ಕಾನ್ಪುರದಲ್ಲಿ ಟೀಮ್ ಇಂಡಿಯಾ, ಬಾಂಗ್ಲಾದೇಶ ತಂಡವನ್ನು ಏಳು ವಿಕೆಟ್ಗಳಿಂದ ಮಣಿಸಿ, ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಕ್ಲೀನ್ ಸ್ವೀಪ್ ಸಾಧನೆ ಮಾಡಿದೆ. ಈ ಸರಣಿಯ ಬಳಿಕ ಟೀಮ್ ಇಂಡಿಯಾ, ಬಾಂಗ್ಲಾ ವಿರುದ್ಧ ಟಿ20 ಸರಣಿಗಳು ನಡೆಯಬೇಕಿವೆ. ಈ ಸರಣಿಯಲ್ಲಿ ಟೀಮ್ ಇಂಡಿಯಾ ಪರ ಅಬ್ಬರಿಸುವ ಕನಸನ್ನು ಐಪಿಎಲ್ನಲ್ಲಿ ಆರ್ಭಟಿಸಿರುವ ಆಟಗಾರರು ಕಾಣುತ್ತಿದ್ದಾರೆ.
ಸೂರ್ಯಕುಮಾರ್ ಯಾದವ್ ಮುಂದಾಳತ್ವದ ತಂಡದಲ್ಲಿ ಹಲವು ಹೊಸ ಮುಖಗಳಿಗೆ ಅವಕಾಶ ನೀಡಲಾಗಿದೆ. ಐಪಿಎಲ್ನಲ್ಲಿ ಮಿಂಚು ಹರಿಸಿರುವ ಯುವ ಆಟಗಾರರು ಅಂತಾರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸಲು ಇದು ಸದಾವಕಾಶ. ಅಕ್ಟೋಬರ್ 6 ರಿಂದ ಈ ಟಿ20 ಸರಣಿ ನಡೆಯಲಿದ್ದು, ಇದಕ್ಕಾಗಿ 15 ಸದಸ್ಯರ ಭಾರತ ತಂಡವನ್ನು ಈಗಾಗಗಲೇ ಪ್ರಕಟಿಸಲಾಗಿದೆ. ಈ ಸರಣಿಯಿಂದ ಅಂತಾರಾಷ್ಟ್ರೀಯ ಕ್ರಿಕೆಟ್ ಜರ್ನಿ ಆರಂಭಿಸುವ ಕನಸಿನಲ್ಲಿರುವ ಟೀಮ್ ಇಂಡಿಯಾದ ಯುವ ಆಟಗಾರರ ಪಟ್ಟಿ ಇಲ್ಲಿದೆ.
ಅಮೆರಿಕ ಹಾಗೂ ವೆಸ್ಟ್ ಇಂಡೀಸ್ನಲ್ಲಿ ನಡೆದಿದ್ದ ಟಿ20 ವಿಶ್ವಕಪ್ ಬಳಿಕ ಟೀಮ್ ಇಂಡಿಯಾದ ಅನುಭವಿ ಆಟಗಾರರು ಟಿ20 ವಿಶ್ವಕಪ್ಗೆ ವಿದಾಯ ಹೇಳಿದ್ದಾರೆ. ಟೀಮ್ ಇಂಡಿಯಾದ ಚೇಸಿಂಗ್ ಸ್ಟಾರ್ ಖ್ಯಾತಿಯ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಆಲ್ರೌಂಡರ್ ರವೀಂದ್ರ ಜಡೇಜಾ ಚುಟುಕು ಫಾರ್ಮೆಟ್ಗೆ ವಿದಾಯ ತಿಳಿಸಿದ್ದಾರೆ. ಇವರ ಸ್ಥಾನವನ್ನು ತುಂಬಲು ಯುವ ಆಟಗಾರರು ಸಿದ್ಧರಾಗಿದ್ದಾರೆ.

ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಕಳೆದ ಬಾರಿ ಐಪಿಎಲ್ ಚಾಂಪಿಯನ್ ಪಟ್ಟವನ್ನು ಅಲಂಕರಿಸುವಲ್ಲಿ ಕೊಡುಗೆ ನೀಡಿದ ಆಟಗಾರ ಹರ್ಷಿತ್ ರಾಣಾ. ಇವರು ತುಂಬ ದಿನಗಳಿಂದ ಬ್ಲ್ಯೂ ಜೆರ್ಸಿ ತೊಡುವ ಕನಸು ಕಾಣುತ್ತಿದ್ದರು. ಅವರ ಆಸೆ ಈಗ ಫಲಿಸಿದೆ. ಐಪಿಎಲ್ನಲ್ಲಿ ನೀಡಿದ ಧಮಾಕೆದಾರ್ ಪ್ರದರ್ಶನದ ಫಲವಾಗಿ ಬಾಂಗ್ಲಾ ವಿರುದ್ಧದ ಟಿ20 ಸರಣಿಗೆ ಇವರನ್ನು ಆಯ್ಕೆ ಮಾಡಲಾಗಿದೆ. ಐಪಿಎಲ್ 2024 ರಲ್ಲಿ ಹರ್ಷಿತ್ ರಾಣಾ 9.08ರ ಎಕಾನಮಿಯಲ್ಲಿ 13 ಪಂದ್ಯಗಳಲ್ಲಿ 19 ವಿಕೆಟ್ ಪಡೆದು ಅಬ್ಬರಿಸಿದ್ದರು. ಇವರು ಪದಾರ್ಪಣೆ ಮಾಡುವ ಕನಸು ಹೊಂದಿದ್ದಾರೆ.

17ನೇ ಆವೃತ್ತಿಯ ಐಪಿಎಲ್ನಲ್ಲಿ ಎಲ್ಲರ ಚಿತ್ತ ಯುವ ಆಟಗಾರರ ಪಟ್ಟಿಯಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡದ ನಿತೀಶ್ ಕುಮಾರ್ ರೆಡ್ಡಿಗೂ ಸ್ಥಾನ. ಇವರು ಐಪಿಎಲ್ನ 13 ಪಂದ್ಯಗಳಲ್ಲಿ 142.92 ಸ್ಟ್ರೈಕ್ ರೇಟ್ನಲ್ಲಿ 303 ರನ್ ಗಳಿಸಿದರು. ಅಲ್ಲದೆ 3 ವಿಕೆಟ್ಗಳನ್ನು ಪಡೆದಿದ್ದರು. ಇವರು ಭಾರತ ತಂಡದಲ್ಲಿ ಸದ್ಯ ಖಾಲಿ ಇರುವ ಆಲ್ರೌಂಡರ್ ಕೋಟಾ ತುಂಬಲು ರೆಡಿಯಾಗಿದ್ದಾರೆ.

ಕಳೆದ ಬಾರಿ ಐಪಿಎಲ್ನಲ್ಲಿ ತನ್ನ ವೇಗದ ಬೌಲಿಂಗ್ ಮೂಲಕವೇ ಗಮನ ಸೆಳೆದ ವೇಗಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಮಯಾಂಕ್ ಯಾದವ್. ಇವರು ಸಹ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಭರ್ಜರಿಯಾಗಿ ಪ್ರವೇಶಿಸುವ ಕನಸು ಕಾಣುತ್ತಿದ್ದಾರೆ. ಗಾಯದ ಸಮಸ್ಯೆಯಿಂದ ಕಳೆದ ಆವೃತ್ತಿಯ ಐಪಿಎಲ್ ಪೂರ್ಣವಾಗಿ ಆಡದ ಮಯಾಂಕ್, ಬಾಂಗ್ಲಾ ಬ್ಯಾಟರ್ಗಳನ್ನು ಕಾಡಲು ಪ್ಲ್ಯಾನ್ ಮಾಡಿಕೊಂಡಿದ್ದಾರೆ.