ಟೀಮ್ ಇಂಡಿಯಾದ ಲೆಗ್ ಸ್ಪಿನ್ ಯುಜುವೇಂದ್ರ ಚಹಾಲ್ ವಿಚ್ಛೇಧನದ ಬಳಿಕ ತಾವು ಪಟ್ಟ ಕಷ್ಟವನ್ನು ಎಳೆ ಎಳೆಯಾಗಿ ಹೇಳಿಕೊಂಡಿದ್ದಾರೆ. ಸಾಮಾಜಿಕ ತಾಣಗಳಲ್ಲಿ ಈ ಬಗ್ಗೆ ಹಲವರು ಕೆಟ್ಟ ಕಮೆಂಟ್ಗಳನ್ನು ಮಾಡಿದ್ದರು. ಅಲ್ಲದೆ ಚೀಟರ್ ಎಂದು ಕರೆದಿದ್ದರು ಎಂದು ಚಹಾಲ್ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ. ರಾಜ್ ಶಮಾನಿ ಪಾಡ್ಕ್ಯಾಸ್ಟ್ನಲ್ಲಿ ಮಾತನಾಡಿದ ಚಾಹಲ್, ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮನ ಬಿಚ್ಚಿ ಮಾತನಾಡಿದ್ದಾರೆ.
ಧನುಶ್ರೀ ವರ್ಮಾ ಹಾಗೂ ತಮ್ಮ ನಡುವಿನ ವಿಚ್ಛೇಧನ ದಿಢೀರ್ ನಿರ್ಧಾರ ಅಲ್ಲವೇ ಅಲ್ಲ. ಈ ಬಗ್ಗೆ ಯೋಚಿಸಿಯೇ ತೀರ್ಮಾನವನ್ನು ಕೈಗೊಳ್ಳಲಾಗಿದೆ. ಡಿವೋರ್ಸ್ ಪಡೆದ ಬಳಿಕ ನನಗೆ ಚೀಟರ್ ಎಂದು ಕರೆಯುತ್ತಿದ್ದರು. ನಾನು ಎಂದಿಗೂ ಜೀವನದಲ್ಲಿ ಮೋಸ ಮಾಡಿಲ್ಲ ಎಂದಿದ್ದಾರೆ. ಇವರು ವಿಚ್ಛೇಧನ ಪಡೆದ ನಂತರ ಚಹಾಲ್ ಸೋಶಿಯಲ್ ಮಿಡಿಯಾದಲ್ಲಿ ಫುಲ್ ಟ್ರೋಲ್ ಆಗಿದ್ದರು.

ನನಗೆ ವಂಚಕ ಎಂದು ಸಾಕಷ್ಟು ಜನರು ಕರೆದರು. ನಾನು ನಿಷ್ಠಾವಂತ ವ್ಯಕ್ತಿ. ನಾನು ಬೇರೆ ಜನರ ಬಗ್ಗೆಯೂ ಕಾಳಜಿಯನ್ನು ಹೊಂದಿದ್ದೇನೆ. ನನಗೂ ಇಬ್ಬರು ಸಹೋದರಿಯರು ಇದ್ದಾರೆ. ಹೀಗಾಗಿ ನನಗೂ ಮಹಿಳೆಯರಿಗೆ ಹೇಗೆ ಗೌರವಿಸಬೇಕು ಎಂಬುದನ್ನು ತಿಳಿಸಿ ಹೇಳಬೇಕಿಲ್ಲ. ಜನರು ನನ್ನ ಜೀವನದ ಕಥೆ ತಿಳಿಯದೇ ತಮಗೆ ತೋಚಿದ ಹಾಗೆ ಮಾತನಾಡುತ್ತಾರೆ. ಅಲ್ಲದೆ ಇದೇ ಸಮಯದಲ್ಲಿ ನಾನು ಆತ್ಮಹತ್ಯೆಯ ಬಗ್ಗೆಯೂ ಯೋಚಿಸಿದ್ದಾಗಿ ಚಹಾಲ್ ತಮ್ಮ ನೋವನ್ನು ತೋಡಿಕೊಂಡಿದ್ದಾರೆ.
