ಭಾರೀ ಕುತೂಹಲ ಮೂಡಿಸಿರುವ 2025ರ ಐಸಿಸಿ ಚಾಂಪಿಯನ್ ಟ್ರೋಫಿ ಟೂರ್ನಿಗಾಗಿ ಟೀಮ್ ಇಂಡಿಯಾವನ್ನು ಪಾಕಿಸ್ತಾನಕ್ಕೆ ಕಳುಹಿಸಲು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ನಿರಾಕರಿಸಿದೆ. ಈಗ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ಗೆ (ಪಿಸಿಬಿ) ಹೈಬ್ರಿಡ್ ಮಾದರಿಯಲ್ಲಿ ಟೂರ್ನಿ ಆಯೋಜಿಸುವುದೊಂದೇ ಉಳಿದಿರುವ ದಾರಿ. ಆದರೆ, ಇದಕ್ಕೆ ಪಿಸಿಬಿ ಸಿದ್ಧವಾಗಿಲ್ಲ. ಇದನ್ನೆಲ್ಲ ಪರಿಗಣಿಸಿ ಭಾರತ ತಂಡದ ಪಂದ್ಯಗಳಿಗೆ ಪಾಕಿಸ್ತಾನ ಹೊರತುಪಡಿಸಿ ಬೇರೆಡೆ ಟೂರ್ನಿ ಆಯೋಜಿಸುವ ಸಾಧ್ಯತೆ ಇದೆ. ಬಿಸಿಸಿಐ ಮತ್ತು ಪಿಸಿಬಿ ನಡುವೆ ನಡೆಯುತ್ತಿರುವ ಈ ಬಿಕ್ಕಟ್ಟಿನ ನಡುವೆ ಚೊಚ್ಚಲ ವಿಶ್ವಕಪ್ ವಿಜೇತ, ಟೀಮ್ ಇಂಡಿಯಾದ ಮಾಜಿ ನಾಯಕ ಕಪಿಲ್ ದೇವ್ ದೊಡ್ಡ ಹೇಳಿಕೆ ನೀಡಿದ್ದಾರೆ.
ಐಸಿಸಿ ಚಾಂಪಿಯನ್ ಟ್ರೋಫಿ 2025ರ ಟೂರ್ನಿಗಾಗಿ ಭಾರತ ತಂಡ ಪಾಕಿಸ್ತಾನಕ್ಕೆ ಹೋಗಬೇಕೇ ಎಂದು ಕಾರ್ಯಕ್ರಮವೊಂದರಲ್ಲಿ ಕಪಿಲ್ ದೇವ್ ಅವರಿಗೆ ಪ್ರಶ್ನೆ ಕೇಳಲಾಯಿತು. ಈ ವೇಳೆ ಇದಕ್ಕೆ ಪ್ರಕ್ರಿಯಿಸಿರುವ ಕಪಿಲ್ ದೇವ್ ಸಷ್ಟವಾಗಿ ಉತ್ತರಿಸಿದ್ದಾರೆ. ಭಾರತ ತಂಡ ಪಾಕಿಸ್ತಾನಕ್ಕೆ ಹೋಗುವ ನಿರ್ಧಾರವನ್ನು ಸರಕಾರವೇ ಕೈಗೊಳ್ಳಲಿದೆ. ಈ ವಿಷಯದಲ್ಲಿ ನಮ್ಮಂತಹವರ ಅಭಿಪ್ರಾಯ ಮುಖ್ಯವಲ್ಲ ಎಂದಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ಕಪಿಲ್ ದೇವ್ ಅವರಿಗೆ ಮಾಧ್ಯಮಗಳು ಚಾಂಪಿಯನ್ ಟ್ರೋಫಿ 2025ರ ಟೂರ್ನಿ ಕುರಿತು ಪ್ರಶ್ನೆಗಳನ್ನು ಕೇಳಲಾಯಿತು. 