ಐಸಿಸಿ ಚಾಂಪಿಯನ್ಸ್ ಟ್ರೋಫಿ 2025ರಲ್ಲಿ ಇಂದು ಭಾನುವಾರ ಭಾರತ ಮತ್ತು ನ್ಯೂಜಿಲೆಂಡ್ ನಡುವೆ ರೋಚಕ ಪಂದ್ಯ ನಡೆಯಲಿದೆ. ಉಭಯ ತಂಡಗಳ ನಡುವಿನ ಈ ರೋಚಕ ಪಂದ್ಯವು ದುಬೈ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ಭಾರತೀಯ ಕಾಲಮಾನ ಪ್ರಕಾರ ಮಧ್ಯಾಹ್ನ 2:30 ರಿಂದ ಆರಂಭವಾಗಲಿದೆ. ಭಾರತ ಮತ್ತು ನ್ಯೂಜಿಲೆಂಡ್ ಈಗಾಗಲೇ ಸೆಮಿಫೈನಲ್ನಲ್ಲಿ ತಮ್ಮ ಸ್ಥಾನವನ್ನು ಖಚಿತಪಡಿಸಿವೆ.
ಚಾಂಪಿಯನ್ಸ್ ಟ್ರೋಫಿ ಎ ಗುಂಪಿನ ಕೊನೆಯ ಪಂದ್ಯದಲ್ಲಿ ಗೆದ್ದ ತಂಡವು ಅಂಕಪಟ್ಟಿ ಆಗ್ರ ಸ್ಥಾನ ಪಡೆಯಲಿದೆ. ನಂತರ ಸೆಮಿಫೈನಲ್ನಲ್ಲಿ ಬಿ ಗುಂಪಿನ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಆಸ್ಟ್ರೇಲಿಯಾವನ್ನು ಎದುರಿಸಲಿದೆ.

ಭಾರತ ಮತ್ತು ನ್ಯೂಜಿಲೆಂಡ್ ತಮ್ಮ ಎ ಗುಂಪಿನಲ್ಲಿ ಪಾಕಿಸ್ತಾನ ಮತ್ತು ಬಾಂಗ್ಲಾದೇಶ ತಂಡಗಳನ್ನು ಸೋಲಿಸುವ ಮೂಲಕ ಕೊನೆಯ ನಾಲ್ಕಕ್ಕೆ ಅರ್ಹತೆ ಪಡೆದಿವೆ. ಈ ಹೈವೋಲ್ಟೇಜ್ ಪಂದ್ಯಕ್ಕೆ ಎರಡೂ ತಂಡಗಳು ಸಂಪೂರ್ಣವಾಗಿ ಸಿದ್ಧವಾಗಿವೆ. ಆದರೆ ಐಸಿಸಿ ಟೂರ್ನಿಯಿಂದ ಎರಡೂ ತಂಡಗಳ ಹೆಡ್ ಟು ಹೆಡ್ ದಾಖಲೆಯನ್ನು ನೋಡಿದರೆ, ನ್ಯೂಜಿಲೆಂಡ್ ಭಾರತದ ಮೇಲೆ ಪ್ರಾಬಲ್ಯ ಸಾಧಿಸಿದೆ.
ಇಲ್ಲಿಯವರೆಗೆ ಹೊರಗುಳಿದ ಆಟಗಾರರಿಗೆ ಭಾನುವಾರ ನ್ಯೂಜಿಲೆಂಡ್ ವಿರುದ್ಧದ ಚಾಂಪಿಯನ್ಸ್ ಟ್ರೋಫಿಯ ಕೊನೆಯ ಗುಂಪು ಪಂದ್ಯದಲ್ಲಿ ಅವಕಾಶ ಸಿಗಬಹುದು. ಕೊನೆಯ ಗುಂಪು ಪಂದ್ಯವನ್ನು ಗೆಲ್ಲುವ ಮೂಲಕ ಭಾರತ ಎ ಗುಂಪಿನಲ್ಲಿ ಅಗ್ರಸ್ಥಾನದಲ್ಲಿ ಉಳಿಯಲು ತಂತ್ರ ರೂಪಿಸಿದೆ. ಈಗ ಸೆಮಿಫೈನಲ್ನಲ್ಲಿ ಭಾರತ ತಂಡ ದಕ್ಷಿಣ ಆಫ್ರಿಕಾ ಅಥವಾ ಆಸ್ಟ್ರೇಲಿಯಾವನ್ನು ಎದುರಿಸಲಿದೆ. ಈ ಎರಡೂ ತಂಡಗಳು ಅತ್ಯುತ್ತಮ ಸ್ಪಿನ್ನರ್ಗಳನ್ನು ಹೊಂದಿವೆ.
