ಐಸಿಸಿ ಚಾಂಪಿಯನ್ಸ್ ಟ್ರೋಫಿ 2025ರ ಟೂರ್ನಿಗೆ ಭಾರತ ತಂಡವನ್ನು ಶನಿವಾರ ಪ್ರಕಟಿಸುವ ಸಾಧ್ಯತೆಯಿದೆ. ನಾಳೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಆಯ್ಕೆ ಸಮಿತಿಯ ಸಭೆ ನಡೆಯಲಿದ್ದು, ಬಳಿಕ ಟೀಮ್ ಇಂಡಿಯಾ ಆಯ್ಕೆ ನಡೆಯಲಿದೆ. ಜನವರಿ 18 ರಂದು ಮಧ್ಯಾಹ್ನ 12:30 ಗಂಟೆಗೆ ಬಿಸಿಸಿಐ ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಮತ್ತು ಭಾರತ ತಂಡದ ನಾಯಕ ರೋಹಿತ್ ಶರ್ಮಾ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಲಿದ್ದಾರೆ. ಈ ವೇಳೆ ಟೀಮ್ ಇಂಡಿಯಾವನ್ನು ಪ್ರಕಟಿಸಲಿದ್ದಾರೆ.
ಮುಂಬೈನ ವಾಂಖೆಡೆ ಸ್ಟೇಡಿಯಂನ ಪತ್ರಿಕಾಗೋಷ್ಠಿ ಕೊಠಡಿಯಲ್ಲಿ ಅಜಿತ್ ಅಗರ್ಕರ್ ಮತ್ತು ರೋಹಿತ್ ಶರ್ಮಾ ಒಟ್ಟಿಗೆ ಭಾಗವಹಿಸಲಿದ್ದಾರೆ. ಈ ವೇಳೆ ಫೆಬ್ರವರಿ 19 ರಿಂದ ಮಾರ್ಚ್ 9 ರವರೆಗೆ ಪಾಕಿಸ್ತಾನದ ಆತಿಥ್ಯದಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ ಮತ್ತು ಇಂಗ್ಲೆಂಡ್ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಗಾಗಿ ಟೀಮ್ ಇಂಡಿಯಾವನ್ನು ಪ್ರಕಟಿಸಲಾಗುತ್ತದೆ.

ಶನಿವಾರ ನಡೆಯಲಿರುವ ಪತ್ರಿಕಾಗೋಷ್ಠಿಗೆ ಟೀಮ್ ಇಂಡಿಯಾ ಹೆಡ್ಕೋಚ್ ಗೌತಮ್ ಗಂಭೀರ್ ಗೈರಾಗುವ ಸಾಧ್ಯತೆಯದೆ. ಇತ್ತೀಚೆಗೆ ಟೀಮ್ ಇಂಡಿಯಾ ಆಟಗಾರರು ಮತ್ತು ಗೌತಮ್ ಗಂಭೀರ್ ನಡುವಿನ ಭಿನ್ನಾಭಿಪ್ರಾಯದ ಮಾತುಕತೆಗಳು ಬೆಳಕಿಗೆ ಬಂದಿದ್ದು, ಈ ಕಾರಣದಿಂದಾಗಿ ಬಿಸಿಸಿಐ ಪರಿಶೀಲನಾ ಸಭೆಯನ್ನು ಕೂಡ ಕರೆದಿತ್ತು. ಇದೀಗ ಪತ್ರಿಕಾಗೋಷ್ಠಿಯಿಂದಲ್ಲೂ ಗಂಭೀರ್ ನಾಪತ್ತೆಯಾಗಲಿದ್ದಾರೆ ಎಂದು ವರದಿಗಳಾಗಿವೆ.
ಚಾಂಪಿಯನ್ಸ್ ಟ್ರೋಫಿ 2025ರ ಟೀಮ್ ಇಂಡಿಯಾದ ಕಮಾಂಡ್ ರೋಹಿತ್ ಶರ್ಮಾ ಕೈಯಲ್ಲಿ ಉಳಿಯಲಿದೆ. ಇದಲ್ಲದೇ ಶುಭಮನ್ ಗಿಲ್, ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ಶ್ರೇಯಸ್ ಅಯ್ಯರ್ ಅವರಿಗೆ ಸ್ಥಾನ ನೀಡಬಹುದು. ಇದರೊಂದಿಗೆ ರಿಷಬ್ ಪಂತ್ ಕೂಡ ತಂಡದಲ್ಲಿ ಸ್ಥಾನ ಪಡೆಯಬಹುದು.
ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಅರ್ಷದೀಪ್ ಸಿಂಗ್ ಮತ್ತು ಜಸ್ಪ್ರೀತ್ ಬುಮ್ರಾ ಭಾರತ ತಂಡದ 4 ವೇಗದ ಬೌಲರ್ಗಳು ತಂಡದಲ್ಲಿ ಸ್ಥಾನ ಪಡೆಯಲಿದ್ದಾರೆ. ಆದರೆ ಸ್ಪಿನ್ನರ್ಗಳಲ್ಲಿ ಕುಲದೀಪ್ ಯಾದವ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್ ಮತ್ತು ವರುಣ್ ಚಕ್ರವರ್ತಿ ಅವರಲ್ಲಿ ಯಾವ ಮೂವರಿಗೆ ಸ್ಥಾನ ಸಿಗಲಿದೆ ಎಂಬುದು ಕುತೂಹಲ ಮೂಡಿಸಿದೆ.
ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ ಮತ್ತು ಕುಲದೀಪ್ ಯಾದವ್ ಅವರ ಫಿಟ್ನೆಸ್ ಇನ್ನೂ ಪ್ರಶ್ನೆಯಲ್ಲೇ ಇದೆ. ಈ ಆಟಗಾರರು ಸಂಪೂರ್ಣ ಫಿಟ್ ಆಗಿದ್ದರೆ ತಂಡದಲ್ಲಿ ಸ್ಥಾನ ಪಡೆಯಲಿದ್ದಾರೆ. ಇದುವರೆಗಿನ ವರದಿಗಳ ಪ್ರಕಾರ ಈ ಆಟಗಾರರ ಗಾಯಗಳ ಕುರಿತು ಹಲವು ರೀತಿಯ ಅಪ್ಡೇಟ್ಗಳು ಬೆಳಕಿಗೆ ಬರುತ್ತಿವೆ.