'ನೀವು ನನಗೆ ಈ ಪ್ರಶ್ನೆಯನ್ನು ಕೇಳುವುದು ತುಂಬಾ ಅನುಚಿತವಾಗಿದೆ. ಏಕೆಂದರೆ ಇದು ಸರ್ಕಾರದ ಜವಾಬ್ದಾರಿಯಾಗಿದೆ. ಎಲ್ಲವೂ ಸರಿ ಇದೆ ಎಂದು ಸರ್ಕಾರ ಹೇಳಿದರೆ ನಮ್ಮಂಥವರು ನಮ್ಮ ಅಭಿಪ್ರಾಯ ಹೇಳಬಾರದು. ದೇಶ ಯಾವುದನ್ನಾದರೂ ನಿರ್ಧರಿಸಿದಾಗ ನಮ್ಮ ಅಭಿಪ್ರಾಯ ಮುಖ್ಯವಲ್ಲ. ಕಪಿಲ್ ದೇವ್ ಬೇರೆಯವರಿಗಿಂತ ದೊಡ್ಡವರಾಗಲು ಸಾಧ್ಯವಿಲ್ಲ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಬಿಸಿಸಿಐ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ನಂತರ ಐಸಿಸಿ ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ) ನಲ್ಲಿ ಚಾಂಪಿಯನ್ಸ್ ಟ್ರೋಫಿ ಪ್ರವಾಸವನ್ನು ರದ್ದುಗೊಳಿಸಿದೆ. ಟ್ರೋಫಿಯನ್ನು ಈಗ ಕರಾಚಿ, ರಾವಲ್ಪಿಂಡಿ ಮತ್ತು ಇಸ್ಲಾಮಾಬಾದ್ ಹೊರತುಪಡಿಸಿ ಖೈಬರ್ ಪಖ್ತುಂಕ್ವಾ ಪ್ರದೇಶದ ಅಬೋಟಾಬಾದ್ನಲ್ಲಿ ಪ್ರದರ್ಶಿಸಲಾಗುತ್ತಿದೆ. ಚಾಂಪಿಯನ್ಸ್ ಟ್ರೋಫಿ ನವೆಂಬರ್ 26 ರಿಂದ 28 ರವರೆಗೆ ಅಫ್ಘಾನಿಸ್ತಾನಕ್ಕೆ ಪ್ರವಾಸ ಮಾಡಲಿದೆ. ನಂತರ ಡಿಸೆಂಬರ್ 10 ರಿಂದ 13 ರವರೆಗೆ ಬಾಂಗ್ಲಾದೇಶಕ್ಕೆ ಹೋಗಲಿದ್ದು, ಡಿಸೆಂಬರ್ 15 ರಿಂದ 22 ರವರೆಗೆ ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿದೆ.
ಇದಾದ ನಂತರ, ಚಾಂಪಿಯನ್ ಟ್ರೋಫಿಯು ಡಿಸೆಂಬರ್ 25 ರಿಂದ ಜನವರಿ 5 ರವರೆಗೆ ಆಸ್ಟ್ರೇಲಿಯಾದಲ್ಲಿ ಉಳಿಯಲಿದೆ. ಜನವರಿ 6 ರಿಂದ 11 ರವರೆಗೆ ನ್ಯೂಜಿಲೆಂಡ್ ಟ್ರೋಫಿ ಪ್ರವಾಸ ಮಾಡಲಿದೆ. ಜನವರಿ 12 ರಿಂದ 14 ರವರೆಗೆ ಇಂಗ್ಲೆಂಡ್ ಪ್ರವಾಸದ ನಂತರ, ಜನವರಿ 15 ರಿಂದ 26 ರವರೆಗೆ ಟ್ರೋಫಿ ಭಾರತದಲ್ಲಿ ಇರಲಿದೆ. ಕೊನೆಯಲ್ಲಿ ಜನವರಿ 27 ರಂದು ಪಾಕಿಸ್ತಾನಕ್ಕೆ ಹಿಂತಿರುಗಲಿದೆ.