ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮಣಿಸಿದ ರಾಜಸ್ಥಾನ ರಾಯಲ್ಸ್ ಭರ್ಜರಿ ಆರಂಭವನ್ನು ಕಂಡಿದೆ. ಸಂಘಟಿತ ಆಟದ ಪ್ರದರ್ಶನ ನೀಡಿದ ರಾಯಲ್ಸ್ 2 ಅಂಕವನ್ನು ಕಲೆ ಹಾಕಿದ್ದು, ಅಂಕ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಕಾಯ್ದುಕೊಂಡಿದೆ. ಈ ಪಂದ್ಯವನ್ನು ರಾಜಸ್ಥಾನ ಸುಲಭವಾಗಿ ಗೆಲ್ಲಲು ಕಾರಣವಾದ ಅಂಶ ಯಾವುದು ಎಂಬ ಪ್ರಶ್ನೆ ಸಾಮಾನ್ಯವಾಗಿ ಎಲ್ಲರ ಮನಸ್ಸಿನಲ್ಲಿ ಉದ್ಭವಿಸುತ್ತದೆ. ಅದಕ್ಕೆ ಉತ್ತರ ಇಲ್ಲಿದೆ.
ಚೆನ್ನೈ ನೀಡಿದ್ದ 128 ರನ್ಗಳ ಗುರಿಯನ್ನು ರಾಜಸ್ಥಾನ ರಾಯಲ್ಸ್ ಕೇವಲ 12.1 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ 128 ರನ್ ಸೇರಿಸಿ ಜಯ ಸಾಧಿಸಿತು. ಈ ವೇಳೆ ಯುವ ಬ್ಯಾಟರ್ ವೈಭವ್ ಸೂರ್ಯವಂಶಿ ಬಿರುಸಿನ ಬ್ಯಾಟಿಂಗ್ ನಡೆಸಿದರು. ಇವರು ಕೇವಲ 15 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ಮಿಂಚಿದರು. ವೈಭವ್ 17 ಎಸೆತಗಳಲ್ಲಿ 52 ರನ್ ಬಾರಿಸಿ ಔಟ್ ಆದರು. ಇವರು ಸ್ಫೋಟಕ ಬ್ಯಾಟಿಂಗ್ ನಿಶ್ಚಿತವಾಗಿ ರಾಜಸ್ಥಾನ ರಾಯಲ್ಸ್ ತಂಡದ ಜಯದಲ್ಲಿ ಪ್ರಮುಖ ಹೈಲೈಟ್.

ರಾಜಸ್ಥಾನ ರಾಯಲ್ಸ್ ಸುಲಭವಾಗಿ ಗೆಲುವು ದಾಖಲಿಸುವಲ್ಲಿ ವೈಭವ್ ಸೂರ್ಯವಂಶಿ ಪಾತ್ರಕ್ಕಿಂತಲೂ ಇನ್ನೊಬ್ಬರ ಪಾತ್ರ ದೊಡ್ಡದಿದೆ. ಇವರು ಬಿಗುವಿನ ದಾಳಿ ನಡೆಸಿ ಎರಡು ವಿಕೆಟ್ ಪಡೆದರು. ಈಗ ಜೋಫ್ರಾ ಆರ್ಚರ್ ಪಂದ್ಯದ ಗತಿಯನ್ನೇ ಬದಲಿಸಿದರಾ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಒಂದು ಹಂತಕ್ಕೆ ಹೌದು ಎಂದು ಹೇಳಬಹುದು. ಇವರು ಸಹ ಎರಡು ವಿಕೆಟ್ ಪಡೆದು ಚೆನ್ನೈ ರನ್ ದಾಹಕ್ಕೆ ಕಡಿವಾಣ ಹಾಕಿದರು. ಆದರೆ ಇವರಿಗಿಂತಲೂ ಇನ್ನೊಬ್ಬ ಬೌಲರ್ ಪವರ್ ಪ್ಯಾಕ್ ಪ್ರದರ್ಶನ ನೀಡಿದರು.
ರಾಜಸ್ಥಾನ ರಾಯಲ್ಸ್ ಪರ ಎರಡು ವಿಕೆಟ್ ಬೌಲರ್ಗಳ ಪಟ್ಟಿಯಲ್ಲಿ ಜಡೇಜಾ ಅವರಿಗೂ ಸ್ಥಾನ. ಇವರು ಸಹ ಮಧ್ಯಮ ಕ್ರಮಾಂಕದಲ್ಲಿ ಸರ್ಫರಾಜ್ ಖಾನ್ ಹಾಗೂ ಶಿವಂ ದುಬೆ ಅವರ ವಿಕೆಟ್ ಪಡೆದರು. ಅಲ್ಲದೆ ರನ್ಗಳನ್ನು ಸಹ ಕಡಿಮೆ ನೀಡಿದರು. ಆದರೆ ಇವರಿಗಿಂತಲೂ ಇಂಪ್ಯಾಕ್ಟ್ ಮಾಡಿದ ಬೌಲರ್ ನಾಂಡ್ರೆ ಬರ್ಗರ್.
ದಕ್ಷಿಣ ಆಫ್ರಿಕಾದ 30 ವರ್ಷದ ಬೌಲರ್ ನಾಂಡ್ರೆ ಬರ್ಗರ್ ಬಿಗುವಿನ ದಾಳಿ ನಡೆಸಿದರು. ಇವರು ಪವರ್ ಪ್ಲೇನಲ್ಲಿ ಪವರ್ ಫುಲ್ ಪ್ರದರ್ಶನ ನೀಡಿದರು. ಸದ್ಯ ಭರ್ಜರಿ ಫಾರ್ಮ್ನಲ್ಲಿರುವ ಸಂಜು ಸ್ಯಾಮ್ಸನ್ ಅವರಿಗೆ ಇನಿಂಗ್ಸ್ ಎರಡನೇ ಓವರ್ನ ಕೊನೆಯ ಎಸೆತದಲ್ಲಿ ಖೆಡ್ಡಾ ತೋಡಿದ ಬರ್ಗರ್ ಅಬ್ಬರಿಸಿದರು. ಇವರು ನೆಲಕಚ್ಚಿನಿಂತಿದ್ದರೆ ಚೆನ್ನೈ ದೊಡ್ಡ ಮೊತ್ತದ ಕನಸು ನನಸಾಗುತ್ತಿತ್ತು. ಇನ್ನು ತಮ್ಮ ಎರಡನೇ ಓವರ್ನ ಮೊದಲ ಎಸೆತದಲ್ಲಿ ಯುವ ಬ್ಯಾಟರ್ ಆಯುಷ್ ಮಾತ್ರೆ ಅವರಿಗೂ ಬರ್ಗರ್ ಪೆವಿಲಿಯನ್ ಹಾದಿ ತೋರಿಸಿದರು. ಪವರ್ ಪ್ಲೇನಲ್ಲಿ ಚೆನ್ನೈ 4 ವಿಕೆಟ್ ಕಳೆದುಕೊಳ್ಳುವಲ್ಲಿ ಬರ್ಗರ್ ಪಾತ್ರ ಮುಖ್ಯ. ರಾಜಸ್ಥಾನ ಪಂದ್ಯವನ್ನು ಸುಲಭವಾಗಿ ಗೆಲ್ಲುವಲ್ಲಿ ಇವರು ದೊಡ್ಡ ಕಾಣಿಕೆ ನೀಡಿದರು.