ಲಂಡನ್, ಜೂನ್ 12: ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಯವರ ಸಲಹೆಗಳನ್ನು ನಾಯಕ ವಿರಾಟ್ ಕೊಹ್ಲಿ ಶ್ಲಾಘಿಸಿದ್ದಾರೆ.
ಭಾನುವಾರ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಚಾಂಪಿಯನ್ಸ್ ಟ್ರೋಫಿ ಪಂದ್ಯದಲ್ಲಿ ಗೆಲುವು ಸಾಧಿಸಿದ ನಂತರ, ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೊಹ್ಲಿ, ಧೋನಿಯವರ ಅನನ್ಯ ಬೆಂಬಲವನ್ನು ಮನಸಾರೆ ನೆನೆದರು.

ಅನುಭವಿ ಆಟಗಾರರಾಗಿರುವ ಧೋನಿಯವರ ಸಲಹೆಗಳು ಪಂದ್ಯದಲ್ಲಿ ಭಾರತದ ಪ್ರದರ್ಶನಕ್ಕೆ ಇಂಬು ನೀಡುತ್ತಿವೆ. ಅವರ ಕೆಲವಾರು ಗೇಮ್ ಪ್ಲಾನ್ ಗಳು ಟೀಂ ಇಂಡಿಯಾಕ್ಕೆ ಫಲಕಾರಿಯಾಗುತ್ತಿವೆ ಎಂದು ಅವರು ಹೇಳಿದ್ದಾರೆ.
ತಮ್ಮ ಮಾತಿಗೆ ಪೂರಕವಾಗಿ ಕೆಲವಾರು ಉದಾಹರಣೆಗಳನ್ನೂ ಅವರು ನೀಡಿದರು. ''ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಧೋನಿಯವರ ಬಳಿ ಹೋಗಿ ನಾನು (ಕೊಹ್ಲಿ) ಬೌಲ್ ಮಾಡಲೇ ಎಂದು ಕೇಳಿದ್ದೆ. ಹೌದು. ಅಗತ್ಯವಾಗಿ ಮಾಡು. ಬೌಲರ್ ಗಳೂ ನಿರಂತರವಾಗಿ ಬೌಲ್ ಮಾಡಿ ಒತ್ತಡಕ್ಕೊಳಗಾಗಿದ್ದಾರೆ. ನೀವು (ಕೊಹ್ಲಿ) ಬೌಲ್ ಮಾಡಿದರೆ, ಬೌಲರ್ ಗಳಿಗೆ ಕೊಂಚ ವಿಶ್ರಾಂತಿ ಸಿಗುತ್ತದೆ ಎಂದಿದ್ದರು. ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದ ವೇಳೆಯೂ ಅವರು ಫೀಲ್ಡಿಂಗ್ ಗೆ ಸಂಬಂಧಿಸಿದಂತೆ ಅನೇಕ ಸಲಹೆ ನೀಡಿದರು'' ಎಂದು ಕೊಹ್ಲಿ ತಿಳಿಸಿದರು.
ಅನುಭವಿ ಆಟಗಾರರ ಇಂಥ ಕೆಲವಾರು ಸಲಹೆಗಳು ಅಮೂಲ್ಯ ಎಂದು ಕೊಹ್ಲಿ ತಿಳಿಸಿದ್ದಾರೆ.