
ಟೀಮ್ ಇಂಡಿಯಾದ ಅನುಭವಿ ವೇಗಿ ಜಸ್ಪ್ರೀತ್ ಬೂಮ್ರಾ ಬೆನ್ನು ನೋವಿನ ಕಾರಣದಿಂದಾಗಿ ಸುದೀರ್ಘ ಕಾಲದಿಂದ ಭಾರತ ತಂಡದಿಂದ ಹೊರಗುಳಿದಿದ್ದಾರೆ. ಸದ್ಯ ನ್ಯೂಜಿಲೆಂಡ್ಗೆ ತೆರಳಿರುವ ಬೂಮ್ರಾ ಶಸ್ತ್ರಚಿಕಿತ್ಸೆಗೂ ಒಳಗಾಗಿದ್ದಾರೆ. ಹೀಗಾಗಿ ಮುಂಬರುವ ಐಪಿಎಲ್, ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಹಾಗೂ ಏಷ್ಯಾ ಕಪ್ನಂಥಾ ಪ್ರಮುಖ ಟೂರ್ನಿಯಿಂದ ಅವರು ಹೊರಗುಳಿಯಲಿದ್ದಾರೆ. ಈ ವರ್ಷಾಂತ್ಯದಲ್ಲಿ ನಡೆಯಲಿರುವ ವಿಶ್ವ ಕಪ್ ಟೂರ್ನಿಯಲ್ಲಿಯೂ ಬೂಮ್ರಾ ಕಣಕ್ಕಿಳಿಯುವ ಬಗ್ಗೆ ಸದ್ಯಕ್ಕೆ ಸ್ಪಷ್ಟತೆಯಿಲ್ಲ.
ಈ ಸಂದರ್ಭದಲ್ಲಿ ಆಸ್ಟ್ರೇಲಿಯಾದ ದಿಗ್ಗಜ ಆಟಗಾರ ಬ್ರೆಟ್ ಲೀ ಬೆನ್ನು ನೋವಿನ ಸಮಸ್ಯೆಯಿಂದ ಬೂಮ್ರಾ ಹೇಗೆ ಹೊರ ಬರಬಹುದು ಎಂಬುದಕ್ಕೆ ಸಲಹೆಯನ್ನು ನೀಡಿದ್ದಾರೆ. ಪದೇ ಪದೇ ಬೆನ್ನು ನೋವಿಗೆ ಒಳಗಾಗುವುದನ್ನು ತಪ್ಪಿಸಲು ಜಸ್ಪ್ರೀತ್ ಬೂಮ್ರಾ ತಮ್ಮ ಬೌಲಿಂಗ್ ಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳಲೇ ಬೇಕು ಎಂದು ಹೇಳಿದ್ದಾರೆ ಬ್ರೆಟ್ ಲೀ.
"ಬೂಮ್ರಾ ಅದ್ಭುತವಾದ ಬೌಲಿಂಗ್ ದಾಖಲೆ ಹೊಂದಿದ್ದಾರೆ. ಆದರೆ ದುರದೃಷ್ಟವಶಾತ್ ಇತ್ತೀಚೆಗೆ ಕೆಲ ಸಮಯಗಳಿಂದ ಅವರು ಬೆನ್ನು ನೋವಿಗೆ ತುತ್ತಾಗಿದ್ದಾರೆ" ಎಂದಿದ್ದಾರೆ ಬ್ರೆಟ್ ಲೀ. ಆಸ್ಟ್ರೇಲಿಯಾದ ದಿಗ್ಗಜ ಆಟಗಾರ ಬ್ರೆಟ್ ಲೀ ಪ್ರಸ್ತುತ ಕತಾರ್ನ ದೋಹಾದಲ್ಲಿದ್ದು ಲೆಜೆಂಡ್ಸ್ ಲೀಗ್ ಕ್ರಿಕೆಟ್ನಲ್ಲಿ ಭಾಗಿಯಾಗಿದ್ದಾರೆ.
"ಬೂಮ್ರಾ ಅವರ ರನ್ನಪ್ ಬಹಳ ಕಡಿಮೆ ಇರುವ ಕಾರಣ ತಮ್ಮ ಬೌಲಿಂಗ್ ಶೈಲಿಯಲ್ಲಿ ಅವರು ಆ ವೇಗವನ್ನು ಪಡೆಯಬೇಕಿದೆ. ಈಗ ಗಾಯಗೊಂಡಿರುವ ಕಾರಣದಿಂದಾಗಿ ಅವರ ರನ್ನಪ್ ಹೆಚ್ಚಿಸಿಕೊಳ್ಳಬೇಕಿದ್ದು ತನ್ನ ಬೆನ್ನಿನ ಮೇಲೆ ಬೀಳುವ ಒತ್ತಡವನ್ನು ಕಡಿಮೆಗೊಳಿಸಬೇಕಿದೆ" ಎಂದಿದ್ದಾರೆ ಬ್ರೆಟ್ ಲೀ.
ಇನ್ನು ಟೀಮ್ ಇಂಡಿಯಾದ ಮಾಜಿ ಆಟಗಾರ 1983ರ ವಿಶ್ವಕಪ್ ವಿಜೇತ ತಂಡದ ಸದಸ್ಯ ಮದನ್ ಲಾಲ್ ಕೂಡ ಬೂಮ್ರಾ ಗಾಯದ ಬಗ್ಗೆ ಪ್ರತಿಕ್ರಿಯೆ ನೀಡಿದ್ದರು. ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಫೈನಲ್ನಲ್ಲಿ ಟೀಮ್ ಇಂಡಿಯಾ ಜಸ್ಪ್ರೀತ್ ಬೂಮ್ರಾ ಅವರನ್ನು ಬಿಟ್ಟು ಯೋಚಿಸಬೇಕಿದ್ದು ಉಮೇಶ್ ಯಾದವ್ ಅವರನ್ನು ಟೆಸ್ಟ್ ವಿಶ್ವ ಚಾಂಪಿಯನ್ಶಿಪ್ನ ಫೈನಲ್ನಲ್ಲಿ ಆಡಿಸಬೇಕು ಎಂದಿದ್ದಾರೆ.