
ನವದೆಹಲಿ, ಜನವರಿ 1: ಆಸ್ಟ್ರೇಲಿಯಾ ನೆಲದಲ್ಲಿ ಟೆಸ್ಟ್ ಸರಣಿ ಗೆದ್ದುಕೊಂಡು ಸುಮಾರು 76 ವರ್ಷಗಳ ಹಿಂದಿನ ದಾಖಲೆಯನ್ನು ಮರುಸೃಷ್ಠಿಸಲು ವಿರಾಟ್ ಕೊಹ್ಲಿ ಬಳಗ ಸಜ್ಜಾಗಿದೆ. ಈ ನಡುವೆ ತಂಡದ ಸ್ಟಾರ್ ಬೌಲರ್ ಜಸ್ಪ್ರೀತ್ ಬೂಮ್ರಾ ಬಗ್ಗೆ ಕ್ರಿಕೆಟ್ ದಿಗ್ಗಜ ಕಪಿಲ್ ದೇವ್ ಅವರು ಹೇಳಿಕೆಯೊಂದನ್ನು ನೀಡಿದ್ದಾರೆ.
ಟೀಮ್ ಇಂಡಿಯಾದ ಬಲವಾಗಿರುವ ಮಧ್ಯಮ ವೇಗಿ ಬೂಮ್ರಾ ಅವರ ಬಗ್ಗೆ ಮಾಜಿ ಆಟಗಾರ ಕಪಿಲ್ ದೇವ್ ಮಂಗಳವಾರ (ಜನವರಿ 1) ಮಾತನಾಡಿ, 'ಜಸ್ಪ್ರೀತ್ ಬೂಮ್ರಾ ಬಗ್ಗೆ ನಾನು ತಪ್ಪು ತಿಳಿದಿದ್ದೆ. ಅದನ್ನು ಅವರು ತನ್ನ ಯಶಸ್ಸಿನ ಮೂಲಕ ನನಗೆ ಅರಿವು ಮಾಡಿ ಕೊಟ್ಟಿದ್ದಾರೆ' ಎಂದಿದ್ದಾರೆ.
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಸರಣಿಯಲ್ಲಿ ಭಾರತ ಈಗ 2-1ರ ಮುನ್ನಡೆಯಲ್ಲಿದೆ. 3ನೇ ಟೆಸ್ಟ್ ನಲ್ಲಿ ಭಾರತ ಗೆಲ್ಲುವಲ್ಲಿ ಬೂಮ್ರಾ ಮತ್ತು ಚೇತೇಶ್ವರ ಪೂಜಾರ ಅವರ ಕೊಡುಗೆ ಪ್ರಮುಖವಾಗಿತ್ತು. ಜಸ್ಪ್ರೀತ್ ಈ ಪಂದ್ಯದಲ್ಲಿ 6+3 ವಿಕೆಟ್ ಪಡೆದಿದ್ದರು.
'ಬೂಮ್ರಾ ಅವರ ಬೌಲಿಂಗ್ ಶೈಲಿಯನ್ನು ಮೊದಲ ಬಾರಿಗೆ ನೋಡಿದಾಗ ಇವರು ಕ್ರಿಕೆಟ್ನಲ್ಲಿ ಹೆಚ್ಚು ಕಾಲ ಉಳಿಯುತ್ತಾರೋ ಇಲ್ಲವೋ ಎಂದು ಭಾವಿಸಿದ್ದೆ. ಆದರೆ ಬೂಮ್ರಾ ನನ್ನ ಅನಿಸಿಕೆಯನ್ನು ಸುಳ್ಳಾಗಿದ್ದಾರೆ. ಸಾಧನೆ ಮೂಲಕ ನಾನು ಅಂದುಕೊಂಡಿದ್ದು ತಪ್ಪ ಎಂಬುದನ್ನು ನನಗೆ ಅರಿವಾಗಿಸಿದ್ದಾರೆ' ಎಂದು ಕಪಿಲ್ ಹೇಳಿದ್ದಾರೆ.