ಬೆಂಗಳೂರು, ಡಿ. 15: ವಿಜಯ್ ಹಜಾರೆ ಟ್ರೋಫಿಯಲ್ಲಿ ಸತತ ಎರಡು ಗೆಲುವು ದಾಖಲಿಸಿದ್ದ ಕರ್ನಾಟಕ ತಂಡ, ಮಂಗಳವಾರ ಎಂಎಸ್ ಧೋನಿ ಟೀಂ ಮುಂದೆ ಮಂಡಿಯೂರಿದೆ. ಧೋನಿ ಮತ್ತೊಮ್ಮೆ ಬ್ಯಾಟಿಂಗ್ ವೈಫಲ್ಯ ಕಂಡರೂ ಉತ್ತಮ 'ನಾಯಕತ್ವ'ದ ಮೂಲಕ ಕರ್ನಾಟಕದ ಬ್ಯಾಟ್ಸ್ ಮನ್ ಗಳಿಗೆ ಕಡಿವಾಣ ಹಾಕಿ ಗೆಲುವು ಸಾಧಿಸಿದರು.
ಜಾರ್ಖಂಡ್ ಗೆ ವರುಣ್ ಅರೋನ್ ನಾಯಕರಾಗಿದ್ದರೂ ಧೋನಿ ಪ್ರಭಾವದಿಂದ ವಿಜಯಲಕ್ಷ್ಮಿ ಒಲಿಯಿತು. ಜಾರ್ಖಂಡ್ ತಂಡ ನೀಡಿದ್ದ 217ರನ್ ಗಳ ಗುರಿ ಬೆನ್ನು ಹತ್ತಿದ ಕರ್ನಾಟಕ ತಂಡ 169 ಸ್ಕೋರಿಗೆ ಆಲೌಟ್ ಆಗಿ 47ರನ್ ಗಳ ಸೋಲು ಅನುಭವಿಸಿತು.
ಗಾಯಗೊಂಡಿರುವ ವಿನಯ್ ಕುಮಾರ್ ಹಾಗೂ ಅಭಿಮನ್ಯು ಮಿಥುನ್ ಈ ಪಂದ್ಯದಲ್ಲಿ ಆಡಲಿಲ್ಲ. ವಿನಯ್ ಕುಮಾರ್ ಅನುಪಸ್ಥಿತಿಯಲ್ಲಿ ಮನೀಶ್ ಪಾಂಡೆ ಕ್ಯಾಪ್ಟನ್ ಆಗಿ ಕಾರ್ಯನಿರ್ವಹಿಸಿ, ಮೊದಲು ಫೀಲ್ಡ್ ಆಯ್ಕೆ ಮಾಡಿಕೊಂಡರು. ಧೋನಿ ಕೇವಲ 1 ರನ್ ಗಳಿಸಿ ಪಾರ್ಟ್ ಟೈಂ ಸ್ಪಿನ್ನರ್ ಕರುಣ್ ನಾಯರ್ ಗೆ ವಿಕೆಟ್ ಒಪ್ಪಿಸಿದರು.[ವಿಜಯ್ ಹಜಾರೆ ಟ್ರೋಫಿ: ಕರ್ನಾಟಕಕ್ಕೆ 2ನೇ ಗೆಲುವು]

ವಿಜಯ್ ಹಜಾರೆ ಟ್ರೋಫಿಯಲ್ಲಿ ಅನೇಕ ವರ್ಷಗಳ ನಂತರ ಆಡುತ್ತಿರುವ ಧೋನಿ ವರು ಇಲ್ಲಿ ತನಕ ಟೂರ್ನಿಯಲಿ 9, 44, 18 ಹಾಗೂ 1 ರನ್ ಗಳಿಸಿದ್ದಾರೆ. ಜಾರ್ಖಂಡ್ ತಂಡ 5 ಪಂದ್ಯಗಳಲ್ಲಿ 4 ಗೆಲುವು ದಾಖಲಿಸಿ ಬಿ ಗುಂಪಿನಲ್ಲಿ ಅಗ್ರಸ್ಥಾನದಲ್ಲಿದೆ. ಈ ಮೂಲಕ ಕ್ವಾರ್ಟರ್ ಫೈನಲ್ ಕನಸು ಜೀವಂತ ಇರಿಸಿಕೊಂಡಿದೆ.[ಐಪಿಎಲ್ : ಪುಣೆ ಪಾಲಾದ ಧೋನಿ, ರೈನಾ ರಾಜ್ ಕೋಟ್ ಗೆ]
ಕರ್ನಾಟಕ ತಂಡ 4 ಪಂದ್ಯಗಳಲ್ಲಿ 2 ಗೆಲುವು, 2 ಸೋಲು ಕಂಡಿದೆ. ಪ್ರತಿ ತಂಡ 6 ಪಂದ್ಯಗಳನ್ನು ಲೀಗ್ ಹಂತದಲ್ಲಿ ಆಡಲಿದ್ದು, ಗುಂಪಿನ ಟಾಪ್ 2 ತಂಡಗಳು ಕ್ವಾರ್ಟರ್ ಫೈನಲ್ ತಲುಪಲಿವೆ.
ಸಂಕ್ಷಿಪ್ತ ಸ್ಕೋರ್:
ಜಾರ್ಖಂಡ್ 216/8, 50 ಓವರ್ಸ್
(ಇಶಾಂತ್ ಜಗ್ಗಿ 50, ಕುಮಾರ್ ದೇವವ್ರತ್ ಅಜೇಯ 47, ಆನಂದ್ ಸಿಂಗ್ 37, ಜೆ ಸುಚಿತ್ 4/37, ಕರುಣ್ ನಾಯರ್ 2/35)
ಕರ್ನಾಟಕ 169 ಆಲೌಟ್, 45 ಓವರ್ಸ್
(ಕೆಎಲ್ ರಾಹುಲ್ 42, ಸುಚಿತ್ 34, ಕರುಣ್ 24, ಎಸ್ ಅರವಿಂದ್ 22, ಮಾಯಾಂಕ್ ಅಗರವಾಲ್ 20, ಶಹಬಾಜ್ ನದೀಂ 3/15, ಸೋನು ಸಿಂಗ್ 3/20, ರಾಹುಲ್ ಶುಕ್ಲಾ 2/38)
(ಒನ್ ಇಂಡಿಯಾ ಸುದ್ದಿ)