ಬಾಂಗ್ಲಾದೇಶದ ಸ್ಪಿನ್ನರ್ಗಳಾದ ಮೆಹದಿ ಹಸನ್ ಮಿರಾಜ್ ಮತ್ತು ರಿಷದ್ ಹೊಸೈನ್ ವಿರುದ್ಧ ಭಾರತದ ಸ್ಟಾರ್ ಬ್ಯಾಟರ್ಗಳು ರನ್ ಗಳಿಸಲು ಪರದಾಡಿದರು. ಎರಡನೇ ಪಂದ್ಯದಲ್ಲಿ ಪಾಕಿಸ್ತಾನದ ಸ್ಪಿನ್ನರ್ ಅಬ್ರಾರ್ ಅಹ್ಮದ್ ವಿರುದ್ಧವೂ ಅದೇ ನಡೆಯಿತು. ಈಗ ಟೀಮ್ ಇಂಡಿಯಾ ಬ್ಯಾಟರ್ಗಳು ನ್ಯೂಜಿಲೆಂಡ್ನ ಮಿಚೆಲ್ ಸ್ಯಾಂಟ್ನರ್ ಮತ್ತು ಮೈಕೆಲ್ ಬ್ರೇಸ್ವೆಲ್ ಸ್ಪಿನ್ ಸವಾಲನ್ನು ಎದುರಿಸಲಿದ್ದಾರೆ.
ಕಿವೀಸ್ ಪಡೆಯ ಇಬ್ಬರೂ ಸ್ಪಿನ್ನರ್ಗಳು ಉತ್ತಮ ಫಾರ್ಮ್ನಲ್ಲಿದ್ದಾರೆ. ದುಬೈ ಪಿಚ್ನಲ್ಲಿ ಹೆಚ್ಚು ಪರಿಣಾಮಕಾರಿಯಾಗಿ ಅವರು ಪ್ರದರ್ಶನ ನೀಡಬಹುದು. ಸ್ಯಾಂಟ್ನರ್ ಮತ್ತು ಬ್ರೇಸ್ವೆಲ್ ಅವರ 20 ಓವರ್ಗಳನ್ನು ಟೀಮ್ ಇಂಡಿಯಾ ಎದುರಿಸಬೇಕಾಗಿದೆ. ಮತ್ತೊಂದೆಡೆ ಗ್ಲೆನ್ ಫಿಲಿಪ್ಸ್ ಕೂಡ ಅನಿಯಮಿತ ಸ್ಪಿನ್ ಬೌಲರ್ ಆಗಿದ್ದಾರೆ.
ಚಾಂಪಿಯನ್ಸ್ ಟ್ರೋಫಿ ಟೂರ್ನಿಗೂ ಮುನ್ನ ಭಾರತ ತಂಡದಲ್ಲಿ ಐದು ಸ್ಪಿನ್ನರ್ಗಳನ್ನು ರವೀಂದ್ರ ಜಡೇಜಾ, ಅಕ್ಸರ್ ಪಟೇಲ್, ಕುಲದೀಪ್ ಯಾದವ್, ವರುಣ್ ಚಕ್ರವರ್ತಿ ಮತ್ತು ವಾಷಿಂಗ್ಟನ್ ಸುಂದರ್) ಆಯ್ಕೆ ಮಾಡಿದ್ದಕ್ಕಾಗಿ ಬಿಸಿಸಿಐ ಆಯ್ಕೆ ಸಮಿತಿ ಟೀಕೆಗೆ ಗುರಿಯಾಗಿತ್ತು. ಆದರೆ ದುಬೈ ಪಿಚ್ನಲ್ಲಿ ಸ್ಪಿನ್ನರ್ಗಳ ಪ್ರಾಬಲ್ಯ ಭಾರತವನ್ನು ಬಲಪಡಿಸಿದೆ.
ಭಾರತ ಮೊದಲ ಎರಡು ಪಂದ್ಯಗಳಲ್ಲಿ ಜಡೇಜ, ಅಕ್ಸರ್ ಮತ್ತು ಕುಲದೀಪ್ ಅವರನ್ನು ಕಣಕ್ಕಿಳಿಸಿದೆ. ಮೂವರೂ ಉತ್ತಮ ಪ್ರದರ್ಶನ ನೀಡಿದ್ದಾರೆ. ಅವರು ಮಧ್ಯಮ ಓವರ್ಗಳಲ್ಲಿ ಎದುರಾಳಿ ತಂಡದ ಬ್ಯಾಟರ್ಗಳನ್ನು ಕಟ್ಟಿ ಹಾಕಿದ್ದಾರೆ. ಅವರ ಎಕಾನಮಿ ರೇಟ್ ಐದು ಕ್ಕಿಂತ ಕಡಿಮೆ ಇದೆ.