ಇದೇ ಸಂದರ್ಶನದಲ್ಲಿ ಟೀಮ್ ಇಂಡಿಯಾದ ಸ್ಪಿನ್ ಬೌಲರ್ ತಮ್ಮ ಮತ್ತು ಮಹ್ವಾಶ್ ಅವರ ಸಂಬಂಧದ ಬಗ್ಗೆಯೂ ಮಾತನಾಡಿದ್ದಾರೆ. ನಮ್ಮಿಬ್ಬರ ಸಂಬಂಧದ ಬಗ್ಗೆಯೂ ಜನ ತಮಗೆ ತೋಚಿದಂತೆ ಮಾತನಾಡುತ್ತಾರೆ. ನಾನು ಹೇಗಿದ್ದೇನೆ ಎಂದು ನನಗೆ ತಿಳಿದಿದೆ. ಚಾಂಪಿಯನ್ಸ್ ಟ್ರೋಫಿಯ ಫೈನಲ್ ಪಂದ್ಯದಲ್ಲಿ ಮಹ್ವಾಶ್ ತಮ್ಮ ಜೊತೆಗೆ ಕಾಣಿಸಿಕೊಂಡಾಗ ಜನರು ತುಂಬ ಮಾತನಾಡಿದ್ದಾರೆ. ಆದರೆ ನಿಜ ಹೇಳಬೇಕೆಂದರೆ ಇಬ್ಬರ ನಡುವೆ ಯಾವುದೇ ಸಂಬಂಧ ಇಲ್ಲ. ಧನುಶ್ರೀ ವರ್ಮಾ ಅವರೊಂದಿಗೆ ವಿಚ್ಛೇಧನ ಪಡೆಯುವ ವೇಳೆ ನನಗೆ ಮಹ್ವಾಶ್ ಆಸರೆಯಾದ್ರು. ಕಷ್ಟದ ಸಮಯದಲ್ಲಿ ನಿಮ್ಮ ಕೈಯನ್ನು ಯಾರಾದ್ರೂ ಹಿಡಿದರೆ ಅದು ದೊಡ್ಡದಾಗುತ್ತದೆ. ಆದರೆ ನಮ್ಮಿಬ್ಬರ ನಡುವೆ ಉತ್ತಮ ಸ್ನೇಹವಿದೆ ಎಂದು ಚಹಾಲ್ ತಿಳಿಸಿದ್ದಾರೆ.
ಚಹಾಲ್ ಹಾಗೂ ಧನಶ್ರೀ ರಿಯಾಲಿಟಿ ಶೋದಲ್ಲಿ ಕಾಣಿಸಿಕೊಂಡಿದ್ದರು. ಅಲ್ಲಿಂದ ಇಬ್ಬರ ಪರಿಚಯವಾಗಿತ್ತು. ಅಲ್ಲದೆ ಅಲ್ಲಿಂದ ಇಬ್ಬರ ನಡುವೆ ಸ್ನೇಹ ಬೆಳೆದು ಪ್ರೀತಿಯಾಗಿ ಮಾರ್ಪಟ್ಟಿತು. ಈ ಇಬ್ಬರೂ ಸ್ಟಾರ್ಗಳು ಡಿಸೆಂಬರ್ 11, 2020ರಂದು ಹಸಿ ಮಣೆ ಏರಿದರು. ಕೆಲವು ವರ್ಷಗಳ ಕಾಲ ಎಲ್ಲವೂ ಚೆಂದವಾಗಿತ್ತು. ಆದರೆ 2022ರ ಜೂನ್ನಲ್ಲಿ ಇಬ್ಬರ ದಾಂಪತ್ಯದಲ್ಲಿ ಬಿರುಕು ಕಾಣಿಸಿಕೊಂಡಿತು. ಇವರಿಬ್ಬರೂ ಸಾಮಾಜಿಕ ತಾಣದಲ್ಲಿ ಪರಸ್ಪರ ಅನ್ಫಾಲೋ ಮಾಡಿದ್ದರು. ಫೆಬ್ರವರಿಯಲ್ಲಿ ಇಬ್ಬರೂ ಮುಂಬೈನ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದರು. ಕೂಲಿಂಗ್ ಆಫ್ ಅವಧಿಯ ವಿರುದ್ಧ ಚಹಾಲ್ ಬಾಂಬೆ ಹೈ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದರು. ಹೈಕೋರ್ಟ್ ಮರುದಿನ ತೀರ್ಪು ಪ್ರಕಟಿಸಲು ಕುಟುಂಬ ನ್ಯಾಯಾಲಯಕ್ಕೆ ಆದೇಶಿಸಿತು. ಪರಿಣಾಮ ಇವರಿಬ್ಬರ ವಿಶ್ಚೇಧನವನ್ನು ಮಾರ್ಚ್ 20ರಂದು ಅನುಮೋದಿಸಲಾಯಿತು.