ಕರ್ನಾಟಕ ಬುಲ್ಡೋಜರ್ಸ್ ಸೆಲೆಬ್ರಿಟಿ ಕ್ರಿಕೆಟ್ ಲೀಗ್ನ ಮೊದಲ ಪಂದ್ಯವನ್ನು ಗೆದ್ದು ಕೊಂಡಿದೆ. ಬೆಂಗಳೂರಿನ ಎಂ ಚಿನ್ನಸ್ವಾಮಿ ಅಂಗಳದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಕರ್ನಾಟಕ ತಂಡ 46 ರನ್ಗಳಿಂದ ತೆಲುಗು ವಾರಿಯರ್ಸ್ ತಂಡವನ್ನು ಮಣಿಸಿ ಅಬ್ಬರಿಸಿತು.
ಟಾಸ್ ಗೆದ್ದ ತೆಲುಗು ವಾರಿಯರ್ಸ್ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಕಿಚ್ಚ ಸುದೀಪ್ ಮುಂದಾಳತ್ವದ ತಂಡ ಆರಂಭಿಕ ಆಘಾತ ಅನುಭವಿಸಿತು. ಡಾರ್ಲಿಂಗ್ ಕೃಷ್ಣ ಈ ಪಂದ್ಯದಲ್ಲಿ ತಮ್ಮ ನೈಜ ಆಟವನ್ನು ಪ್ರದರ್ಶಿಸಿ ಅಬ್ಬರಿಸಿದರು. ಇವರ ಅಮೋಘ ಆಟದ ಫಲವಾಗಿ ಕರ್ನಾಟಕ ಉತ್ತಮ ಮೊತ್ತವನ್ನು ಕಲೆ ಹಾಕಿತು. ಒಂದು ಬದಿಯಲ್ಲಿ ವಿಕಟ್ಗಳು ಬೀಳುತ್ತಾ ಇದ್ದರೂ ಡಾರ್ಲಿಂಗ್ ಕೃಷ್ಣ ಅಮೋಘ ಬ್ಯಾಟಿಂಗ್ ನಡೆಸಿ ತಂಡಕ್ಕೆ ಆಧಾರವಾದರು.

ಒಬ್ಬ ನುರಿತ ಬ್ಯಾಟರ್ ರೀತಿಯಲ್ಲಿ ಬ್ಯಾಟ್ ಮಾಡಿದ ಡಾರ್ಲಿಂಗ್ ಕೃಷ್ಣ ಕೇವಲ 39 ಎಸೆತಗಳಲ್ಲಿ 5 ಬೌಂಡರಿ ಹಾಗೂ ಇಷ್ಟೇ ಸಿಕ್ಸರ್ಗಳ ಸಹಾಯದಿಂದ 80 ರನ್ ಸಿಡಿಸಿ ನೆರೆದ ಅಭಿಮಾನಿಗಳಿಗೆ ಹಬ್ಬದೂಟವನ್ನು ಉಣ ಬಡಿಸಿದರು.
ತಾಲಾ 10 ಓವರ್ಗಳಂತೆ ಈ ಪಂದ್ಯ ಎರಡು ಬಾರಿ ನಡೆಯುವುದರಿಂದ, ಎರಡೂ ತಂಡಗಳಿಗೆ ಎರಡು ಬಾರಿ ಬ್ಯಾಟಿಂಗ್ ಮಾಡುವ ಅವಕಾಶ ಲಭಿಸುತ್ತದೆ. ಮೊದಲ ಬ್ಯಾಟ್ ಮಾಡಿದ ಕರ್ನಾಟಕ ತಂಡ 10 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 113 ರನ್ ಸಿಡಿಸಿತು. ಇನ್ನು ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ತೆಲುಗು ತಂಡದ ಪರ ನಾಯಕ ಅಖಿಲ್ ಅಕ್ಕಿನೇನಿ 51 ಹಾಗೂ ಆದರ್ಶನ್ 25 ರನ್ ಸಿಡಿಸಿದರು. ಇದರ ಪರಿಣಾಮ ತೆಲುಗು ಮೊದಲು ಬ್ಯಾಟ್ ಮಾಡಿದಾಗ 10 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 99 ರನ್ ಕಲೆ ಹಾಕಿತು.
ಎರಡನೇ ಬಾರಿಗೆ ಬ್ಯಾಟ್ ಮಾಡಿದ ಕರ್ನಾಟಕ ತಂಡದ ಆರಂಭ ಕಳಪೆಯಾಗಿತ್ತು. ಮೊದಲು ಬ್ಯಾಟ್ ಮಾಡಿದಗ ಅಬ್ಬರಿಸಿದ್ದ ಕೃಷ್ಣ, ಎರಡನೇ ವೇಳೆ ಬ್ಯಾಟಿಂಗ್ ಮಾಡುವಾಗ ಬೇಗನೆ ಔಟ್ ಆದರು. ಈ ಅವಧಿಯಲ್ಲಿ ಕರ್ನಾಟಕ ತಂಡಕ್ಕೆ ರಾಜೀವ್ (25) ಹಾಗೂ ಕರುಣ್ (34) ಜೋಡಿ ತಂಡಕ್ಕೆ ಆಧಾರವಾಯಿತು. ಇವರಿಬ್ಬರ ಉತ್ತಮ ಆಟದ ನೆರವಿನಿಂದ ಕರ್ನಾಟಕ ಎರಡನೇ ಅವಧಿಯಲ್ಲಿ 10 ಓವರ್ಗಳಲ್ಲಿ 3 ವಿಕೆಟ್ಗೆ 123 ರನ್ ಸಿಡಿಸಿತು.
138 ರನ್ಗಳ ಸವಾಲಿನ ಮೊತ್ತವನ್ನು ಹಿಂಬಾಲಿಸಿದ ತೆಲುಗು ತಂಡದ ಪರ ಎಸ್ ತಮನ್ ಮನಮೋಹಕ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಇವರು 19 ಎಸೆತಗಳಲ್ಲಿ 37 ರನ್ ಸಿಡಿಸಿ ತಂಡಕ್ಕೆ ಆಧಾರವದರು. ಆದರೆ ತಂಡವನ್ನು ಗೆಲುವಿನ ದಡವನ್ನು ದಾಟಿಸುವಲ್ಲಿ ಇವರ ಇನಿಂಗ್ಸ್ ಸಹಾಯ ಮಾಡಲಿಲ್ಲ. ಪರಿಣಾಮ ತೆಲುಗು 9 ವಿಕೆಟ್ ನಷ್ಟಕ್ಕೆ 91 ರನ್ ಸಿಡಿಸಿತು. ಕರ್ನಾಟಕದ ಪರ ಗೋಲ್ಡನ್ ಸ್ಟಾರ್ ಗಣೇಶ್ 4 ವಿಕೆಟ್ ಕಬಳಿಸಿ ಮಿಂಚಿದರು.
ಕರ್ನಾಟಕ ತಂಡ ತನ್ನ ಮುಂದಿನ ಪಂದ್ಯವನ್ನು ಫೆ.14 ರಂದು ಚೆನ್ನೈ ರೈನೋಸ್ ವಿರುದ್ಧ ಆಡಲಿದೆ.