್ತು. ನಾವು ಅದನ್ನು ಮತ್ತೊಮ್ಮೆ ಮಾಡಲು ಬಯಸಿದ್ದೇವೆ. ಆದರೆ ಪ್ರತಿ ಟೆಸ್ಟ್ ಪಂದ್ಯವು ತನ್ನದೇ ಆದ ಸವಾಲುಗಳನ್ನು ಹೊಂದಿದೆ. ಪಿಂಕ್ ಬಾಲ್ನೊಂದಿಗೆ ಆಡುವುದು ಸವಾಲಿನದಾಗಿದೆ ಎಂದು ನಮಗೆ ತಿಳಿದಿತ್ತು. ಇದೀಗ ನಾವು ಗಬ್ಬಾದಲ್ಲಿ ಮೂರನೇ ಟೆಸ್ಟ್ ಗೆಲ್ಲಲು ಎದುರು ನೋಡುತ್ತಿದ್ದೇವೆ ಎಂದು ಹೇಳಿದ್ದಾರೆ.

ನನಗೆ ಗಬ್ಬಾದಲ್ಲಿ ಕೆಲವು ಉತ್ತಮ ನೆನಪುಗಳಿವೆ. ಈ ಪಂದ್ಯದಲ್ಲಿ ನಾವು ಚೆನ್ನಾಗಿ ಆಡಬೇಕೆಂದುಕೊಂಡಿದ್ದೇವೆ.
ನಾವು ಅಲ್ಲಿಗೆ ಹೋಗಿ ಪರ್ತ್ ಟೆಸ್ಟ್ ಪಂದ್ಯದಲ್ಲಿ ಆಡಿದ ರೀತಿಯಲ್ಲಿ ಪ್ರದರ್ಶನ ನೀಡಲು ಯೋಜನೆ ರೂಪಿಸುತ್ತಿದ್ದೇವೆ. ನಾವು ಪ್ರತಿ ಟೆಸ್ಟ್ ಪಂದ್ಯದ ಸವಾಲುಗಳನ್ನು ಅರ್ಥಮಾಡಿಕೊಳ್ಳುತ್ತೇವೆ. ನಾವು ಚೆನ್ನಾಗಿ ಟೆಸ್ಟ್ ಪಂದ್ಯವನ್ನು ಪ್ರಾರಂಭಿಸಿ ಉತ್ತಮವಾಗಿ ಆಡಲು ಬಯಸುತ್ತೇವೆ ಎಂದು ರೋಹಿತ್ ಶರ್ಮಾ ಮಾತನಾಡಿದ್ದಾರೆ.
ಪರ್ತ್ ಟೆಸ್ಟ್ ಸೋಲಿನ ಬಳಿಕ ಆಸ್ಟ್ರೇಲಿಯಾ ಅದ್ಭುತ ಪುನರಾಗಮನ ಮಾಡಿದೆ. ಅಡಿಲೇಡ್ ಟೆಸ್ಟ್ ಪಂದ್ಯವನ್ನು ಗೆದ್ದ ಆಸೀಸ್ ಐದು ಪಂದ್ಯಗಳ ಟೆಸ್ಟ್ ಸರಣಿಯನ್ನು 1-1 ರಲ್ಲಿ ಸಮಗೊಳಿಸಿದೆ. ಪರ್ತ್ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ 295 ರನ್ಗಳಿಂದ ಆಸ್ಟ್ರೇಲಿಯಾವನ್ನು ಸೋಲಿಸಿತು. ಅಡಿಲೇಡ್ನಲ್ಲಿ ನಡೆದ ಭಾರತ ವಿರುದ್ಧದ ಎರಡನೇ ಟೆಸ್ಟ್ ಪಂದ್ಯವನ್ನು ಗೆಲ್ಲುವ ಮೂಲಕ ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮಿನ್ ಸಂತಸಗೊಂಡಿದ್ದಾರೆ. ಪಂದ್ಯದ ನಂತರ ಮಾತನಾಡಿರುವ ಪ್ಯಾಟ್ ಕಮ್ಮಿನ್ಸ್, ' ಇದು ನಮಗೆ ಉತ್ತಮ ವಾರವಾಗಿದೆ. ನಾವು ಈ ರೀತಿ ಆಡಲು ಬಯಸುತ್ತೇವೆ. ಐದು ವಿಕೆಟ್ ಕಬಳಿಸಿದ್ದು ಖುಷಿ ತಂದಿದೆ. ಒಂದಿಷ್ಟು ವಿಕೆಟ್ ಪಡೆದಿದ್ದು ಚೆನ್ನಾಗಿತ್ತು ಎಂದಿದ್ದಾರೆ.
ಅಡಿಲೇಡ್ ಟೆಸ್ಟ್ ಪಂದ್ಯದಲ್ಲಿ ಟ್ರಾವಿಸ್ ಹೆಡ್ 99.29 ಸ್ಟ್ರೈಕ್ ರೇಟ್ನಲ್ಲಿ ಬ್ಯಾಟ್ ಬೀಸಿ ಆಸ್ಟ್ರೇಲಿಯಾ 337 ರನ್ ಗಳಿಸಲು ನೆರವಾದರು. ಆಸ್ಟ್ರೇಲಿಯಾದ ಮೊದಲ ಇನ್ನಿಂಗ್ಸ್ನಲ್ಲಿ ಟ್ರಾವಿಸ್ ಹೆಡ್ ಅವರ ಅದ್ಭುತ ಬ್ಯಾಟಿಂಗ್ನಿಂದ 157 ರನ್ಗಳ ಮುನ್ನಡೆ ಸಾಧಿಸಿತ್ತು. ಟ್ರಾವಿಸ್ ಹೆಡ್ 140 ರನ್ ಬಾರಿಸಿ ಭಾರತವನ್ನು ಸೋಲಿನ ಸುಳಿಗೆ ತಳ್ಳಿದರು.