ನ್ಯೂಜಿಲೆಂಡ್ನಲ್ಲಿ ಕೇನ್ ವಿಲಿಯಮ್ಸನ್, ವಿಲ್ ಯಂಗ್, ಟಾಮ್ ಲ್ಯಾಥಮ್, ಡೆವೊನ್ ಕಾನ್ವೇ ಅವರಂತಹ ಸ್ಟಾರ್ ಬ್ಯಾಟರ್ಗಳಿದ್ದಾರೆ. ಅವರು ಸ್ಪಿನ್ ಬೌಲಿಂಗ್ ವಿರುದ್ಧ ಚೆನ್ನಾಗಿ ಆಡಬಲ್ಲರು. ಭಾರತ ಗೆಲುವಿನ ಓಟವನ್ನು ಮುಂದುವರಿಸುವ ನಿರೀಕ್ಷೆಯಲ್ಲಿದೆ. ಆದರೆ ನಾಯಕ ರೋಹಿತ್ ಶರ್ಮಾ ಮತ್ತು ಮೊಹಮ್ಮದ್ ಶಮಿಗೆ ಸೆಮಿಫೈನಲ್ಗೆ ಮೊದಲು ವಿಶ್ರಾಂತಿ ನೀಡಬಹುದು. ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಬಿಸಿಲಿನ ಬೇಗೆಯಿಂದಾಗಿ ರೋಹಿತ್ ಶರ್ಮಾ ಫಿಟ್ನೆಸ್ ಸಮಸ್ಯೆ ಎದುರಿಸಿದ್ದರು. ಅವರು 20 ನಿಮಿಷಗಳ ಕಾಲ ಮೈದಾನದಿಂದ ಹೊರಗುಳಿದಿದ್ದರು. ಆದರೆ, ಅವರಿಗೆ ಬ್ಯಾಟಿಂಗ್ನಲ್ಲಿ ಯಾವುದೇ ಸಮಸ್ಯೆ ಎದುರಾಗಲಿಲ್ಲ.
ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ರೋಹಿತ್ ಶರ್ಮಾಗೆ ವಿಶ್ರಾಂತಿ ನೀಡಬಹುದು. ಅಂತಹ ಪರಿಸ್ಥಿತಿಯಲ್ಲಿ, ರಿಷಭ್ ಪಂತ್ಗೆ ಟೂರ್ನಿಯ ಮೊದಲ ಪಂದ್ಯವನ್ನು ಆಡುವ ಅವಕಾಶ ಸಿಗಬಹುದು. ಶಮಿ ಕೂಡ ತಮ್ಮ ಕಾಲಿನ ಸ್ನಾಯುಗಳಲ್ಲಿ ತೊಂದರೆ ಅನುಭವಿಸುತ್ತಿದ್ದರು. ಅವರಿಗೂ ಚೇತರಿಕೆಯ ವಿರಾಮ ಸಿಗಬಹುದು. ಆಗ ಅರ್ಷದೀಪ್ ಸಿಂಗ್ ಬದಲಿ ವೇಗದ ಬೌಲರ್ ಆಗಿ ಕಣಕ್ಕಿಳಿಯಬಹುದು. ಕುಲ್ದೀಪ್ ಬದಲಿಗೆ ವರುಣ್ ಚಕ್ರವರ್ತಿಯನ್ನು ಕಣಕ್ಕಿಳಿಸಬಹುದು. ಈ ಮೂಲಕ ನ್ಯೂಜಿಲೆಂಡ್ ತಂಡವನ್ನು ಮಣಿಸಲು ಹೊಸ ತಂತ್ರವನ್ನು ಟೀಮ್ ಇಂಡಿಯಾ ಮಾಡಿಕೊಂಡಿದೆ.
ಭಾರತ ಮತ್ತು ನ್ಯೂಜಿಲೆಂಡ್ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗಳಲ್ಲಿ 11 ಪಂದ್ಯಗಳಲ್ಲಿ ಪರಸ್ಪರ ಮುಖಾಮುಖಿಯಾಗಿವೆ. ಈ 11 ಪಂದ್ಯಗಳಲ್ಲಿ ಭಾರತ 5 ಪಂದ್ಯಗಳಲ್ಲಿ ಗೆದ್ದಿದ್ದರೆ, ನ್ಯೂಜಿಲೆಂಡ್ 5 ಬಾರಿ ಜಯಗಳಿಸಿದೆ. ಒಂದು ಪಂದ್ಯ ಯಾವುದೇ ಫಲಿತಾಂಶವಿಲ್ಲದೆ ಕೊನೆಗೊಂಡಿದೆ. ಇದಲ್ಲದೆ, ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ಒಂದೇ ಒಂದು ಪಂದ್ಯದಲ್ಲಿ ಮುಖಾಮುಖಿಯಾಗಿವೆ. ಆ ಪಂದ್ಯದಲ್ಲಿ ನ್ಯೂಜಿಲೆಂಡ್ ಗೆದ್ದಿದೆ.
ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ಒಟ್ಟು 118 ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಇದರಲ್ಲಿ ಭಾರತ 60 ಪಂದ್ಯಗಳನ್ನು ಗೆದ್ದರೆ, ನ್ಯೂಜಿಲೆಂಡ್ 50 ಪಂದ್ಯಗಳನ್ನು ಗೆದ್ದಿದ್ದರೆ, 7 ಪಂದ್ಯಗಳು ರದ್ದಾಗಿದ್ದು, 1 ಪಂದ್ಯ ಟೈ ಆಗಿದೆ.