ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಬಾರ್ಡರ್ ಗವಾಸ್ಕರ್ ಸರಣಿ ನಡೆಯುತ್ತಿದೆ. ನಾಲ್ಕನೇ ಟೆಸ್ಟ್ ಮೆಲ್ಬೋರ್ನ್ನಲ್ಲಿ ನಡೆಯಲಿದ್ದು ರೋಚಕತೆ ಹೆಚ್ಚಿಸಿದೆ. ಈಗಾಗಲೇ ಎರಡೂ ತಂಡಗಳು ಸರಣಿಯಲ್ಲಿ ತಲಾ ಒಂದೊಂದು ಪಂದ್ಯವನ್ನು ಗೆದ್ದಿದ್ದರಿಂದ, ಸರಣಿಯಲ್ಲಿ ಮುನ್ನಡೆ ಸಾಧಿಸುವುದು ಯಾರು ಎಂಬ ಪ್ರಶ್ನೆಗೆ ಉತ್ತರ ಸಿಗಲಿದೆ. ಟೀಮ್ ಇಂಡಿಯಾ ಬ್ರಿಸ್ಬೇನ್ನಲ್ಲಿ ಸೋಲಿನ ಅಂಚಿನಿಂದ ಪಂದ್ಯ ಡ್ರಾ ಸಾಧಿಸಿದ್ದು ಆತ್ಮವಿಶ್ವಾಸದಲ್ಲಿದೆ. ಇದೇ ವೇಳೆ ನಾಲ್ಕನೇ ಟೆಸ್ಟ್ ಗೆಲುವಿಗೆ ಬೇಕಿರುವ ಸಿದ್ಧತೆಗಳನ್ನು ಟೀಮ್ ಇಂಡಿಯಾ ಮಾಡಿಕೊಡಿದೆ.
ಮೆಲ್ಬೋರ್ನ್ ಟೀಮ್ ಇಂಡಿಯಾದ ಪಾಲಿಗೆ ಲಕ್ಕಿ ಗ್ರೌಂಡ್ ಈ ಅಂಗಳದಲ್ಲಿ ಟೀಮ್ ಇಂಡಿಯಾ ಕಳೆದ ಹತ್ತು ವರ್ಷದಿಂದ ಒಮ್ಮೆಯೂ ಸೋಲು ಕಂಡಿಲ್ಲ. ಹೀಗಾಗಿ ಟೀಮ್ ಇಂಡಿಯಾ ಮತ್ತೊಂದು ಗೆಲುವಿನ ಕನಸು ಕಾಣುತ್ತಿದೆ. ಟೀಮ್ ಇಂಡಿಯಾ ಬಲಿಷ್ಠ ತಂಡವನ್ನು ಕಟ್ಟಿ ಎದುರಾಳಿಗಳನ್ನು ಕಾಡುವ ಪ್ಲ್ಯಾನ್ ಮಾಡಿಕೊಂಡಿದೆ. ಹಾಗಿದ್ದರೆ, ಮಹತ್ವದ ಟೆಸ್ಟ್ ಪಂದ್ಯಕ್ಕಾಗಿ ಭಾರತದ ಪ್ಲೇಯಿಂಗ್ ಇಲೆವೆನ್ನಲ್ಲಿ ಏನೆಲ್ಲಾ ಬದಲಾವಣೆಗು ಆಗುತ್ತವೆ ಎಂಬ ಬಗ್ಗೆ ವರದಿ ಇಲ್ಲಿದೆ.

ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ತಮ್ಮ ಓಪನಿಂಗ್ ಸ್ಲಾಟ್ನ್ನು ಕನ್ನಡಿಗ ಕೆಎಲ್ ರಾಹುಲ್ ಅವರಿಗೆ ಬಿಟ್ಟು ಕೊಟ್ಟಿದ್ದಾರೆ. ಇವರು ಆರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ್ದಾರೆ. ಆದರೆ ರೋಹಿತ್ ಶರ್ಮಾ ಮಿಡ್ಲ್ ಆರ್ಡರ್ನಲ್ಲೂ ರನ್ ಕಲೆ ಹಾಕುವಲ್ಲಿ ವಿಫಲರಾಗುತ್ತಿರುವುದು ತಂಡದ ಚಿಂತೆಯನ್ನು ದ್ವಿಗುಣ ಗೊಳಿಸಿದೆ. ಹೀಗಾಗಿ ರೋಹಿತ್ ಶರ್ಮಾ ಮತ್ತೆ ಓಪನರ್ ಆಗಿ ಕಾಣಿಸಿಕೊಳ್ಳುತ್ತಾರಾ ಎಂಬ ಪ್ರಶ್ನೆಗಳು ಉದ್ಭವಿಸುತ್ತವೆ. ಆದರೆ ಅವರು ಯಾರ ಸ್ಥಾನದಲ್ಲಿ ಓಪನಿಂಗ್ ಮಾಡಬೇಕು ಎಂಬುದೇ ಕುತೂಹಲ ಮೂಡಿಸಿದೆ.
ಮೆಲ್ಬೋರ್ನ್ನ ಐತಿಹಾಸಿಕ ಪಿಚ್ ಸ್ಪಿನ್ ಬೌಲರ್ಗಳಿಗೆ ನೆರವು ನೀಡಲಿದ್ದು ಟೀಮ್ ಇಂಡಿಯಾ, ನಾಲ್ಕನೇ ಟೆಸ್ಟ್ನಲ್ಲಿ ಇಬ್ಬರು ಸ್ಪಿನ್ ಬೌಲರ್ಗಳೊಂದಿಗೆ ಕಣಕ್ಕೆ ಇಳಿಯುವ ಸಾಧ್ಯತೆ ಇದೆ. ರವಿಚಂದ್ರನ್ ಅಶ್ವಿನ್ ನಿವೃತ್ತಿಯ ಬಳಿಕ ರವೀಂದ್ರ ಜಡೇಜಾ ಹಾಗೂ ವಾಷಿಂಗ್ಟನ್ ಸುಂದರ್ ಇಬ್ಬರು ತಂಡದಲ್ಲಿ ಉಳಿದ ಸ್ಪಿನ್ ಬೌಲರ್ಗಳು. ಹೀಗಾಗಿ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಇಬ್ಬರಿಗೂ ಅವಕಾಶ ಸಿಗುವ ಸಾಧ್ಯತೆ ದಟ್ಟವಾಗಿದೆ.

ಸರಣಿಯಲ್ಲಿ ಸ್ಥಿರ ಪ್ರದರ್ಶನ ನೀಡುವಲ್ಲಿ ಹಿಂದೆ ಬಿದ್ದಿರುವ ಟೀಮ್ ಇಂಡಿಯಾದ ಫಾಸ್ಟ್ ಬೌಲರ್ ಮೊಹಮ್ಮದ್ ಸಿರಾಜ್ ಅವರ ಬದಲಿಗೆ ಟೀಮ್ ಇಂಡಿಯಾ ಮತ್ತೊಬ್ಬ ಸ್ಪಿನ್ ಬೌಲರ್ನ್ನು ತಂಡಕ್ಕೆ ಸೇರಿಸಿಕೊಳ್ಳಬಹುದು. ಜಸ್ಪ್ರಿತ್ ಬುಮ್ರಾ ಹಾಗೂ ಆಕಾಶ್ ದೀಪ್ ವೇಗದ ಬೌಲರ್ಗಳಾಗಿ ಕಾಣಿಸಿಕೊಳ್ಳಲಿದ್ದಾರೆ.
ನಾಲ್ಕನೇ ಟೆಸ್ಟ್ಗೆ ಭಾರತದ ಸಂಭಾವ್ಯ ತಂಡ: ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ಶುಭಮನ್ ಗಿಲ್, ವಿರಾಟ್ ಕೊಹ್ಲಿ, ರಿಷಬ್ ಪಂತ್, ರೋಹಿತ್ ಶರ್ಮಾ, ನಿತೀಶ್ ಕುಮಾರ್ ರೆಡ್ಡಿ, ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್, ಜಸ್ಪ್ರೀತ್ ಬುಮ್ರಾ, ಆಕಾಶ್ ದೀಪ್.